ಸಾರಾಂಶ
ಬೆಂಗಳೂರು : ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕಾರ್ಮಿಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಯಚೂರು ಮೂಲದ ವೀರೇಶ್ (26) ಕೊತ್ತನೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಭಾನುವಾರ ಬೆಳಗ್ಗೆ ಅನುಮಾನಾಸ್ಪವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ವೀರೇಶ್ ಕಳೆದ ಆರು ತಿಂಗಳಿಂದ ಕೊತ್ತನೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿದ್ದ. ರಾತ್ರಿ ವೇಳೆ ಅದೇ ಕಟ್ಟಡದಲ್ಲಿ ಮಲಗುತ್ತಿದ್ದ. ಶನಿವಾರ ಗಾರೆ ಕೆಲಸ ಮುಗಿದ ಬಳಿಕ ರಾತ್ರಿ ಕಟ್ಟಡದಲ್ಲೇ ಮಲಗಿದ್ದ. ಭಾನುವಾರ ಬೆಳಗ್ಗೆ ಮೃತಸ್ಥಿತಿಯಲ್ಲಿ ಆತ ಪತ್ತೆ ಅಗಿದ್ದಾನೆ. ಆತನ ಬಾಯಿ ಮತ್ತು ಕಿವಿಯಲ್ಲಿ ರಕ್ತಸ್ರಾವವಾಗಿದೆ. ಆದರೆ, ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ.
ಮೃತ ವೀರೇಶ್ ಮದ್ಯ ವ್ಯಸನಿಯಾಗಿದ್ದು, ವಿಪರೀತ ಮದ್ಯ ಸೇವಿಸಿ ಮೃತಪಟ್ಟಿರುವ ಸಾಧ್ಯತೆಯಿದೆ. ಮತ್ತೊಂದೆಡೆ ಬಾಯಿ ಮತ್ತು ಕಿವಿಯಲ್ಲಿ ರಕ್ತಸ್ರಾವ ಆಗಿರುವುದರಿಂದ ಯಾರೋ ಕೊಲೆ ಮಾಡಿರುವ ಶಂಕೆಯೂ ಇದೆ. ಮರಣೋತ್ತರ ಪರೀಕ್ಷೆ ಬಳಿಕ ಈ ಸಾವಿನ ಕಾರಣ ಬಯಲಾಗಲಿದೆ.
ಘಟನೆ ಸಂಬಂಧ ಕೋಣನಕುಂಟೆ ಠಾಣೆ ಪೊಲೀಸರು, ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ನಿರ್ಮಾಣ ಹಂತದ ಕಟ್ಟಡದ ಸೆಕ್ಯೂರಿಟಿ ಗಾರ್ಡ್ ಹಾಗೂ ಇತರೆ ಕಾರ್ಮಿಕರ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.