ಕುಂದಾಪುರ: ಯುಗಾದಿ ಹಬ್ಬವನ್ನು ನೆಪವಾಗಿಟ್ಟುಕೊಂಡು ಪ್ರತಿವರ್ಷ ಯಕ್ಷಕಲಾರಾಧನೆ ನಡೆಸುವುದು ಹೆಚ್ಚು ಅರ್ಥಪೂರ್ಣವಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.ಅವರು ಇಲ್ಲಿನ ಕಾರ್ಕಡದಲ್ಲಿ ಕೋಟ ಸಾಲಿಗ್ರಾಮ ಹದಿನಾಲ್ಕು ಗ್ರಾಮಗಳ ಯಕ್ಷಗಾನ ಕಲಾಭಿಮಾನಿಗಳು ಆಯೋಜಿಸಿದ್ದ ಸೌರಮಾನ ಯುಗಾದಿ ಯಕ್ಷಗಾನ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳನ್ನು ಅಭಿನಂದಿಸಿ ಮಾತನಾಡುತಿದ್ದರು.ಯುಗಾದಿಯ ಸಂದರ್ಭದಲ್ಲಿ ಹೊಸತನದ ಜೊತೆಗೆ ನಮ್ಮ ಹಿರಿಯರ ಚಿಂತನೆಗಳನ್ನು ಸಮಾಜಕ್ಕೆ ನೆನಪಿಸುವ ಕಾರ್ಯ ಆಗಬೇಕಿದೆ, ಯಕ್ಷಗಾನದಂತಹ ಕಲಾರಾಧನೆ, ಆಚರಣೆಗಳು ನಮ್ಮ ಪುರಾತನ ಸಂಸ್ಕೃತಿಯ ಪ್ರತೀಕಗಳಾಗಿವೆ, ಅವುಗಳನ್ನು ಮುಂದಿನ ತಲೆಮಾರಿಗೆ ದಾಟಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಯಕ್ಷಾಭಿಮಾನಿಗಳಾದ ರಾಘವೇಂದ್ರ ಮಧ್ಯಸ್ಥ ಪಾರಂಪಳ್ಳಿ, ಆನಂದ್ ಆಚಾರ್, ಎಚ್. ನಾಗರಾಜ್ ಹಂದೆ, ಗಣೇಶ್ ಕಿಣಿ, ಶ್ರೀಕಾಂತ್ ಐತಾಳ್, ರಮೇಶ್ ಭಂಡಾರಿ, ಸಿ.ಸೂರ್ಯನಾರಾಣ ಮಯ್ಯ, ಕೆ.ನಾಗರಾಜ ಸೋಮಯಾಜಿ ಮತ್ತಿತರರನ್ನು ಅಭಿನಂದಿಸಲಾಯಿತು.ವಿಶೇಷವಾಗಿ ಇತ್ತೀಚಿಗೆ ಸಾಲಿಗ್ರಾಮ ದೇಗುಲದ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶಾಲಿಗಳಾದ ಇಂದ್ರಪ್ರಸ್ಥ ಪ್ರಕಾಶ್ ಮಯ್ಯ ಹರ್ತಟ್ಟು ದಂಪತಿ, ಸಂಘಟಕ ಕೆ.ತಾರಾನಾಥ ಹೊಳ್ಳ ದಂಪತಿಗಳನ್ನು ಸನ್ಮಾನಿಸಲಾಯಿತು. ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್. ಸುಜಯೀಂದ್ರ ಹಂದೆ ಅಭಿನಂದನಾ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಮಾಧುರಿ ಶ್ರೀರಾಮ್ ನಿರೂಪಿಸಿದರು. ಯಕ್ಷಾರಾಧಕ ಎಚ್. ಜನಾರ್ದನ ಹಂದೆ ವಂದಿಸಿದರು. ನಂತರ ಪೆರ್ಡೂರಿನ ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿಯಿಂದ ಚಂದ್ರಹಾಸ ಚರಿತ್ರೆ, ರತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು. ಗೆಳೆಯರ ಬಳಗ ಕಾರ್ಕಡ, ಕರ್ನಾಟಕ ಯಕ್ಷಧಾಮ ಮಂಗಳೂರು ಸಹಕಾರ ನೀಡಿತು.
ಯುಗಾದಿ ಹಿನ್ನೆಲೆಯಲ್ಲಿ ಯಕ್ಷಾರಾಧನೆ ಅರ್ಥಪೂರ್ಣ: ಕಲ್ಕೂರ
ಕಾರ್ಕಡದಲ್ಲಿ ಕೋಟ ಸಾಲಿಗ್ರಾಮ ಹದಿನಾಲ್ಕು ಗ್ರಾಮಗಳ ಯಕ್ಷಗಾನ ಕಲಾಭಿಮಾನಿಗಳು ಆಯೋಜಿಸಿದ್ದ ಸೌರಮಾನ ಯುಗಾದಿ ಯಕ್ಷಗಾನ ಕಾರ್ಯಕ್ರಮ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.