ಸಾರಾಂಶ
ಕೋಲ್ಕತಾ: ಪಶ್ಚಿಮ ಬಂಗಾಳದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 25,753 ಶಿಕ್ಷಕರ ನೇಮಕಾತಿ ದೋಷಯುಕ್ತವಾಗಿದೆ ಎಂದು ಹೇಳಿರುವ ಸುಪ್ರೀಂಕೋರ್ಟ್, ನೇಮಕಾತಿಯನ್ನು ಅಮಾನ್ಯಗೊಳಿಸಿದೆ. ಇದರಿಂದಾಗಿ ನೇಮಕಾತಿ ರದ್ದು ಮಾಡಿದ್ದ ಕಲ್ಕತ್ತಾ ಹೈಕೋರ್ಟ್ನ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಆಡಳಿತಾರೂಢ ಟಿಎಂಸಿಗೆ ಹಿನ್ನಡೆಯಾಗಿದೆ.
ಮುಖ್ಯ ನ್ಯಾ। ಸಂಜೀವ್ ಖನ್ನಾ ಹಾಗೂ ನ್ಯಾ। ಸಂಜಯ್ ಕುಮಾರ್ ಅವರ ಪೀಠ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದ್ದು, ‘ಇಡೀ ಆಯ್ಕೆ ಪ್ರಕ್ರಿಯೆ ಬಗೆಹರಿಯದಷ್ಟು ದೋಷಪೂರಿತವಾಗಿದೆ. ದೊಡ್ಡ ಪ್ರಮಾಣದಲ್ಲಿ ದಾಖಲೆ ತಿರುಚುವಿಕೆ, ವಂಚನೆ, ಮುಚ್ಚಿಹಾಕುವ ಯತ್ನಗಳಾಗಿವೆ. ನೇಮಕಾತಿಯ ವಿಶ್ವಾಸಾರ್ಹತೆ ಮತ್ತು ಕಾನೂನುಬದ್ಧತೆಯನ್ನು ದುರ್ಬಲಗೊಳಿಸಲಾಗಿದೆ’ ಎಂದು ಹೇಳಿತು.
ಅಂತೆಯೇ, ಹೊಸದಾಗಿ ನೇಮಕಾತಿ ಆರಂಭಿಸಲು ಸೂಚಿಸಿದ್ದು, ಶಿಕ್ಷಕರು ಪಡೆದ ವೇತನವನ್ನು ಮರಳಿಸಬೇಕಿಲ್ಲ ಎಂದ ಕೋರ್ಟ್, ಮಾನವೀಯ ನೆಲೆಯಲ್ಲಿ ಅಂಗವಿಕಲ ನೌಕರರನ್ನು ಕೆಲಸದಲ್ಲಿ ಉಳಿಸಿಕೊಳ್ಳಲಾಗುವುದು ಎಂದಿದೆ.
ಏನಿದು ಪ್ರಕರಣ?:
2016ರಲ್ಲಿ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ 25,753 ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಮಾಡಿಕೊಂಡಿತ್ತು. ಆದರೆ ಆಯ್ಕೆಯಲ್ಲಿ ಅಕ್ರಮವಾಗಿದೆ. ಕಡಿಮೆ ಅಂಕ ಬಂದವರಿಗೂ ಹೆಚ್ಚಿನ ರ್ಯಾಂಕ್ ನೀಡಲಾಗಿದೆ, ಮೆರಿಟ್ ಲಿಸ್ಟ್ನಲ್ಲಿ ಇಲ್ಲದವರನ್ನೂ ನೇಮಕ ಮಾಡಲಾಗಿದೆ ಎಂದು ಹಲವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್, ಶಿಕ್ಷಕರ ಆಯ್ಕೆ ಕಾನೂನುಬದ್ಧವಾಗಿಲ್ಲ ಎಂದು 2024ರಲ್ಲಿ ಹೇಳಿ ಈ ಕುರಿತು ಸಿಬಿಐ ತನಿಖೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂಗೆ ಹೋಗಿತ್ತು. ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ತಡೆ ನೀಡಿತ್ತಾದರೂ ನೇಮಕ ರದ್ದತಿಗೆ ನಿರಾಕರಿಸಿತ್ತು. ಬಳಿಕ ಫೆ.10ರಂದು ಅಕ್ರಮವಾಗಿ ಆಯ್ಕೆಯಾದವರನ್ನೆಲ್ಲಾ ಅಮಾನತುಗೊಳಿಸುವಂತೆ ಆದೇಶಿಸಲಾಯಿತು.
