ರಣಜಿ ಟ್ರೋಫಿ: ರೈಲ್ವೇಸ್‌ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್‌ ಮುನ್ನಡೆ

| Published : Feb 04 2024, 01:31 AM IST

ಸಾರಾಂಶ

ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 174 ರನ್‌ಗೆ ಆಲೌಟ್‌ ಆದರೂ ಇನ್ನಿಂಗ್ಸ್‌ ಮುನ್ನಡೆ ಪಡೆಯಿತು. ಬಳಿಕ ಮತ್ತೊಮ್ಮೆ ಬೌಲಿಂಗ್‌ನಲ್ಲಿ ಮಾರಕ ದಾಳಿ ಸಂಘಟಿಸಿದ ರಾಜ್ಯ ತಂಡ ರೈಲ್ವೇಸನ್ನು 2ನೇ ಇನ್ನಿಂಗ್ಸಲ್ಲಿ 2ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 209 ರನ್‌ಗೆ ನಿಯಂತ್ರಿಸಿದೆ.

ಸೂರತ್‌: ತೀವ್ರ ಬ್ಯಾಟಿಂಗ್‌ ವೈಫಲ್ಯದ ಹೊರತಾಗಿಯೂ ರೈಲ್ವೇಸ್‌ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕಕ್ಕೆ ಇನ್ನಿಂಗ್ಸ್‌ ಮುನ್ನಡೆ ಲಭಿಸಿದೆ. ಕಡಿಮೆ ಮೊತ್ತದ ಪಂದ್ಯ ಸದ್ಯ ಕುತೂಹಲ ಘಟ್ಟ ತಲುಪಿದ್ದು, ಗೆಲುವಿಗಾಗಿ ಉಭಯ ತಂಡಗಳು ಹೋರಾಡುತ್ತಿವೆ.

ರೈಲ್ವೇಸನ್ನು 155ಕ್ಕೆ ನಿಯಂತ್ರಿಸಿದ ಬಳಿಕ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಶನಿವಾರ 174 ರನ್‌ಗೆ ಆಲೌಟಾಯಿತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ರೈಲ್ವೇಸ್‌ 8 ವಿಕೆಟ್‌ಗೆ 209 ರನ್‌ ಗಳಿಸಿದ್ದು, 190 ರನ್‌ ಮುನ್ನಡೆಯಲ್ಲಿದೆ.

ಮೊದಲ ದಿನದಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು ಕೇವಲ 90 ರನ್‌ ಕಲೆಹಾಕಿದ್ದ ಕರ್ನಾಟಕದ ಶನಿವಾರ ಕೆಳಕ್ರಮಾಂಕದ ಬ್ಯಾಟರ್‌ಗಳು ನೆರವಾದರು. ಶ್ರೀನಿವಾಸ್‌ ಶರತ್‌ 24, ವೈಶಾಕ್‌ 24 ರನ್‌ ಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ಆಕಾಶ್‌ ಪಾಂಡೆ 5, ಅಯಾನ್‌ ಚೌಧರಿ 4 ವಿಕೆಟ್‌ ಪಡೆದರು.

ಮಾರಕ ದಾಳಿ: ಬಳಿಕ 2ನೇ ಇನ್ನಿಂಗ್ಸ್‌ನಲ್ಲೂ ರೈಲ್ವೇಸನ್ನು ರಾಜ್ಯದ ಬೌಲರ್‌ಗಳು ಕಾಡಿದರು. ಮೊಹಮದ್‌ ಸೈಫ್‌ (ಔಟಾಗದೆ 51), ಸೂರಜ್‌ ಅಹುಜಾ (48) ಆಕರ್ಷಕ ಆಟದಿಂದಾಗಿ ತಂಡ 200ರ ಗಡಿ ದಾಟಿದ್ದು, ಕರ್ನಾಟಕಕ್ಕೆ ದೊಡ್ಡ ಗುರಿ ನೀಡಲು ಹೋರಾಡುತ್ತಿದೆ. ವೈಶಾಕ್‌ 3, ವಿದ್ವತ್‌ 2 ವಿಕೆಟ್‌ ಕಿತ್ತರು.

ಸ್ಕೋರ್‌: ರೈಲ್ವೇಸ್‌ 155/10 ಮತ್ತು 209/8 (2ನೇ ದಿನದಂತ್ಯಕ್ಕೆ) (ಸೈಫ್‌ 51*, ವೈಶಾಕ್‌ 3-45), ಕರ್ನಾಟಕ 174/10 (ವೈಶಾಕ್‌ 24, ಆಕಾಶ್‌ 5-63)