ಕ್ಯಾಂಟರ್‌-ದ್ವಿಚಕ್ರಗಳ ನಡುವೆ ಡಿಕ್ಕಿ : ಇಬ್ಬರೂ ಬೈಕ್‌ ಸವಾರ ಸಾವು

| N/A | Published : May 27 2025, 06:54 AM IST

Dhar road accident
ಕ್ಯಾಂಟರ್‌-ದ್ವಿಚಕ್ರಗಳ ನಡುವೆ ಡಿಕ್ಕಿ : ಇಬ್ಬರೂ ಬೈಕ್‌ ಸವಾರ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸುವಾಗ ನಿಯಂತ್ರಣ ಕಳೆದುಕೊಂಡು ಮುಂದೆ ಹೋಗುತ್ತಿದ್ದ ಕ್ಯಾಂಟರ್‌ ವಾಹನದ ಹಿಂಭಾಗಕ್ಕೆ ತಾನೇ ಡಿಕ್ಕಿ ಹೊಡೆದುಕೊಂಡು ಸವಾರ ಮೃತಪಟ್ಟಿರುವ ಘಟನೆ ಜ್ಞಾನಭಾರತಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸುವಾಗ ನಿಯಂತ್ರಣ ಕಳೆದುಕೊಂಡು ಮುಂದೆ ಹೋಗುತ್ತಿದ್ದ ಕ್ಯಾಂಟರ್‌ ವಾಹನದ ಹಿಂಭಾಗಕ್ಕೆ ತಾನೇ ಡಿಕ್ಕಿ ಹೊಡೆದುಕೊಂಡು ಸವಾರ ಮೃತಪಟ್ಟಿರುವ ಘಟನೆ ಜ್ಞಾನಭಾರತಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೆಬ್ಬಗೋಡಿಯ ಅನಿಲ್‌ ಕುಮಾರ್‌ (38) ಮೃತ ಸವಾರ. ಸೋಮವಾರ ಬೆಳಗ್ಗೆ ಸುಮಾರು 10.50ಕ್ಕೆ ನೈಸ್‌ ರಸ್ತೆಯ ಉಲ್ಲಾಳ ಮೇಲ್ಸೇತುವೆ ಬಳಿ ಈ ದುರ್ಘಟನೆ ನಡೆದಿದೆ. ವಾಟರ್‌ ಫ್ಯೂರಿಫೈ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಅನಿಲ್‌ ಕುಮಾರ್‌, ಬೆಳಗ್ಗೆ ಕೆಲಸ ನಿಮಿತ್ತ ತಮ್ಮ ದ್ವಿಚಕ್ರ ವಾಹನದಲ್ಲಿ ನೈಸ್‌ ರಸ್ತೆಯ ಉಲ್ಲಾಳ ಮೇಲ್ಸೇತುವೆ ಬಳಿ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬೈಕ್‌ ಚಲಿಸಿದ್ದು, ನಿಯಂತ್ರಣ ಕಳೆದುಕೊಂಡು ಮುಂದೆ ಹೋಗುತ್ತಿದ್ದ ಕ್ಯಾಂಟರ್‌ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಅನಿಲ್‌ ಕುಮಾರ್‌ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದು, ಬಳಿಕ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಸ್ವಯಂ ಅಪಘಾತ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯಾಂಟರ್‌ ವಾಹನಕ್ಕೆ ಬೈಕ್‌ ಸವಾರ ಬಲಿ

ಬೆಂಗಳೂರು: ಕ್ಯಾಂಟರ್‌ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಉಲ್ಲಾಳ ಬಸ್ತಿ ನಿವಾಸಿ ಬಾಲಾಜಿ (19) ಮೃತ ಸವಾರ. ಸೋಮವಾರ ಮಧ್ಯಾಹ್ನ ಸುಮಾರು 1.30ಕ್ಕೆ ಸರ್‌ ಎಂ.ವಿ ಲೇಔಟ್‌ 4ನೇ ಬ್ಲಾಕ್‌ನ ಮುಸ್ಲಿಂ ಸ್ಮಶಾನದ ಬಳಿ ಈ ದುರ್ಘಟನೆ ನಡೆದಿದೆ.

ಕ್ಯಾಂಟರ್‌ ವಾಹನದ ಚಾಲಕ ದೊಡ್ಡ ಬಸ್ತಿ ಮುಖ್ಯರಸ್ತೆಯಲ್ಲಿ ಮಂಗನಹಳ್ಳಿ ಕಡೆಯಿಂದ ದೊಡ್ಡ ಬಸ್ತಿ ಕಡೆಗೆ ವೇಗವಾಗಿ ವಾಹನ ಚಲಾಯಿಸಿಕೊಂಡು ಬಂದು ಮುಸ್ಲಿಂ ಸ್ಮಶಾನದ ಬಳಿ ಬಲ ತಿರುವು ಪಡೆದಿದ್ದಾನೆ. ಇದೇ ಸಮಯಕ್ಕೆ ಬಾಲಾಜಿ ದೊಡ್ಡ ಬಸ್ತಿ ಕೆರೆ ಕಡೆಯಿಂದ ಬೈಕ್‌ನಲ್ಲಿ ಬಂದಿದ್ದಾನೆ. ಆಗ ಕ್ಯಾಂಟರ್‌ ವಾಹನ ಏಕಾಏಕಿ ದ್ವಿಚಕ್ರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನ ಸಹಿತ ರಸ್ತೆಗೆ ಬಿದ್ದ ಬಾಲಾಜಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಬಂದ ಸಂಚಾರ ಪೊಲೀಸರು, ಕ್ಯಾಂಟರ್‌ ವಾಹನ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಕ್ಯಾಂಟರ್‌ ವಾಹನದ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನೆ ಬಳಿಕ ಕ್ಯಾಂಟರ್‌ ವಾಹನ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.

Read more Articles on