ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ವಿದ್ಯಾಭಾರತಿಯ ಉಚ್ಛ ಶಿಕ್ಷಾ ಸಂಸ್ಥಾನ್ ಮತ್ತು ಪೂರ್ಣಪ್ರಜ್ಞಾ ಕಾಲೇಜುಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಎ.ವಿ ಹಾಲ್ನಲ್ಲಿ ಸೋಮವಾರ ‘ವಿಕಸಿತ ಭಾರತಕ್ಕಾಗಿ ಶಿಕ್ಷಕರ ಪಾತ್ರ’ದ ಕುರಿತು ಅಧ್ಯಾಪಕರ ಜೊತೆ ಸಂವಾದ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಸಂವೇದನಾ ಪೌಂಡೇಶನ್ನ ಸಂಚಾಲಕ ಪ್ರಕಾಶ್ ಮಲ್ಪೆ ಮಾತನಾಡಿ, ರಾಷ್ಟ್ರ ಒಂದರ ಸಾಂಸ್ಕೃತಿಕ ವಿಕಾಸಕ್ಕೆ ಜಗತ್ತಿನ ಮೊದಲ ಉದಾಹರಣೆ ಭಾರತ. ಆರಂಭದಲ್ಲಿ ಆಕ್ರಮಣಕಾರಿಗಳಾಗಿ ಬಂದು, ನಂತರ ಆಶ್ರಯ ಕೋರಿ ಬಂದ ಪರ್ಷಿಯನ್ನರೇ ಮೊದಲಾದವರಿಗೆ ಆಶ್ರಯ ಕೊಟ್ಟು ಸಾಮಾಜಿಕ ವಿಕಾಸದ ಎತ್ತರವನ್ನೂ ಭಾರತ ಅಂದೇ ತೋರಿಸಿತ್ತು ಎಂದರು.ಭಾರತವು ಮೊದಲಿನಿಂದಲೂ ಆರ್ಥಿಕವಾಗಿ ಸಾಂಸ್ಕೃತಿಕವಾಗಿ ಸಂಪದ್ಭರಿವಾಗಿದೆ. ಇದನ್ನೆಲ್ಲವನ್ನು ಅರಿತು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ.ಇಡೀ ವಿದ್ಯಾರ್ಥಿ ಸಮುದಾಯವನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಹೊಣೆ ಶಿಕ್ಷಕರದಾಗಿರುತ್ತದೆ. ಈ ಕಾರ್ಯ ನಡೆದಾಗ ವಿಕಸಿತ ಭಾರತ ಆಗುವುದರಲ್ಲಿ ಯಾವುದೇ ಸಂದೇಹವಿರುವುದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಐ. ಕ್ಯೂ. ಎ. ಸಿ. ಯ ಸಂಯೋಜಕ ಡಾ. ವಿನಯ್ ಅವರು ವಹಿಸಿದ್ದರು.ಕರ್ನಾಟಕ ದಕ್ಷಿಣ ಪ್ರಾಂತದ ಉಚ್ಛ ಶಿಕ್ಷಾ ಸಂಸ್ಥಾನದ ಸಂಯೋಜಕ ಡಾ. ಶಿವಾನಂದ ನಾಯಕ್ ಅವರು ಸ್ವಾಗತಿಸಿದರು. ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕೆ. ಸಂತೋಷ್ ಕುಮಾರ್ ಅವರು ವಂದಿಸಿದರು. ರಾಜಶಂಕರ್ ಅವರು ಕಾರ್ಯಕ್ರಮ ನಿರೂಪಿಸಿರು.