ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ನಡೆದಿದ್ದ ತ್ರಿವಳಿ ಕೊಲೆಗೆ ಕಾರಣ ಇನ್ನೂ ನಿಗೂಢವಾಗಿದೆ. ಮತ್ತೊಂದೆಡೆ ಪ್ರಶಾಂತ್ ವಾರದ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದ ಎಂಬ ವಿಚಾರ ಬಹಿರಂಗವಾಗಿದೆ.ಕೊಟ್ಟಿಗೆಪಾಳ್ಯ ಸಮೀಪದ ನಿವಾಸಿ ಪ್ರಶಾಂತ್ ತನ್ನ ತಾಯಿ ಮಂಗಳಮ್ಮ(55),ಅಜ್ಜಿ ನಂಜಮ್ಮ (65) ಮತ್ತು ಸೋದರ ಮಾವ ಸತೀಶ್ (50) ಅವರನ್ನು ಶನಿವಾರ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದನು.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪ್ರಶಾಂತ್ನನ್ನು ಅವರ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸದೆ, ವಾರದ ಹಿಂದೆ ಆಂಧ್ರದ ಪೆನಕೊಂಡ ದೇವಸ್ಥಾನಕ್ಕೆ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದರು. ಆ ವೇಳೆ ಪ್ರಶಾಂತ್ ನನಗೆ ಜೀವನ ಸಾಕಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ನೀವು ಹೊರಡಿ ಎಂದಿದ್ದ. ದೇವಸ್ಥಾನದಲ್ಲಿಯೂ ಸಹ ಕುಟುಂಬ ಸದಸ್ಯರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ನಂತರ ಕುಟುಂಬ ಸದಸ್ಯರು ಸಮಾಧಾನ ಮಾಡಿ ಅಲ್ಲಿಂದ ಕರೆತಂದಿದ್ದರು. ಇದೇ ರೀತಿ ಪ್ರಶಾಂತ್ ಸಣ್ಣ ಪುಟ್ಟ ವಿಚಾರಗಳಿಗೂ ಗಲಾಟೆ ಮಾಡುತ್ತಿದ್ದ. ಅಲ್ಲದೇ ನನ್ನನ್ನು ಸಾಯಲು ನೀವು ಬಿಡಲಿಲ್ಲವೆಂದು ಇತ್ತೀಚೆಗೆ ಮನೆಯವರೊಂದಿಗೆ ಜಗಳ ಕೂಡ ಮಾಡಿಕೊಂಡಿದ್ದ ಎಂಬುದು ಪ್ರಾಥಮಿಕ ತನಿಖೆಯ ವೇಳೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೊಲೆಗೆ ಕಾರಣ ಹುಡುಕಾಟ
ಘಟನೆ ಸಂಬಂಧ ಪೊಲೀಸರು ಸಂಬಂಧಿಕರು ಮತ್ತು ಅಕ್ಕಪಕ್ಕದ ನಿವಾಸಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಅವಿವಾಹಿತ ಪ್ರಶಾಂತ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ. ಮೊದಲು ಕಾರು ಚಾಲಕನಾಗಿದ್ದು ಈತ ಕಳೆದ 1 ವರ್ಷಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದ. ಪ್ರಶಾಂತ್ ಸೋದರ ಮಾವ ಸತೀಶ್ನಿಗೂ ಮದುವೆಯಾಗಿರಲಿಲ್ಲ ಎನ್ನಲಾಗಿದೆ. ಪ್ರಶಾಂತ್ ಸಂಜೆ ವೇಳೆ ಮನೆಯಿಂದ ಹೊರಗೆ ಹೋಗಿ ಮದ್ಯ ಸೇವಿಸಿ ಬಂದು ಸತೀಶ್ ಅವರೊಂದಿಗೆ ಗಲಾಟೆ ಮಾಡುತ್ತಿದ್ದ ಎಂದು ಗೊತ್ತಾಗಿದೆ. ಘಟನೆಯಿಂದ ಆಘಾತಗೊಂಡಿರುವ ಪ್ರಶಾಂತ್ ಅವರ ತಂದೆ ಚಿಕ್ಕಣ್ಣ ಅವರನ್ನು ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.