ಅಂಗನವಾಡಿ ಮಕ್ಕಳ ಜತೆ ಜಿಪಂ ಸಿಇಒ ಡಾ.ದಿಲೀಷ್ ಶಶಿ ಸಂವಾದ

| Published : Sep 05 2025, 01:00 AM IST

ಸಾರಾಂಶ

ಅಡುಗೆಕೋಣೆ ಕಾಮಗಾರಿ ಪರಿಶೀಲಿಸಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಬಿಸಿಯೂಟ ತಯಾರಿಕೆಗೆ ಅನುವು ಮಾಡಿಕೊಡುವಂತೆ ಸೂಚಿಸಿದರು.

ಶಿರಸಿ: ತಾಲೂಕಿನ ವಿವಿಧ ಗ್ರಾಪಂಗಳಿಗೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ ಭೇಟಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ ಅಗತ್ಯ ಸಲಹೆ-ಸೂಚನೆ ನೀಡಿದರು.ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪುನಶ್ಚೇತನಗೊಳಿಸಲಾದ ಕಲಗಾರ ಗ್ರಾಮದ ಕಲ್ಯಾಣಿ ಕಾಮಗಾರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಕಡಕೋಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಗತಿಯಲ್ಲಿರುವ ಅಡುಗೆಕೋಣೆ ಕಾಮಗಾರಿ ಪರಿಶೀಲಿಸಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಬಿಸಿಯೂಟ ತಯಾರಿಕೆಗೆ ಅನುವು ಮಾಡಿಕೊಡುವಂತೆ ಸೂಚಿಸಿದರು. ಈ ವೇಳೆ ಅಂಗನವಾಡಿ ಕೇಂದ್ರ ಹಾಗೂ ಶಾಲಾ ಕೊಠಡಿಗಳಲ್ಲಿ ಮಕ್ಕಳೊಂದಿಗೆ ಸಂವಹನ ನಡೆಸಿದರು.

ಇನ್ನು ಹುಲೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಟ್ಟಡ ಹಾಗೂ ಅಲ್ಲಿನ ಸುವ್ಯವಸ್ಥೆ ಕುರಿತು ಪರಿಶೀಲಿಸಿ ಕುಂದುಕೊರತೆ ಬಗ್ಗೆ ಮಾಹಿತಿ ಪಡೆದರು.

ಔಷಧಿ ಮಳಿಗೆಯಲ್ಲಿ ಅವಶ್ಯಕತೆಗೆ ತಕ್ಕಂತೆ ಔಷಧಿ ಪೂರೈಕೆ, ರೋಗಿಗಳಿಗೆ ಬೆಡ್ ವ್ಯವಸ್ಥೆ, ಚಿಕಿತ್ಸಾ ಸಲಕರಣೆ ಪರಿಶೀಲಿಸಿ ಯಾವುದೇ ಕುಂದುಕೊರತೆಯಾಗದಂತೆ ಚಿಕಿತ್ಸೆ ನೀಡಲು ಸಿದ್ಧರಿರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಇನ್ನು ಹುಲೇಕಲ್ ಗ್ರಾಮದಲ್ಲಿ ಸಂಜೀವಿನಿ ಒಕ್ಕೂಟದಡಿ ಕೈಗೊಳ್ಳಲಾದ ಎಣ್ಣೆ ಹಾಗೂ ಹಿಟ್ಟಿನ ಗಿರಣಿಗೆ ಭೇಟಿ ನೀಡಿ ಮಹಿಳೆಯರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಇಂತಹ ಅಭಿವೃದ್ಧಿ ಚಟುವಟಿಕೆಗಳು ಇನ್ನು ಹೆಚ್ಚು ಅನುಕೂಲ ಕಲ್ಪಿಸುವಂತಾಗಲಿ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಹೆಣ್ಣುಮಕ್ಕಳ ವಸತಿ ನಿಲಯದಲ್ಲಿ ಕಟ್ಟಡದಲ್ಲಿ ನೀರು ಸೋರಿಕೆ ತಡೆಗಟ್ಟಿ ಈ ಕುರಿತು ಶೀಘ್ರ ಮಾಹಿತಿ ಜಿಲ್ಲಾ ಪಂಚಾಯತ್ ಕ್ಕೆ ನೀಡಲು ಸೂಚನೆ ನೀಡಿದರು. ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಬಿಸಿನೀರು, ಆಹಾರ ಪದಾರ್ಥ ಪರಿಶೀಲಿಸಿ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆಯಾಗದಂತೆ ಆಹಾರ ನೀಡಲು ತಿಳಿಸಿದರು.

ಉಂಚಳ್ಳಿ ಗ್ರಾಪಂ ಹೊಸ ಕಟ್ಟಡ ವೀಕ್ಷಿಸಿ ಪಂಚಾಯತ್ ಕಮಿಟಿ ಹಾಗೂ ಅಧಿಕಾರಿಗಳು ಸಿಬ್ಬಂದಿಗೆ ಅಭಿನಂದಿಸಿದರು. ಈ ವೇಳೆ ಸ್ವಚ್ಛ ಸಂಕೀರ್ಣ ಘಟಕದ ಸಿಬ್ಬಂದಿಗಳ ಕೆಲಸ ಹಾಗೂ ಗ್ರಂಥಾಲಯ ಅಭಿವೃದ್ಧಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ, ಯೋಜನಾಧಿಕಾರಿ ಅಶೋಕ್ ನಾಯ್ಕ, ತಾಪಂ ವ್ಯವಸ್ಥಾಪಕ ಸುಬ್ರಾಯ ಭಟ್, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.