ಸಾರಾಂಶ
ನವದೆಹಲಿ: ಐಪಿಎಲ್ ಬಳಿಕ ಭಾರತ ತಂಡದಲ್ಲೂ ಅಬ್ಬರಿಸಲು ಶುರುವಿಟ್ಟಿರುವ ಯುವ ಬ್ಯಾಟರ್ ಅಭಿಷೇಕ್ ಶರ್ಮಾ, ಭವಿಷ್ಯದ ಸೂಪರ್ ಸ್ಟಾರ್ ಆಗ್ತಾರಾ ಎಂಬ ಕುತೂಹಲ ಈಗ ಕ್ರಿಕೆಟ್ ಅಭಿಮಾನಿಗಳಲ್ಲಿದೆ.
ರೋಹಿತ್ ಶರ್ಮಾ ಅವರಿಂದ ತೆರವಾಗಿರುವ ಟಿ20 ತಂಡದ ಆರಂಭಿಕ ಆಟಗಾರನ ಸ್ಥಾನವನ್ನು ಅಭಿಷೇಕ್ ತುಂಬಲಿದ್ದಾರೆ ಎಂಬ ಅಭಿಪ್ರಾಯವೂ ಕ್ರೀಡಾ ತಜ್ಞರು, ಮಾಜಿ ಆಟಗಾರರಿಂದ ವ್ಯಕ್ತವಾಗುತ್ತಿದೆ.ಐಪಿಎಲ್ನಲ್ಲಿ ತಮ್ಮ ಸ್ಫೋಟಕ ಆಟದಿಂದಲೇ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದ ಅಭಿಷೇಕ್ ಭಾರತ ಪರ ತಾವಾಡಿದ 2ನೇ ಪಂದ್ಯದಲ್ಲೇ ಸೆಂಚುರಿ ಸಿಡಿಸಿದ್ದಾರೆ. ತಮ್ಮ ಅತ್ಯಾಕರ್ಷಕ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.
23 ವರ್ಷದ ಪಂಜಾಬ್ ಬ್ಯಾಟರ್ ಅಭಿಷೇಕ್, ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿದವರು. ಯುವರಾಜ್ರನ್ನು ತಮ್ಮ ಗುರು ಎಂದೇ ಕರೆಯುವ ಅಭಿಷೇಕ್, ಕೋವಿಡ್ ಸಮಯದಲ್ಲಿ ಯುವರಾಜ್ರ ಮನೆಯಲ್ಲೇ ತರಬೇತಿ ಪಡೆದಿದ್ದರು.
ಅಭಿಷೇಕ್ ಬಗ್ಗೆ ವೈಯಕ್ತಿಕ ಕಾಳಜಿ ವಹಿಸಿದ್ದ ಯುವಿ, ಅವರ ಆಟದ ಹಿಂದಿರುವ ಶಕ್ತಿ.ಇನ್ನು ಅಭಿಷೇಕ್ ಕೂಡಾ ಯುವರಾಜ್ ಅವರಂತೆಯೇ ಆಲ್ರೌಂಡರ್. ಸ್ಪಿನ್ನರ್ ಆಗಿರುವ ಅಭಿಷೇಕ್ರನ್ನು ಐಪಿಎಲ್ನಲ್ಲಿ ಸನ್ರೈಸರ್ಸ್ ತಂಡ ಬೌಲಿಂಗ್ನಲ್ಲೂ ಬಳಸಿಕೊಂಡಿತ್ತು. ಭಾರತ ತಂಡ ಕೂಡಾ ಅಭಿಷೇಕ್ರನ್ನು ಸಮರ್ಥ ಆಲ್ರೌಂಡರ್ ಆಗಿ ಬಳಸುವ ನಿರೀಕ್ಷೆಯಿದೆ.