ಸಾರಾಂಶ
ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದ ಮೇಲಿನ ತನ್ನ ಹಕ್ಕನ್ನು ಭಾರತ ಎಂದೂ ಕೈಬಿಡದು ಎಂದು ಪುನರುಚ್ಚರಿಸಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್, ಇದೇ ವೇಳೆ ನಾವು ಸೇನೆಯನ್ನು ಬಳಸಿ ಪಿಒಕೆ ವಶಪಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ನೋಡಿ, ಪಿಒಕೆ ಜನರೇ ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆ ಜತೆ ಭಾನುವಾರ ಮಾತನಾಡಿದ ಅವರು, ‘ಕಣಿವೆ ರಾಜ್ಯದಲ್ಲಿ ಇದೀಗ ಕಾನೂನು ಮತ್ತು ಸುವ್ಯವಸ್ಥೆ ಭಾರೀ ಪ್ರಮಾಣದಲ್ಲಿ ಸುಧಾರಣೆಯಾಗಿದೆ. ಕೇಂದ್ರಾಡಳಿತ ಪ್ರದೇಶದ ಮೇಲೆ ಹೇರಿರುವ ಸಶಸ್ತ್ರ ಪಡೆಗಳ ವಿಶೇಷ ಕಾಯ್ದೆ ಅಗತ್ಯವಿಲ್ಲ ಪರಿಸ್ಥಿತಿ ಕೂಡಾ ಶೀಘ್ರ ನಿರ್ಮಾಣವಾಗಲಿದೆ. ರಾಜ್ಯದಲ್ಲಿ ಆರ್ಥಿಕತೆಯಲ್ಲಿ ಉಂಟಾಗಿರುವ ಬೆಳವಣಿಗೆಗಳು ಸಹಜವಾಗಿಯೇ ಪಿಒಕೆ ಜನರೇ ನಮ್ಮ ಭೂಭಾಗವನ್ನು ಭಾರತದೊಂದಿಗೆ ವಿಲೀನ ಮಾಡಿ ಎಂದು ಬೇಡಿಕೆ ಇಡುವ ದಿನಗಳು ದೂರವಿಲ್ಲ’ ಎಂದರು.
ಈ ಮುಂಚೆ ಅವರು ಪಿಒಕೆಗೆ ನುಗ್ಗಿ ಉಗ್ರರ ದಮನ ಮಾಡಲು ಭಾರತ ಸಿದ್ಧವಿದೆ ಎಂಬ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು.