ಜಿಗಜಿಣಗಿ ಜಿಲ್ಲೆ ಸ್ಮರಿಸುವ ಕೆಲಸ ಮಾಡಿಲ್ಲ

| Published : May 05 2024, 02:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಅಧಿಕಾರದಲ್ಲಿದ್ದಾಗ ಮಾಡುವ ಕೆಲಸಗಳನ್ನು ಜನ ಸ್ಮರಿಸುವಂತಿರಬೇಕು. ಆದರೆ, ಸಂಸದ ರಮೇಶ ಜಿಗಜಿಣಗಿ ಜಿಲ್ಲೆಯ ಜನ ನೆನಪಿಡುವ ಯಾವ ಕೆಲಸಗಳನ್ನೂ ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಟೀಕಿಸಿದರು.ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಮತ್ತು ಕಂಬಾಗಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜು‌ ಆಲಗೂರ ಪರ ಮತಯಾಚಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅಧಿಕಾರದಲ್ಲಿದ್ದಾಗ ಮಾಡುವ ಕೆಲಸಗಳನ್ನು ಜನ ಸ್ಮರಿಸುವಂತಿರಬೇಕು. ಆದರೆ, ಸಂಸದ ರಮೇಶ ಜಿಗಜಿಣಗಿ ಜಿಲ್ಲೆಯ ಜನ ನೆನಪಿಡುವ ಯಾವ ಕೆಲಸಗಳನ್ನೂ ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಟೀಕಿಸಿದರು.ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಮತ್ತು ಕಂಬಾಗಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜು‌ ಆಲಗೂರ ಪರ ಮತಯಾಚಿಸಿ ಮಾತನಾಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ‌ ಖರ್ಗೆ ಅವರು ಕಲಬುರಗಿ ಸಂಸದರಾಗಿ ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಿಸಿದರು. ಇಎಸ್ಐ ಆಸ್ಪತ್ರೆ ನಿರ್ಮಿಸಿದರು. ಪ್ರಕಾಶ ಹುಕ್ಕೇರಿ ಸಂಸದರಾಗಿ ಚಿಕ್ಕೋಡಿ‌ ಮತಕ್ಷೇತ್ರದಲ್ಲಿ ಸವಳು- ಜವಳು ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಿದರು. ಇದರಿಂದಾಗಿ ಜನ ಈಗಲೂ ಅವರನ್ನು‌ ಸ್ಮರಿಸುತ್ತಾರೆ.

ಕೆಲವು ರಾಜ್ಯಗಳ ಆರ್ಥಿಕತೆ ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೂ ಪ್ರವಾಸೋದ್ಯಮ, ತೋಟಗಾರಿಕೆ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಸಂಸದರು ಯಾವುದಕ್ಕು ಸ್ಪಂದಿಸಲಿಲ್ಲ. ಕೆಲಸ ಮಾಡದವರು ಸಾಕು, ಕ್ರಿಯಾಶೀಲ ಹೊಸಬರಿಗೆ ಅವಕಾಶ ನೀಡೋಣ. ಪ್ರೊ.ರಾಜು ಆಲಗೂರ ಅವರನ್ನು ಗೆಲ್ಲಿಸಿ, ಅಭಿವೃದ್ಧಿ ಮಾಡಿಸುವುದು ನನ್ನ ಗ್ಯಾರಂಟಿ ಎಂದು ಸಚಿವರು ಜನತೆಗೆ ವಾಗ್ದಾನ ನೀಡಿದರು.

ಪ್ರೊ.ರಾಜು ಆಲಗೂರ ಅವರು ವಿಜಯಪುರದ ಸರ್ವಾಂಗೀಣ ಅಭಿವೃದ್ಧಿಗೆ ವಿಜನ್ ಹೊಂದಿದ್ದು, ಈಗಾಗಲೇ 10 ಅಂಶಗಳ ಪ್ರಣಾಳಿಕೆ ಪ್ರಕಟಿಸಿದ್ದಾರೆ. ಸರಳ, ಸಜ್ಜನ ರಾಜಕಾರಣಿಯಾಗಿರುವ ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸಂಗನಗೌಡ ಪಾಟೀಲ ಚಿಕ್ಕಗಲಗಲಿ, ಕಾಂಗ್ರೆಸ್ ಮುಖಂಡರಾದ ಬಸನಗೌಡ ಪಾಟೀಲ ಹೊಸೂರ, ಎಸ್.ಎಂ.ಸೊನ್ನದ, ಎಂ.ಕೆ.ಶಿವಣ್ಣವರ, ಸಂಜು ಕಂಬಾಗಿ ಮಾತನಾಡಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರನ್ನು ಗೆಲ್ಲಿಸೋಣ. ಸಚಿವ ಎಂ.ಬಿ.ಪಾಟೀಲ ಅವರ ಕೈ ಬಲಪಡಿಸೋಣ ಎಂದರು.

ಈ ಸಂದರ್ಭದಲ್ಲಿ ಎಲ್.ಎಸ್.ನಿಡೋಣಿ, ಲಕ್ಷ್ಮಣ ಚಿಗದಾನಿ, ಪಾಂಡುಗೌಡ ಬಿರಾದಾರ, ವಿ.ಎಚ್.ಪಾಟೀಲ, ರಮೇಶ ಯರಗಟ್ಟಿ, ಸಂಜುಗೌಡ ಪಾಟೀಲ, ಎಂ.ಬಿ.ಮದರಖಂಡಿ, ಕೆ.ಎಂ.ಮಠಪತಿ, ರಂಗನಗೌಡ ಬಿರಾದಾರ, ಅಪ್ಪಾಸಾಹೇಬಗೌಡ ಪಾಟೀಲ, ಮಲ್ಲಿಕಾರ್ಜುನ‌ ಅಂಗಡಿ, ಮಾಳಿಂಗರಾಯ ಮಹಾರಾಜರು ಮುಂತಾದವರು ಉಪಸ್ಥಿತರಿದ್ದರು.