ಸಾರಾಂಶ
ಮುಂಬೈ: ವಾಂಖೇಡೆಗಿಂತಲೂ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) ಯೋಜನೆ ರೂಪಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ವಾಂಖೇಡೆ ಕ್ರೀಡಾಂಗಣ ಕೇವಲ 33,000 ಆಸನ ಸಾಮರ್ಥ್ಯ ಹೊಂದಿದೆ. ಹೀಗಾಗಿ ಎಂಸಿಎ 1 ಲಕ್ಷ ಆಸನ ಸಾಮರ್ಥ್ಯವಿರುವ ಮತ್ತೊಂದು ಕ್ರೀಡಾಂಗಣವನ್ನು ವಾಂಖೇಡೆ ಕ್ರೀಡಾಂಗಣದಿಂದ 68 ಕಿ.ಮೀ. ದೂರದ ಥಾಣೆ ಜಿಲ್ಲೆಯ ಅಮಾನೆ ಎಂಬಲ್ಲಿ ನಿರ್ಮಿಸಲು ಚಿಂತನೆ ನಡೆಸುತ್ತಿದೆ. ಇದಕ್ಕಾಗಿ 50 ಎಕರೆ ಜಾಗವನ್ನೂ ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಎಂಸಿಎ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಅನುಮತಿ ಸಿಕ್ಕ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಎಂಸಿಎ ಮೂಲಗಳಿಂದ ತಿಳಿದುಬಂದಿದೆ.
ಕ್ರಿಕೆಟ್ನಂತೆ ಎಲ್ಲಾ ಕ್ರೀಡೆ ಸಮಾನವಾಗಿ ನೋಡಿ: ಶಟ್ಲರ್ ಚಿರಾಗ್
ಮುಂಬೈ: ಥಾಮಸ್ ಕಪ್ ಗೆಲುವು ಕ್ರಿಕೆಟ್ನ ವಿಶ್ವಕಪ್ಗೆ ಸಮ. ಆದರೆ ಕ್ರಿಕೆಟಿಗರಿಗೆ ಸಿಕ್ಕ ಸನ್ಮಾನ ನಮಗೆ ಸಿಕ್ಕಿಲ್ಲ ಎಂದು ಭಾರತದ ತಾರಾ ಶಟ್ಲರ್ ಚಿರಾಗ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ರೋಹಿತ್ ಸೇರಿ ನಾಲ್ವರಿಗೆ ಮಹಾರಾಷ್ಟ ಸರ್ಕಾರ ಸನ್ಮಾನ ಮಾಡಿ, ನಗದು ಬಹುಮಾನ ಘೋಷಿಸಿದ ಬಳಿಕ ಮಹಾರಾಷ್ಟ್ರದ ಚಿರಾಗ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
‘ಥಾಮಸ್ ಕಪ್ ವಿಜೇತ ತಂಡದಲ್ಲಿ ನಾನೊಬ್ಬನೇ ಮಹಾರಾಷ್ಟ್ರದವನು. ವಿಶ್ವಕಪ್ ಗೆದ್ದ ಕ್ರಿಕೆಟಿಗರನ್ನು ಸರ್ಕಾರ ಗೌರವಿಸಿದೆ. ಇದೇ ರೀತಿ ನಮ್ಮನ್ನೂ ಗುರುತಿಸಬೇಕಿತ್ತು. ಸರ್ಕಾರ ಎಲ್ಲಾ ಕ್ರೀಡೆಗಳನ್ನು ಸಮಾನವಾಗಿ ನೋಡಬೇಕು’ ಎಂದಿದ್ದಾರೆ.
ನಾನು ಕ್ರಿಕೆಟ್ ವಿರೋಧಿಯಲ್ಲ. ಆದರೆ ಕ್ರಿಕೆಟಿಗರಿಗೆ ಕೊಡುವ ಬೆಲೆ ಸರ್ಕಾರ ಬ್ಯಾಡ್ಮಿಂಟನ್ ಸಾಧಕರಿಗೆ ಕೊಡುತ್ತಿಲ್ಲ. ಮಹಾರಾಷ್ಟ್ರ ಸರ್ಕಾರ ನಮ್ಮನ್ನು ಸನ್ಮಾನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿರಾಗ್ ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಜೊತೆಗೂಡಿ ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಸೇರಿ ಹಲವು ಜಾಗತಿಕ ಕೂಟಗಳಲ್ಲಿ ಚಾಂಪಿಯನ್ ಆಗಿದ್ದಾರೆ.