ಮೋಡ ಕವಿದ ವಾತಾವರಣ ಚಿತ್ರದ ನಿರ್ದೇಶಕನ ಸಂದರ್ಶನ

ಸಾತ್ವಿಕಾ, ಮೋಕ್ಷ ಕುಶಾಲ್‌, ಶೀಲಂ ಜೋಡಿಯ, ಮೈಸೂರು ರಮೇಶ್‌, ಶ್ರೀರಂಗರಾಜು, ಲೋಕೇಶ್‌ ಬೆಳವಾಡಿ, ಗೋವಾ ರಮೇಶ್‌ ನಿರ್ಮಾಣದ ‘ಮೋಡ ಕವಿದ ವಾತಾವರಣ’ ಚಿತ್ರವು ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಸಿಂಪಲ್‌ ಸುನಿ ಮಾತುಗಳು ಇಲ್ಲಿವೆ.

ಆರ್‌. ಕೇಶವಮೂರ್ತಿ

ಈ ಚಿತ್ರದ ಕತೆ ಹುಟ್ಟಿಕೊಂಡ ಹಿನ್ನೆಲೆ ಏನು?

ಲಾಕ್‌ಡೌನ್‌ ಸ್ಥಿತಿ ಎಷ್ಟು ದಿನ ಇರುತ್ತೋ ಗೊತ್ತಿಲ್ಲದಿದ್ದಾಗ ಒಂದು ರೆಸಾರ್ಟ್‌ನಲ್ಲಿ ಶುರುವಾಗಿ ಅದೇ ರೆಸಾರ್ಟ್‌ನಲ್ಲಿ ಮುಗಿಯುವ ಕತೆ ಅಂತ ಮಾಡಿಕೊಂಡಿದ್ದು. ಕೊನೆಗೆ ಲಾಕ್‌ಡೌನ್‌ ಮುಗಿದಾಗ ಕತೆಗೆ ಬೇರೆ ಬೇರೆ ತಿರುವುಗಳು ಸೇರಿಕೊಂಡವು.


ಇದು ಶೀಲಂಗಾಗಿಯೇ ಮಾಡಿದ ಕತೆನಾ?

ಕತೆ ಮಾಡಿಕೊಂಡಾಗ ಹೀರೋ ಯಾರೂ ಅಂತ ಫೈನಲ್‌ ಆಗಿರಲಿಲ್ಲ. ಶೀಲಂ ನನ್ನ ಜೊತೆಗೇ ಕೆಲಸ ಮಾಡುತ್ತಿದ್ದ. ಹೀಗಾಗಿ ಆತನಿಗೆ ಕತೆಯನ್ನು ಆಗಾಗ ನರೇಟ್‌ ಮಾಡುತ್ತಿದ್ದೆ. ಹೀಗೆ ರೀಡಿಂಗ್‌ ಕೊಡ್ತಾ ಕೊಡ್ತಾ ಕತೆ ಪೂರ್ತಿ ಆದಮೇಲೆ ಶೀಲಂ ಹೀರೋ ಅಂತ ಆಗಿದ್ದು.

ಈ ನಿಮ್ಮ ಚಿತ್ರ ನೋಡುವುದಕ್ಕೆ ಕಾರಣಗಳೇನು?

ನನ್ನ ಸಿನಿಮಾ ಜನರನ್ನು ತಲುಪುದಕ್ಕೆ ಸಾಧ್ಯವಾಗುವ ಎಲ್ಲಾ ಅಂಶಗಳು ಇವೆ. ಲೈಟ್‌ ಹಾರ್ಟ್‌ ಟಚ್ಚಿಂಗ್‌ ಕತೆ, ತುಂಬಾ ಸುಂದರವಾಗಿ ಕಾಣುವ ಫೋಟೋಗ್ರಫಿ, ಮನಸ್ಸಿಗೆ ಹಿತವಾಗಿ ಸಂಗೀತ, ಯಾವುದೇ ಗೊಂದಲಗಳಿಲ್ಲದ ಸಂಭಾಷಣೆಗಳು, ಈ ಝನ್‌ ಜೀ ಜನರೇಷನ್‌ ಜೊತೆಗೆ ದೊಡ್ಡವರು ಕೂಡ ನೋಡುವಂತಹ ಸಿನಿಮಾ ಇದು.

ಈ ಸಿನಿಮಾ ಕತೆಗೆ ಸ್ಫೂರ್ತಿ ಏನು?

ರೆಸಾರ್ಟ್‌ನಲ್ಲಿ ಮುಗಿಯುವ ಕತೆ ಒಂದು ಕೇಸ್‌ ಸ್ಟಡಿ ಬೇಕು ಅಂದಾಗ ನಮಗೆ ಸಿಕ್ಕ ಒಂದು ಮೆಡಿಕಲ್‌ ಘಟನೆ. ಅದೇನು ಎಂಬುದು ಚಿತ್ರದಲ್ಲಿ ನೋಡಿ. ಜೊತೆಗೆ ಈ ಸಿನಿಮಾ ಕತೆ ಬರೆಯಲು ನನಗೆ ‘ಸಿಂಪಲ್ಲಾಗ್‌ ಒಂದ್‌ ಲವ್ ಸ್ಟೋರಿ’ ಸಿನಿಮಾ ಸ್ಫೂರ್ತಿ.

