ಕನ್ನಡ ನಾಡು ನುಡಿಗೆ ಕಸಾಪ ಕೊಡುಗೆ ಅಪಾರ

| Published : May 07 2024, 01:00 AM IST

ಸಾರಾಂಶ

ಕನ್ನಡಪ್ರಭವಾರ್ತೆ ಗುಳೇದಗುಡ್ಡ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಆಧುನೀಕರಣದ ನೆಪದಲ್ಲಿ ಆಂಗ್ಲ ಭಾಷೆ ಪ್ರಭಾವ ಹೆಚ್ಚಾಗಿದೆ. ಈ ದಿಸೆಯಲ್ಲಿ ತಾಯಿಯ ಎದೆಹಾಲಿನ ಜೀವಾಮೃತವಾದ ಕನ್ನಡ ಭಾಷೆ ನಂಜಾಗದಂತೆ ಸಾಹಿತಿಗಳು ಮತ್ತು ಪರಿಷತ್ತು ಎಚ್ಚರವಹಿಸಬೇಕಾಗಿದೆ ಎಂದು ಪ್ರೊ.ಸಣ್ಣವೀರಣ್ಣ ದೊಡ್ಡಮನಿ ಹೇಳಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಆಧುನೀಕರಣದ ನೆಪದಲ್ಲಿ ಆಂಗ್ಲ ಭಾಷೆ ಪ್ರಭಾವ ಹೆಚ್ಚಾಗಿದೆ. ಈ ದಿಸೆಯಲ್ಲಿ ತಾಯಿಯ ಎದೆಹಾಲಿನ ಜೀವಾಮೃತವಾದ ಕನ್ನಡ ಭಾಷೆ ನಂಜಾಗದಂತೆ ಸಾಹಿತಿಗಳು ಮತ್ತು ಪರಿಷತ್ತು ಎಚ್ಚರವಹಿಸಬೇಕಾಗಿದೆ ಎಂದು ಪ್ರೊ.ಸಣ್ಣವೀರಣ್ಣ ದೊಡ್ಡಮನಿ ಹೇಳಿದರು.

ಭಾನುವಾರ ಪಟ್ಟಣದ ಮರಡಿಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ 110 ನೇ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕನ್ನಡ ಭಾಷೆಗೆ ತೊಂದರೆ ಬಂದಾಗ ಹೋರಾಟ ಮಾಡುತ್ತ ಬಂದ ಪರಿಷತ್ತಿನ ಕೆಲಸ ಪ್ರಮುಖವಾಗಿದೆ. ಹೀಗಾಗಿ ಕನ್ನಡ ನಾಡು ನುಡಿಗೆ ಕನ್ನಡ ಸಾಹಿತ್ಯ ಪರಿಷತ್ ಕೊಡುಗೆ ಅಪಾರವಾಗಿದೆ ಎಂದರು.ಸಾಹಿತ್ಯ ಸರ್ವರನ್ನು ಸಮಾನತೆಯ ದೃಷ್ಟಿಯಿಂದ ಪೋಷಿಸಿ ಬದುಕಿಸುವುದು ಜೊತೆಗೆ ಶ್ರೇಣಿಕೃತ ವ್ಯವಸ್ಥೆ ಕಿತ್ತೊಗೆದು ಕಸವರವೆಂಬುವುದು ನೆರೆ ಸೈರಿಸಲಾಲಾರ್ಪೊಡೆ ಎನ್ನುವ ಕವಿರಾಜ ಮಾರ್ಗಕಾರ ಇನ್ನೊಬ್ಬರ ಭಾವನೆ ಸಹಿಸುವುದು ಚಿನ್ನದಂತ ಗುಣವಾಗಿದೆ. ಇದನ್ನು ನಾವು ಕಲಿಯಬೇಕು. ಒಟ್ಟಿನಲ್ಲಿ ಸಾಹಿತ್ಯ ಚಿಂತನೆಗಳು ಮತ್ತು ಸಾಹಿತ್ಯ ಸಂಸ್ಥೆಗಳು ಮತೀಯವಾದದಿಂದ ದೂರ ಇರಬೇಕು. ಅಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರವೇ ಅಧ್ಯಕ್ಷ ರವಿ ಅಂಗಡಿ, ನಾಡು, ನುಡಿ, ನೆಲ ಜಲದ ವಿಷಯದಲ್ಲಿ ತೊಂದರೆಯಾದಾಗ ಅದನ್ನು ಉಳಿಸುವ ನಿಟ್ಟಿನಲ್ಲಿ ಪರಿಷತ್ತು ತೊಡಗಿಕೊಂಡಿದೆ. ಹೋರಾಟದ ದಿಸೆಯಲ್ಲಿ ಕಸಾಪ ಕೊಡುಗೆ ಅಪಾರವಾಗಿದೆ ಎಂದರು. ಪ್ರೊ.ಎಸ್.ಐ.ರಾಜನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಪೂರಾತನ ಪರಂಪರೆ ಇದೆ. ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಕಸಾಪ ಸಮ್ಮೇಳನಗಳ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಸಿ.ಎಂ.ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರೊ.ಸಣ್ಣವೀರಣ್ಣ ದೊಡ್ಡಮನಿಯವರನ್ನು ಗೌರವಿಸಲಾಯಿತು. ಕಸಾಪ ಅಧ್ಯಕ್ಷ ಎಚ್.ಎಸ್.ಘಂಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಚಂದ್ರಶೇಖರ ಕಾಳನ್ನವರ, ಮೋಹನ ಕರನಂದಿ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಈರಣ್ಣ ಅಲದಿ, ಸದದ್ಯ ಯಲ್ಲಪ್ಪ ಮನ್ನಿಕಟ್ಟಿ, ಹಾಗೂ ಬಸವರಾಜ ಸಿಂದಗಿಮಠ, ಮಲ್ಲಿಕಾರ್ಜುನ ರಾಜನಾಳ, ಭಾಗೀರತಿ ಆಲೂರ, ಗುಂಡಪ್ಪ ಕೋಟಿ, ಪರಶುರಾಮ ಮಾದರ, ಸಂಗಣ್ಣ ಚಿಕ್ಕಾಡಿ, ವಿಠ್ಠಲಸಾ ಬದಿ, ಪವಿತ್ರಾ ಜಕ್ಕಪ್ಪನವರ ಮುಂತಾದವರಿದ್ದರು.