ಹಲಗೂರು:
ಪಾದಚಾರಿಗೆ ಡಿಕ್ಕಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಅಪಘಾತಕ್ಕೀಡಾದ ಅಪರಿಚಿತ ಕಾರಿನಲ್ಲಿ ನಾಡ ಬಂದೂಕು (ಸಿಂಗಲ್ ಬ್ಯಾರಲ್ ಗನ್) ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸಮೀಪದ ಹಾಡ್ಲಿ- ಮೇಗಳಾಪುರ ಸರ್ಕಲ್ ಬಳಿ ಮಂಗಳವಾರ ಸಂಜೆ ಪಾದಚಾರಿ ಒಬ್ಬರಿಗೆ ಕಾರು ಚಾಲಕ ಡಿಕ್ಕಿ ಮಾಡಿ ತಪ್ಪಿಸಿಕೊಳ್ಳಲು ಕಂಸಾಗರ ಕಡೆಗೆ ವಾಹನ ಚಲಾಯಿಸಿದ್ದಾನೆ. ಇದನ್ನು ಗಮನಿಸಿದ ಸುತ್ತಲಿನ ಪ್ರದೇಶದ ಜನರು ಕಂಸಾಗರದ ಸ್ಥಳೀಯರಿಗೆ ಕರೆ ಮಾಡಿದ್ದಾರೆ. ನಂತರ ಗ್ರಾಮಸ್ಥರು ಕಾರನ್ನು ಅಡ್ಡಗಟ್ಟಿ ಎಂದು ಕರೆ ಮಾಡಿ ತಿಳಿಸಿದ್ದಾರೆ.
ಕಂಸಾಗರ ಗ್ರಾಮದವರು ರಸ್ತೆಗೆ ಅಡ್ಡಲಾಗಿ ಬೇರೆ ವಾಹನಗಳನ್ನು ನಿಲ್ಲಿಸಿ ಕಾರನ್ನು ಅಡ್ಡಗಟ್ಟುತ್ತಿದ್ದಾಗ ಇದನ್ನು ಗಮನಿಸಿದ ಕಾರು ಚಾಲಕ ತಕ್ಷಣ ಕಾರನ್ನು ಹಿಂದಕ್ಕೆ ತಿರುಗಿಸಿಕೊಳ್ಳಲು ಮುಂದಾದಾಗ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಜಖಂಗೊಂಡಿದೆ. ಕಾರನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.ಹಲಗೂರು ಪಿಎಸ್ಐ ಲೋಕೇಶ್ ಅಪಘಾತಕ್ಕೀಡಾದ ಕಾರನ್ನು ಪೊಲೀಸರು ಪರಿಶೀಲಿಸಿದಾಗ ಕಾರಿನೊಳಗೆ ನಾಡ ಬಂದೂಕು ಪತ್ತೆಯಾಗಿದೆ. ಬಂದೂಕನ್ನು ವಶಪಡಿಸಿಕೊಂಡ ಪಿಎಸ್ಐ ಲೋಕೇಶ್ ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.