ನಿರ್ದೇಶಕರಾಗಿ ನಿಮಗೆ ಈ ಕತೆಯಲ್ಲಿ ಥ್ರಿಲ್ಲಿಂಗ್‌ ಅನಿಸಿದ್ದೇನು?

ಇಲ್ಲಿ ಯಾರು ವಿಲನ್‌, ಯಾರ ಆ ನಿಗೂಢ ವ್ಯಕ್ತಿ ಅಂತ ಪ್ರಶ್ನೆ ಬಂದಾಗ ನನಗೆ ಥ್ರಿಲ್‌ ಅನಿಸಿತು. ಮೂರು ಪಾತ್ರಗಳ ನಡುವೆ ಪರಸ್ಪರ ಕ್ರಾಸ್‌ ಕನೆಕ್ಷನ್‌ ಹುಟ್ಟಿಕೊಂಡಾಗ ಕತೆ ಬರೆಯುವುದಕ್ಕೆ ಮತ್ತಷ್ಟು ಉತ್ಸಾಹ ಸಿಕ್ಕಿತು.

ನಿಮ್ಮ ಕತೆಯನ್ನು ನೀವು ದೊಡ್ಡ ಪರದೆ ಮೇಲೆ ನೋಡಿದಾಗ?

ನನ್ನ ಯಾವುದೇ ಕತೆ ತೆರೆ ಮೇಲೆ ನೋಡಿದಾಗ ಇನ್ನಷ್ಟು ಚೆನ್ನಾಗಿ ಮಾಡಬೇಕು, ಮೊಲಿನಿಂದ ಶೂಟ್‌ ಮಾಡಬೇಕು ಅನಿಸಿದ್ದು ಇದೆ. ಆದರೆ, ‘ಮೋಡ ಕವಿದ ವಾತಾವರಣ’ ಆ ರೀತಿಯ ಅಭಿಪ್ರಾಯ ಮೂಡಿಸಲಿಲ್ಲ.

ತುಂಬಾ ಸ್ಪೀಡಾಗಿ ಸಿನಿಮಾಗಳನ್ನು ಮಾಡುವ ನಿಮ್ಮ ನಿರ್ದೇಶನದ ಗುಟ್ಟೇನು?

ಇದಕ್ಕೆ ‘ಆಪರೇಷನ್‌ ಅಲಮೇಲಮ್ಮ’ ಹಾಗೂ ‘ಚಮಕ್‌’ ಚಿತ್ರಗಳು ಕಾರಣ. ಒಂದೇ ವರ್ಷದಲ್ಲಿ ಎರಡು ಸಿನಿಮಾ ಮಾಡಿದ. ಇದಕ್ಕಿಂತ ಮೊದಲು ಬಂದ ಚಿತ್ರಗಳಿಗೆ ಎರಡು- ಮೂರು ವರ್ಷ ಸ್ಪೆಂಡ್‌ ಮಾಡಿದ್ದೇನೆ. ಎಷ್ಟು ವರ್ಷ ಸಿನಿಮಾ ಮಾಡ್ತಿವಿ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಮಾಡ್ತೀವಿ ಅನ್ನೋದು ಮುಖ್ಯ ಅಂತ ಗೊತ್ತಾದ ಮೇಲೆ ಸ್ಪೀಡ್‌ ಹೆಚ್ಚಾಯಿತು.

ಆ್ಯಕ್ಷನ್‌, ಅಂಡರ್‌ವರ್ಲ್ಡ್‌ ಕತೆಗಳ ಚಿತ್ರಗಳು ಮಾಡುವ ಪ್ಲಾನ್‌ ಇಲ್ಲವೇ?

ನಿಜ ಹೇಳಬೇಕು ಅಂದರೆ ಒಬ್ಬ ಭೂಗತ ರೌಡಿ ಬಗ್ಗೆ ಕತೆ ಕೂಡ ಮಾಡಿಕೊಂಡಿದ್ದೆ. ರೌಡಿಗಳಲ್ಲೇ ಅತ್ಯಂತ ಸುಂದರವಾಗಿ ಕಾಣುತ್ತಿದ್ದ ವ್ಯಕ್ತಿ. ಆ ಪಾತ್ರವನ್ನು ದಿಗಂತ್‌ ಅವರಿಂದ ಮಾಡಿಸುವ ಯೋಚನೆ ಕೂಡ ಇತ್ತು. ಆ ಕತೆ, ಆ ವ್ಯಕ್ತಿ ಯಾರಂತ ಮುಂದೆ ಹೇಳುತ್ತೇನೆ.