ಕನ್ನಡ, ಕನ್ನಡಿಗ, ಕರ್ನಾಟಕದ ಏಳ್ಗೆಯೇ ಪರಿಷತ್ತಿನ ಗುರಿ

| Published : May 07 2024, 01:07 AM IST

ಕನ್ನಡ, ಕನ್ನಡಿಗ, ಕರ್ನಾಟಕದ ಏಳ್ಗೆಯೇ ಪರಿಷತ್ತಿನ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ, ಪುಸ್ತಕ ಪ್ರಕಟಣೆ, ಕಾರ್ಯಾಗಾರಗಳ ಮೂಲಕ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದೆ

ಗದಗ: ಕನ್ನಡ, ಕನ್ನಡಿಗ, ಕರ್ನಾಟಕ ವಿಷಯಕ್ಕೆ ಸಂಬಂಧಿಸಿದಂತೆ ಪೂರಕ ಕಾರ್ಯಕ್ರಮ ಹಾಗೂ ಹೋರಾಟ ರೂಪಿಸಿಕೊಂಡು ಬಂದು ಕನ್ನಡಿಗರಲ್ಲಿ ಕನ್ನಡದ ಪ್ರಜ್ಞೆಯನ್ನು ಸದಾ ಜೀವಂತವಾಗಿರುವ ಕಾರ್ಯ ಪರಿಷತ್ತು ಶತಮಾನದಿಂದ ಮಾಡುತ್ತಾ ಬಂದಿದೆ ಎಂದು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವಾನಂದ ಗಿಡ್ನಂದಿ ಹೇಳಿದರು.

ಅವರು ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು ಎಂಬ ವಿಷಯ ಕುರಿತು ಮಾತನಾಡಿದರು. ಪುಸ್ತಕ ಪ್ರಕಟಣೆ, ಸಮ್ಮೇಳನ, ಕಾರ್ಯಾಗಾರ, ವಿಚಾರ ಸಂಕೀರಣ ಮುಂತಾದ ಕಾರ್ಯ ಚಟುವಟಿಕೆಗಳು ಪರಿಷತ್ತಿನ ಜೀವಾಳವಾಗಿವೆ. ಕನ್ನಡ, ಕನ್ನಡಿಗ, ಕರ್ನಾಟಕದ ಸಮಗ್ರ ಏಳ್ಗೆಯೇ ಪರಿಷತ್ತಿನ ಗುರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ, ಪುಸ್ತಕ ಪ್ರಕಟಣೆ, ಕಾರ್ಯಾಗಾರಗಳ ಮೂಲಕ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದೆ. ಕನ್ನಡ ನಾಡು ನುಡಿ, ನೆಲ ಜಲದ ಪ್ರಶ್ನೆ ಬಂದಾಗ ಪರಿಷತ್ತು ಮುಂಚೂಣಿಯಲ್ಲಿ ನಿಂತು ಕನ್ನಡಿಗರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿದೆ. ಕನ್ನಡಿಗರೆಲ್ಲ ಪರಿಷತ್ತಿನ ಸದಸ್ಯರಾಗುವ ಮೂಲಕ ಶಕ್ತಿ ಇಮ್ಮಡಿಗೊಳಿಸುವ ಕಾರ್ಯ ಮಾಡಬೇಕಿದೆ. ಕನ್ನಡ ಶಾಲೆಗಳ ಸಬಲೀಕರಣ ಪ್ರಥಮ ಆದ್ಯತೆಯಾಗಬೇಕು ಎಂದು ತಿಳಿಸಿದರು.

ಈ ವೇಳೆ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಕನ್ನಡದ ಕಾರ್ಯಕ್ರಮಗಳನ್ನು ಸಂಘಟನೆ ಮಾಡಿರುವ ಹಿನ್ನೆಲೆಯಲ್ಲಿ ಮುಂಡರಗಿ ತಾಲೂಕು ಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕ್ಷ ಪ್ರೊ.ಎಂ.ಜಿ. ಗಚ್ಚಣ್ಣ ಅವರನ್ನು ಸನ್ಮಾನಿಸಲಾಯಿತು. ಪರಿಷತ್ತಿನ ೧೧೦ನೇ ಸಂಸ್ಥಾಪನಾ ದಿನದ ಅಂಗವಾಗಿ ೧೧೦ಸಸಿಗಳನ್ನು ತೋಟಗಾರಿಕೆ ಇಲಾಖೆಯ ನಿರ್ದೇಶಕ ಸುರೇಶ ಕುಂಬಾರ ವಿತರಿಸಿದರು.

ಡಾ. ರಶ್ಮಿ ಅಂಗಡಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಪ್ರೊ. ಕೆ.ಎಚ್. ಬೇಲೂರ, ಡಾ. ರಾಜಶೇಖರ ದಾನರಡ್ಡಿ, ಶಕುಂತಲಾ ಸಿಂಧೂರ, ವಿ. ಹರಿನಾಥಬಾಬು, ಸಿ.ಕೆ.ಎಚ್. ಶಾಸ್ತ್ರಿ, ಡಿ.ಎಸ್. ಬಾಪುರಿ, ಅಮರೇಶ ರಾಂಪೂರ, ಸಿ.ಎಂ. ಮಾರನಬಸರಿ, ಪ್ರ.ತೋ.ನಾರಾಯಣಪೂರ, ಬಸವರಾಜ ವಾರಿ, ಸತೀಶ ಚನ್ನಪ್ಪಗೌಡ್ರ, ಕೃಷ್ಣಾ ಸಾವುಕಾರ, ಶಿವಾನಂದ ಭಜಂತ್ರಿ, ಬಿ.ಎಸ್.ಹಿಂಡಿ, ಐ.ಎಸ್. ಹಿರೇಮಠ, ಮಹೇಶ ಶಟವಾಜಿ, ಷಡಕ್ಷರಿ ಮೆಣಸಿನಕಾಯಿ, ಎಸ್.ಸಿ. ಹಾಳಕೇರಿ, ಅ.ದ. ಕಟ್ಟಿಮನಿ, ಕೆ.ಜಿ. ವ್ಯಾಪಾರಿ, ಶಿ.ಶಿ. ನರೇಗಲ್, ಮಂಜುನಾಥ ಹಿಂಡಿ, ಉಮಾ ಪಾರ್ವತಿಮಠ, ಡಾ. ರಾಜೇಂದ್ರ ಗಡಾದ ಮೊದಲಾದವರು ಉಪಸ್ಥಿತರಿದ್ದರು.

ಗವಿಸಿದ್ಧಯ್ಯ ಹಳ್ಳಿಕೇರಿಮಠ ಹಾಗೂ ಆರ್.ವಿ. ಮ್ಯಾಗೇರಿ ಅವರಿಂದ ಕನ್ನಡ ಗೀತ ಗಾಯನ ಜರುಗಿದವು. ಡಾ. ಅಕ್ಕಮಹಾದೇವಿ ರೊಟ್ಟಿಮಠ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಶ್ರೀಕಾಂತ ಬಡ್ಡೂರ ವಂದಿಸಿದರು.