ಸಾರಾಂಶ
ಬೆಂಗಳೂರು : ಪೆಟ್ರೋಲ್ ಟ್ಯಾಂಕರ್ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಉರುಳಿ ಬಿದ್ದ ಪರಿಣಾಮ ಭಾರೀ ಪ್ರಮಾಣದಲ್ಲಿ ಪೆಟ್ರೋಲ್ ಸೋರಿಕೆಯಾಗಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಮಂಗಳೂರಿನಿಂದ ತಮಿಳುನಾಡಿಗೆ ಹೋಗುತ್ತಿದ್ದ ಪೆಟ್ರೋಲ್ ಟ್ಯಾಂಕರ್ ವಾಹನವೊಂದು ವೀರಸಂದ್ರ ಜಂಕ್ಷನ್ ಬಳಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದಿದ್ದ ಪರಿಣಾಮ ಭಾರೀ ಪ್ರಮಾಣದ ಪೆಟ್ರೋಲ್ ಟ್ಯಾಂಕರ್ನಿಂದ ಸೋರಿಕೆಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಅಧಿಕಾರಿಗಳು ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳ ಪರಿಣಾಮ ಭಾರೀ ಅನಾಹುತ ತಪ್ಪಿಸಿದೆ. ಬಳಿಕ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸರು ಕ್ರೇನ್ ತರಿಸಿ ಟ್ಯಾಂಕರ್ ವಾಹನವನ್ನು ಮೇಲೆತ್ತಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಂಡಿದ್ದಾರೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಂತರ ಸೋರಿದ್ದ ಪೆಟ್ರೋಲ್ಗೆ ರಾಸಾಯನಿಕ ಮಿಶ್ರಿತ ದ್ರಾವಣ ಸಿಂಪಡಿಸಿ ಪೆಟ್ರೋಲ್ ಅಗ್ನಿಗೆ ಸ್ಪಂದಿಸದಂತೆ ಕ್ರಮ ವಹಿಸಿದರು. ಸಾರ್ವಜನಿಕರೂ ಪೊಲೀಸರಿಗೆ ಸಹಕಾರ ನೀಡಿದ್ದು, ಸಮರೋಪಾದಿಯಲ್ಲಿ ನಡೆದ ಕಾರ್ಯಾಚರಣೆ ನಡೆದಿದೆ.