ಸಾರಾಂಶ
ಬೀರೇನಹಳ್ಳಿ ಗ್ರಾಮಸ್ಥರಿಂದ ಬೆಸ್ಕಾಂ ಮುಖ್ಯ ಇಂಜಿನಿಯರ್ ಗೆ ಮನವಿ
ಕನ್ನಡಪ್ರಭ ವಾರ್ತೆ, ಹಿರಿಯೂರುಸರತಿ ಪ್ರಕಾರ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ತಾಲೂಕಿನ ಬೀರೇನಹಳ್ಳಿ ಗ್ರಾಮದ ರೈತರು ಶನಿವಾರ ಬೆಸ್ಕಾಂ ಮುಖ್ಯ ಇಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು. ಬೀರೇನಹಳ್ಳಿ ಗ್ರಾಮದ ಎಫ್ 4 ವಿದ್ಯುತ್ ಸರಬರಾಜು ಮಾರ್ಗದಲ್ಲಿ ವಿದ್ಯುತ್ ನ ಕೊರತೆ ಉಂಟಾಗಿದ್ದು ರೈತರು ಜಮೀನನಲ್ಲಿರುವ ಫಸಲುಗಳ ಉಳಿಸಿಕೊಳ್ಳಲು ತೊಂದರೆಯಾಗಿದೆ. ಈ ಮೊದಲು ಎರಡು ಭಾಗಗಳಾಗಿ ವಿಂಗಡಿಸಿ ವಿದ್ಯುತ್ ನೀಡಲಾಗುತ್ತಿತ್ತು. ಆದರೆ ಕಳೆದ ಒಂದು ವಾರದಿಂದ ಒಂದೇ ಬಾರಿಗೆ ಎರಡೂ ಕಡೆಗೂ ವಿದ್ಯುತ್ ನೀಡುತ್ತಿರುವುದರಿಂದ ವೋಲ್ಟೇಜ್ ಸಮಸ್ಯೆ ಉಂಟಾಗಿದ್ದು ಪಂಪ್ ಸೆಟ್ ಗಳಿಗೂ, ಕುಡಿವ ನೀರಿಗೂ ತೊಂದರೆಯಾಗಿದೆ. ವೋಲ್ಟೇಜ್ ಕೊರತೆ ಕಾರಣಕ್ಕೆ ಹಲವು ಕಡೆ ಮೋಟಾರು ಪಂಪ್ ಸೆಟ್ಟುಗಳು ಸುಟ್ಟು ಹೋಗಿವೆ. ಸಂಕಷ್ಟ ಸಂದರ್ಭದಲ್ಲಿ ರೈತರು ಕೃಷಿ ಮಾಡುವುದು ಬಿಟ್ಟು ಮೋಟಾರು ಪಂಪು ದುರಸ್ಥಿ ಮಾಡಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆದ್ದರಿಂದ ಮೊದಲಿನಂತೆ ಸರತಿ ಪ್ರಕಾರ ವಿದ್ಯುತ್ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ವೇಳೆ ಮೇಟಿಕುರ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಎನ್. ಹನುಮಂತರಾಯಪ್ಪ, ತಿಪ್ಪೇಸ್ವಾಮಿ, ಜಗದೀಶ್, ಚಿದಾನಂದ, ಶ್ರೀನಿವಾಸ್, ಬಸವರಾಜ್, ಲಿಂಗಪ್ಪ, ಮಲ್ಲಯ್ಯ, ಸತೀಶ್ ಇದ್ದರು.