ಸಾರಾಂಶ
ನವದೆಹಲಿ: 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಬರೋಬ್ಬರಿ 125 ಕೋಟಿ ರು. ಬಹುಮಾನವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ .
ಭಾನುವಾರ ತಮ್ಮ ‘ಎಕ್ಸ್’ ಖಾತೆಯಲ್ಲಿ ಈ ವಿಷಯ ಹಂಚಿಕೊಂಡ ಶಾ, ‘ರೋಹಿತ್ ಶರ್ಮಾ ಅವರ ಅಮೋಘ ನಾಯಕತ್ವದಲ್ಲಿ ಈ ತಂಡ ಅಭೂತಪೂರ್ವ ಪ್ರದರ್ಶನ ತೋರಿ, ಅಜೇಯವಾಗಿ ವಿಶ್ವಕಪ್ ಗೆದ್ದ ಮೊದಲ ತಂಡ ಎನ್ನುವ ಸಾಧನೆ ಮಾಡಿದೆ.
ತಂಡ ತನ್ನ ಆಟದ ಮೂಲಕವೇ ಟೀಕಾಕಾರರ ಬಾಯಿ ಮುಚ್ಚಿಸಿ ಎಲ್ಲರಿಗೂ ಸ್ಫೂರ್ತಿಯಾಗಿದೆ. ವಿಶ್ವಕಪ್ ವಿಜೇತರಿಗೆ 125 ಕೋಟಿ ರು. ಬಹುಮಾನ ಘೋಷಿಸಲು ಬಹಳ ಸಂತೋಷವಾಗುತ್ತಿದೆ’ ಎಂದು ಬರೆದಿದ್ದಾರೆ.
ಮುಂಬೈನಲ್ಲಿ ಆಟಗಾರರ ಮೆರವಣಿಗೆ?
ಭಾರತ ತಂಡ ತವರಿಗೆ ವಾಪಸಾಗುತ್ತಿದ್ದಂತೆ ಅದ್ಧೂರಿ ಅಭಿನಂದನಾ ಸಮಾರಂಭ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಈ ಸಮಾರಂಭದಲ್ಲೇ ಜಯ್ ಶಾ, ತಂಡಕ್ಕೆ 125 ಕೋಟಿ ರು. ಬಹುಮಾನ ವಿತರಿಸಲಿದ್ದಾರೆ. ಇನ್ನು ಮುಂಬೈ ಏರ್ಪೋರ್ಟ್ನಿಂದ ಇಡೀ ತಂಡವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬಿಸಿಸಿಐ ಕೇಂದ್ರ ಕಚೇರಿ ಇರುವ ವಾಂಖೇಡೆ ಕ್ರೀಡಾಂಗಣದ ಆವರಣಕ್ಕೆ ಕರೆದೊಯ್ಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.