ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಸಾಹಸ ಕಲಾವಿದ ಬಂಧನ ..! 179 ಗ್ರಾಂ ಚಿನ್ನ ವಶ

| N/A | Published : Feb 25 2025, 12:48 AM IST / Updated: Feb 25 2025, 04:06 AM IST

ಸಾರಾಂಶ

ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿ ಆತನಿಂದ 179 ಗ್ರಾಂ ಚಿನ್ನ, ಎರಡೂವರೆ ಕೆಜಿ ಬೆಳ್ಳಿ ಪದಾರ್ಥಗಳು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಸೇರಿ 17.92 ಲಕ್ಷ ರು. ಮೌಲ್ಯದ ವಸ್ತುಗಳನ್ನು ಹಲಗೂರು ವ್ಯಾಪ್ತಿಯ ಪೊಲೀಸರು ವಶ ಪಡಿಸಿಕೊಂಡಿದ್ದಾರೆ  

 ಮಂಡ್ಯ :  ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿ ಆತನಿಂದ 179 ಗ್ರಾಂ ಚಿನ್ನ, ಎರಡೂವರೆ ಕೆಜಿ ಬೆಳ್ಳಿ ಪದಾರ್ಥಗಳು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಸೇರಿ 17.92 ಲಕ್ಷ ರು. ಮೌಲ್ಯದ ವಸ್ತುಗಳನ್ನು ಹಲಗೂರು ವ್ಯಾಪ್ತಿಯ ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೈರಪಟ್ಟಣ ಗ್ರಾಮದ ಕೆ.ಪ್ರಸನ್ನ (40) ಬಂಧಿತ ಆರೋಪಿ. ಈತ ಹಲಗೂರು, ಬೆಳಕವಾಡಿ ಮತ್ತು ಕಿರುಗಾವಲಿನಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಂದಿ ಮಾಂಸ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕೆ.ಪ್ರಸನ್ನ ರಾತ್ರಿ ವೇಳೆ ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಮನೆಗೆ ನುಗ್ಗಿ ಕಳ್ಳತನ ನಡೆಸುತ್ತಿದ್ದನು. ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಬಳಿಕ ತಾಲೂಕಿನ ವಿವಿಧೆಡೆ ೯ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ ಎಂದರು.

ಸರಗಳ್ಳರ ಬಂಧನ: 286 ಗ್ರಾಂ ಚಿನ್ನದ ಒಡವೆ ವಶ;

ಇಬ್ಬರು ಸರಗಳ್ಳರನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ 286 ಗ್ರಾಂ ತೂಕದ ಚಿನ್ನದ ಒಡವೆಗಳು, ಒಂದು ಅಪಾಚಿ ಬೈಕ್ ಸೇರಿ 24.20 ಲಕ್ಷ ರು. ಮೌಲ್ಯದ ವಸ್ತುಗಳನ್ನು ಹಲಗೂರು ವ್ಯಾಪ್ತಿಯ ವಶಕ್ಕೆ ಪಡೆದಿದ್ದಾರೆ.

ಮೈಸೂರು ಜಿಲ್ಲೆ ಟಿ.ನರಸೀಪುರದ ಶೃಂಗಾರ್ ಮತ್ತು ಬೆಂಗಳೂರಿನ ಸುಂಕದ ಕಟ್ಟೆ ವಾಸಿ ಎಸ್.ಚೇತನ್ ಬಂಧಿತ ಆರೋಪಿಗಳು. ಸಿನಿಮಾಗಳಲ್ಲಿ ಸಾಹಸ ಕಲಾವಿದನಾಗಿ ಪಾತ್ರ ಮಾಡುತ್ತಿದ್ದ ಎಸ್.ಶೃಂಗಾರ್ ಮತ್ತು ಆತನ ಸ್ನೇಹಿತ ಚೇತನ್ ಇಬ್ಬರೂ ಸೇರಿ ಮೈಸೂರಿನ ನಜರ್‌ಬಾದ್, ಲಕ್ಷ್ಮೀಪುರಂ, ಆಲನಹಳ್ಳಿ, ವರುಣಾ, ಕುವೆಂಪುನಗರ, ಮಂಡ್ಯ ಗ್ರಾಮಾಂತರ ಹಾಗೂ ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ ಎಂಟು ಕಡೆ ೨೮೬ ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಕಳವು ಮಾಡಿದ್ದರು.

ಮೇಲಿನ ಎರಡೂ ಪ್ರಕರಣಗಳನ್ನು ಮಳವಳ್ಳಿ ಡಿವೈಎಸ್ಪಿ ವಿ.ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಕಿರುಗಾವಲು ಠಾಣೆ ಪಿಎಸ್‌ಐ ರವಿಕುಮಾರ್, ಬೆಳಕವಾಡಿ ಠಾಣೆಯ ಪಿಎಸ್‌ಐ ಬಿ.ವಿ.ಪ್ರಕಾಶ್ ಮತ್ತು ಸಿಬ್ಬಂದಿ ಬೇಧಿಸಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಈ ಕಾರ್ಯವನ್ನು ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘಿಸಿದ್ದಾರೆ.

ಗೋಷ್ಠಿಯಲ್ಲಿ ಎಎಸ್ಪಿಗಳಾದ ಸಿ.ಇ.ತಿಮ್ಮಯ್ಯ, ಗಂಗಾಧರಸ್ವಾಮಿ ಇತರರಿದ್ದರು.