ಪುಸ್ತಕಗಳನ್ನು ಓದುವ ಕಾಳಜಿಯನ್ನು ತೋರಬೇಕು: ಮಡೆಯಂಡ ಉಮ್ಮಯ್ಯ ತಿಮ್ಮಯ್ಯ

| Published : May 07 2024, 01:07 AM IST

ಪುಸ್ತಕಗಳನ್ನು ಓದುವ ಕಾಳಜಿಯನ್ನು ತೋರಬೇಕು: ಮಡೆಯಂಡ ಉಮ್ಮಯ್ಯ ತಿಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಓದುವ ಆಸಕ್ತಿ ಮೂಡಿಸುವ ಕಾಳಜಿಯನ್ನು ಪೋಷಕರು ಬೆಳೆಸುವುದು ಮುಖ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕಿ ಮಡೆಯಂಡ ಉಮ್ಮಯ್ಯ ತಿಮ್ಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಗಳಲ್ಲಿ ತಂದೆ, ತಾಯಿ, ಮಕ್ಕಳು ಎಲ್ಲರೂ ಮೊಬೈಲ್ ನಲ್ಲೇ ಮುಳುಗಿರುತ್ತಾರೆ. ಮೊಬೈಲ್ ನ್ನು ಬಿಟ್ಟು ಪುಸ್ತಕಗಳನ್ನು ಓದುವ ಮತ್ತು ಮಕ್ಕಳಿಗೆ ಓದುವ ಆಸಕ್ತಿಯನ್ನು ಮೂಡಿಸುವ ಕಾಳಜಿಯನ್ನು ಪೋಷಕರು ತೋರಬೇಕು ಎಂದು ಎಂ.ಬಾಡಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿವೃತ್ತ ಮುಖ್ಯ ಶಿಕ್ಷಕಿ ಮಡೆಯಂಡ ಉಮ್ಮಯ್ಯ ತಿಮ್ಮಯ್ಯ ಕಿವಿಮಾತು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 90ನೇ ಪುಸ್ತಕ ಹಾಗೂ ಲೇಖಕಿ ಯಶೋಧ ಪೇರಿಯಂಡ ಅವರ ಎರಡನೇ ಪುಸ್ತಕ ‘ಮಕ್ಕಕ್ ಕೊದಿಮೊದ’ ವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ, ಕಥೆ, ಕವನ ರಚನೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಆದರೆ ಬರಹಗಾರರಿಗಷ್ಟೇ ಆಸಕ್ತಿ ಇದ್ದರೆ ಸಾಲದು. ಓದುಗರ ಸಂಖ್ಯೆಯೂ ಹೆಚ್ಚಾಗಬೇಕು. ಇಂದು ಮೊಬೈಲ್ ನಲ್ಲೇ ಕಾಲಕಳೆಯುವ ಹೆಚ್ಚು ಮಂದಿ ಇದ್ದಾರೆ, ಜ್ಞಾನಾರ್ಜನೆಗೆ ಪುಸ್ತಕಗಳನ್ನು ಓದಬೇಕು ಎಂದು ತಿಳಿಸಿದರು.

‘ಮಕ್ಕಕ್ ಕೊದಿಮೊದ’ ಕೊಡವ ಪುಸ್ತಕದ ಲೇಖಕಿ ಯಶೋಧ ಪೇರಿಯಂಡ ಮಾತನಾಡಿ, ಹಿಂದಿನ ಕಾಲದಲ್ಲಿ ಪುಸ್ತಕ ಓದುಗರ ಸಂಖ್ಯೆ ಹೆಚ್ಚಿತ್ತು. ಅಲ್ಲದೇ ತಂದೆ, ತಾಯಂದಿರು, ಅಜ್ಜ, ಅಜ್ಜಿಯಂದಿರು ಮಕ್ಕಳಿಗೆ ಕಥೆಯನ್ನು ಹೇಳಿಕೊಡುವ ರೂಢಿ ಇತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಮಕ್ಕಳು ಮೊಬೈಲ್, ಟಿ.ವಿ ಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳಿಗೆ ಪರಿಸರ, ಪ್ರಾಣಿ ಪಕ್ಷಿಗಳ ಮೇಲೆ ಪ್ರೀತಿ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗಾಗಿ ಪುಸ್ತಕವನ್ನು ಬರೆಯಲಾಗಿದೆ ಎಂದರು.

