ದಲಿತರ ಬೆಳವಣಿಗೆಗೆ ಅಧಿಕಾರಶಾಹಿ ಅಡ್ಡಿ : ಸಿ.ಜೆ.ಶ್ರೀನಿವಾಸನ್

| N/A | Published : Apr 26 2025, 01:30 AM IST / Updated: Apr 26 2025, 04:24 AM IST

ಸಾರಾಂಶ

ದಲಿತ ಉದ್ದಿಮೆದಾರರ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಅಧಿಕಾರಶಾಹಿ ಅಡ್ಡಿಯಾಗುತ್ತಿದೆ ಎಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜೆ.ಶ್ರೀನಿವಾಸನ್ ಆರೋಪಿಸಿದ್ದಾರೆ.

  ಬೆಂಗಳೂರು : ದಲಿತ ಉದ್ದಿಮೆದಾರರ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಅಧಿಕಾರಶಾಹಿ ಅಡ್ಡಿಯಾಗುತ್ತಿದೆ ಎಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜೆ.ಶ್ರೀನಿವಾಸನ್ ಆರೋಪಿಸಿದ್ದಾರೆ.

ಶುಕ್ರವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳಿಂದಲೇ ದಲಿತರಿಗೆ ಮೋಸವಾಗುತ್ತಿದೆ. ದಲಿತರಿಗೆ ಬರೀ ತಕರಾರು ಇರುವ, ಸಮತಟ್ಟು ಇಲ್ಲದ ಹಾಗೂ ಮೂಲಸೌಕರ್ಯ ಇಲ್ಲದ ಜಮೀನುಗಳನ್ನು ಮಂಜೂರು ಮಾಡುತ್ತಾರೆ. ಇದರಿಂದ ಉದ್ದಿಮೆ ಆರಂಭಕ್ಕೆ ಸಮಸ್ಯೆ ಮತ್ತು ವಿಳಂಬವಾಗುತ್ತದೆ. ಆಗ ಉದ್ಯಮ ಆರಂಭಿಸಲು ವಿಳಂಬ ಮಾಡಿದ್ದಾರೆಂದು ಹೇಳಿ ದಂಡ ವಿಧಿಸಲು ಆರಂಭಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2014ರಲ್ಲಿನ ಕೆಐಎಡಿಬಿ ಮಂಡಳಿ ಸಭೆ ತೀರ್ಮಾನದಂತೆ ಹಳೇ ಕೈಗಾರಿಕಾ ಪ್ರದೇಶದಲ್ಲಿ ಲಭ್ಯವಿರುವ 400 ಎಕರೆ ಜಮೀನು ಪೈಕಿ ಶೇ.25ರಷ್ಟು ಅಂದರೆ 100 ಎಕರೆ ಜಮೀನು ದಲಿತರಿಗೆ ಹಂಚಿಕೆ ಮಾಡದೆ ಅನ್ಯಾಯ ಮಾಡಲಾಗಿದೆ. ಕೈಗಾರಿಕೆ ಪ್ರದೇಶಗಳಲ್ಲಿ ಶೇ.25ರಷ್ಟು ದಲಿತರಿಗೆ ನೀಡಬೇಕು ಎಂಬ ನಿಯಮವಿದೆ. ಆದರೆ, ಬಲ್ಕ್ ಅಲಾಟ್‌ಮೆಂಟ್ ನೆಪದಲ್ಲಿ ನಮಗೆ ಜಮೀನು ಮಂಜೂರು ಮಾಡುವುದಿಲ್ಲ. ಜಮೀನು ಮಂಜೂರು ಮಾಡಿದರೂ ಕೆಎಸ್‌ಎಫ್‌ಸಿಯಿಂದ ತ್ವರಿತವಾಗಿ ಹಣಕಾಸು ನೆರವು ಸಿಗುವುದಿಲ್ಲ ಎಂದು ಶ್ರೀನಿವಾಸನ್ ತಿಳಿಸಿದರು.

ಹೌಸಿಂಗ್ ಮತ್ತು ವಾಣಿಜ್ಯ ನಿವೇಶನಗಳನ್ನು ದಲಿತರಿಗೆ ಮಂಜೂರು ಮಾಡುತ್ತಿಲ್ಲ. ದಲಿತರ ಉದ್ಯಮ ಪ್ರಸ್ತಾವನೆಗಳಿಗೆ ಮಂಜೂರಾತಿ ನೀಡಲು ಮಾಡಲು ವಿಳಂಬ ಆಗುತ್ತಿದ್ದು, 300 ಉದ್ದಿಮೆದಾರರಿಗೆ 7 ವರ್ಷಗಳಿಂದ ಹಂಚಿಕೆ ಪತ್ರ ಬಾಕಿ ಇವೆ. ಕೆಎಸ್ಎಫ್‌ಸಿ ನೀಡುತ್ತಿರುವ ಅವಧಿ ಸಾಲಕ್ಕೆ ದಲಿತರಿಗೆ ಸರ್ಕಾರ ನೀಡುತ್ತಿರುವ ಭೂ ಸಹಾಯಧನವನ್ನು ಕೊಲ್ಯಾಟರಲ್ ಸೆಕ್ಯುರಿಟಿಯಾಗಿ ಮತ್ತು ಪ್ರವರ್ತಕರ ಬಂಡವಾಳವಾಗಿ ಪರಿಗಣಿಸುತ್ತಿಲ್ಲ ಎಂದು ಶ್ರೀನಿವಾಸನ್ ಹೇಳಿದರು.

ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಮತ್ತು ಸಚಿವರು ದಲಿತ ಉದ್ದಿಮೆದಾರರ ಪರವಾಗಿದ್ದಾರೆ. ಸಂಬಂಧಿಸಿದ ನೀತಿ ನಿಯಮಗಳನ್ನು ರೂಪಿಸಿ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ. ಆದರೆ ಅವುಗಳು ತಳಮಟ್ಟದಲ್ಲಿ ಪಾಲನೆಯಾಗುತ್ತಿಲ್ಲ. ಇದರಿಂದ ದಲಿತ ಉದ್ದಿಮೆದಾರರು ಹೊಸ ಉದ್ಯಮಗಳ ಸ್ಥಾಪನೆಯಿಂದ ವಂಚಿತರಾಗುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಸಚಿವರ ಮಾತುಗಳನ್ನು ಕೇಳುತ್ತಿಲ್ಲ ಎಂದಾದರೆ ನಮ್ಮ ವ್ಯವಸ್ಥೆಯ ಎಷ್ಟರ ಮಟ್ಟಿಗೆ ಹಾಳಾಗಿದೆ ಎಂಬುದನ್ನು ಯೋಚಿಸಬೇಕು ಹಾಗಾಗಿ ದಲಿತ ಉದ್ದಿಮೆದಾರರ ನೆರವಿಗೆ ಕೂಡಲೇ ಸರ್ಕಾರ ಧಾವಿಸಿ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು ಎಂದರು.

ಮೈಸೂರು ದಲಿತ ಉದ್ಯಮದಾರರ ಸಂಘದ ಅಧ್ಯಕ್ಷ ಮಂಜುನಾಥ ಮಾತನಾಡಿ, ನಮಗೆ ಅಧಿಕಾರಿಗಳಿಂದ ತೊಂದರೆ ಆಗುತ್ತಿದೆ. ಅನುಮತಿ, ಮಂಜೂರಾತಿ, ಸಹಾಯಧನ ವಿತರಣೆ, ಬಿಡುಗಡೆ ಸೇರಿ ದಲಿತರ ಏಳಿಗೆಗೆ ಇರುವ ಯೋಜನೆಗಳ ಜಾರಿ ಮಾಡುವಲ್ಲಿ ಅಧಿಕಾರಿಗಳು ತೊಡಕುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.