ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಅವಧಿ ಮುಗಿದ ನಂತರವೂ 3.70 ಲಕ್ಷ ರು.ಗೂ ಹೆಚ್ಚು ಹಣವನ್ನು ನಿಯಮಬಾಹಿರವಾಗಿ ಏಜೆನ್ಸಿಯವರಿಗೆ ಪಾವತಿಸಿರುವ ಪ್ರಕರಣ ಕೆ.ಆರ್‌.ಪೇಟೆ ತಾಲೂಕು ಮಂದಗೆರೆ ಗ್ರಾಮ ಪಂಚಾಯ್ತಿಯಲ್ಲಿ ಬೆಳಕಿಗೆ ಬಂದಿದೆ.

ಈ ಸಂಬಂಧ ಮಂದಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿಕ್ಕಮಂದಗೆರೆ ಗ್ರಾಮದ ಸಿ.ಪಿ.ಭರತ್‌ ಅವರು ಕೆ.ಆರ್‌.ಪೇಟೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ ಅವರಿಗೆ ದೂರು ನೀಡಿದ್ದಾರೆ.

ಕೆ.ಆರ್‌.ಪೇಟೆ ತಾಲೂಕಿನ ಚಿಕ್ಕಮಂದಗೆರೆ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಅವಧಿ 7 ಫೆಬ್ರವರಿ 2026ಕ್ಕೆ ಅಂತ್ಯಗೊಂಡಿದೆ. ಆದರೆ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಫೆ.8ರಂದು ಮಾದೇಶ್‌ ಏಜೆನ್ಸಿಗೆ 1,78,200 ರು., ಮಾರುತಿ ಎಂಟರ್‌ಪ್ರೈಸಸ್‌ಗೆ 21,350 ರು., ಕಾವೇರಿ ಎಲೆಕ್ಟ್ರಿಕಲ್ಸ್‌ಗೆ 98564 ರು. ಹಾಗೂ ಫೆ.9ರಂದು ಟಿ.ಎ.ಲೋಕೇಶ ಏಜೆನ್ಸಿಗೆ 81 ಸಾವಿರ ರು. ಹಣವನ್ನು ಪಾವತಿಸಿರುವುದನ್ನು ದಾಖಲೆಗಳ ಸಹಿತ ಇಒಗೆ ನೀಡಿದ್ದಾರೆ. ಈ ಗ್ರಾಮ ಸ್ವರಾಜ್‌ನಿಂದ ಮಾಹಿತಿ ಕಂಡುಬಂದಿರುವುದರಿಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.