ಭಾಗಮಂಡಲ ಶ್ರೀ ಇಗ್ಗುತ್ತಪ್ಪ ಎಜುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಚೀಯಕಪೂವಂಡ ಮಿಥುನ್ ಚಂಗಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟದ ನೇತೃತ್ವದಲ್ಲಿ ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸರ್ಕಾರದ ಯಾವುದೇ ಅನುದಾನವಿಲ್ಲದೆ 90 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿರುವುದು ಶ್ಲಾಘನೀಯ ಎಂದರು.

ಬಲಮುರಿ ಅಯ್ಯಪ್ಪ ಸ್ವಸಹಾಯ ಸಂಘದ ಸದಸ್ಯರಾದ ಚಂಗಂಡ ರೇಷ್ಮಾ ತಮ್ಮಯ್ಯ ಮಾತನಾಡಿ, ಎಲ್ಲರಲ್ಲೂ ಒಂದೊಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಆದರೆ ಬರೆಯುವ ಕಲೆ ಕೆಲವರಿಗೆ ಮಾತ್ರ ಬರುತ್ತದೆ. ಬರೆಯುವವರ ಸಂಖ್ಯೆಯಂತೆ ಓದುಗರ ಸಂಖ್ಯೆಯೂ ಹೆಚ್ಚಾಗಬೇಕು. ಕಲೆ ಇದ್ದರೂ ಪ್ರೋತ್ಸಾಹ ನೀಡುವವರು ಇರುವುದಿಲ್ಲ. ವೇದಿಕೆ ಸಿಕ್ಕಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟದ ವತಿಯಿಂದ ಈವರೆಗೆ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ 90 ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದ್ದು, 100ನೇ ಪುಸ್ತಕಕ್ಕೆ ಬರಹಗಾರರಿಂದ ಲೇಖನಗಳನ್ನು ಆಹ್ವಾನಿಸುವುದಾಗಿ ತಿಳಿಸಿದ್ದಾರೆ.

ಕೊಡಗಿನ ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ, ಪರಂಪರೆ, ಇತಿಹಾಸ, ಸೇರಿದಂತೆ ಸಮಾಜಮುಖಿ ಬರಹಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತರಲು ನಿರ್ಧರಿಸಲಾಗಿದೆ. 100 ನೇ ಪುಸ್ತಕವಾಗಿ 100 ಬರಹಗಾರರ ಲೇಖನಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಿ ಬಿಡುಗಡೆಗೊಳಿಸಲಾಗುವುದು. ಬರಹ ಯಾವ ಭಾಷೆಯಲ್ಲಿ ಬೇಕಾದರು ಇರಬಹುದು.

ಆಸಕ್ತ ಬರಹಗಾರರು ಯಾವುದೇ ಜಾತಿ, ಮತ, ಭೇದವಿಲ್ಲದೆ ತಮ್ಮ ಬರಹಗಳನ್ನು ಟೈಪ್ ಮಾಡಿ ಅಥವಾ ಬರೆದು ಕೊಡವ ಮಕ್ಕಡ ಕೂಟ, ಕೆ.ಬಾಡಗ, ಎಫ್.ಎಂ.ಕೆ.ಎಂ..ಸಿ ಕಾಲೇಜು ಪೋಸ್ಟ್, ಮಡಿಕೇರಿ, ಕೊಡಗು ಈ ವಿಳಾಸಕ್ಕೆ ಅಥವಾ ಬೊಳ್ಳಜಿರ ಬಿ.ಅಯ್ಯಪ್ಪ 9880778074 ಮೊ. ಸಂಖ್ಯೆಗೆ ವಾಟ್ಸ್ ಅಪ್ ಮಾಡಬಹುದು. ಲೇಖನಗಳನ್ನು ಜೂ. 30ರೊಳಗೆ ಕಳುಹಿಸಿ ಕೊಡಬಹುದಾಗಿದೆ ಎಂದು ಅಯ್ಯಪ್ಪ ತಿಳಿಸಿದರು.

ಸಮಾಜ ಸೇವಕರಾದ ಮಡೆಯಂಡ ಸೂರಜ್ ತಿಮ್ಮಯ್ಯ ಉಪಸ್ಥಿತರಿದ್ದರು.