ಮಮತಾ ರಾಜೀನಾಮೆಗೆ ಪಟ್ಟು:
ಅಮಾನತುಗೊಂಡ ಶಿಕ್ಷಕರ ನೇಮಕಾತಿಗೆ ಸಿಎಂ ಮಮತಾ ಬ್ಯಾನರ್ಜಿ ಅವರೇ ಕಾರಣ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ, ಅವರ ರಾಜೀನಾಮೆಗೆ ಆಗ್ರಹಿಸಿದೆ. ‘ವಿದ್ಯಾವಂತ ನಿರುದ್ಯೋಗಿ ಯುವಕರ ಅರ್ಹತೆಯನ್ನು ಮಮತಾ ಆಡಳಿತದಡಿ ಹಣಕ್ಕಾಗಿ ಮಾರಲಾಯಿತು’ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ್ ಮಜುಮ್ದಾರ್, ಅಕ್ರಮದ ಜವಾಬ್ದಾರಿ ತೆಗೆದುಕೊಂಡು ರಾಜೀನಾಮೆ ಕೊಡಬೇಕು ಎಂದರು.
ಹಣ ಸಿಕ್ಕ ಜಡ್ಜ್ಗೊಂದು, ಶಿಕ್ಷಕರಿಗೆ ಒಂದು ನೀತಿಯೇ: ಮಮತಾ ಕಿಡಿ
ಜಡ್ಜ್ ರೀತಿ ಶಿಕ್ಷಕರನ್ನೂ ವರ್ಗ ಮಾಡಿ: ಬಂಗಾಳ ಸಿಎಂ
ಕಲ್ಕತ್ತಾ: ಪಶ್ಚಿಮ ಬಂಗಾಳದ 25753 ಸರ್ಕಾರಿ ಶಿಕ್ಷರ ವಜಾ ಆದೇಶದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇತ್ತೀಚೆಗೆ ದೆಹಲಿ ಜಡ್ಜ್ ಮನೆಯಲ್ಲಿ ಸಿಕ್ಕ ಪ್ರಕರಣಕ್ಕೆ ಶಿಕ್ಷಕರ ನೇಮಕ ಹಗರಣ ಹೋಲಿಸಿ ನ್ಯಾಯಾಂಗವನ್ನು ಪ್ರಶ್ನಿಸಿದ್ದಾರೆ.ಸುಪ್ರೀಂಕೋರ್ಟ್ ತೀರ್ಪು ಬಗ್ಗೆ ಪ್ರತಿಕ್ರಿಯಿಸಿದ ಮಮತಾ, ‘ನನಗೆ ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ. ಅದರೆ ಈ ಆದೇಶವನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಆದರೂ ಸುಪ್ರೀಂಕೋರ್ಟ್ ಆದೇಶವನ್ನು ಜಾರಿಗೊಳಿಸಿ, ಮತ್ತೆ ಶಿಕ್ಷಕರ ನೇಮಕಾತಿ ನಡೆಸುತ್ತೇವೆ’ ಎಂದು ಹೇಳಿದ್ದಾರೆ.
ಇದೇ ವೇಳೆ ದೆಹಲಿ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ಹಣ ಪತ್ತೆಯಾಗುತ್ತಿದ್ದಂತೆ ಅವರನ್ನು ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸಿದ್ದನ್ನು ಉಲ್ಲೇಖಿಸಿದ ದೀದಿ, ‘ಅವರನ್ನಾದರೆ ವರ್ಗಾಯಿಸಲಾಯಿತು. ಈ ಶಿಕ್ಷಕರನ್ನೂ ವರ್ಗಾಯಿಸುತ್ತಿಲ್ಲ?’ ಎಂದು ಪ್ರಶ್ನಿಸಿದರು. ಅಂತೆಯೇ, ಮೊದಲು ಶಿಕ್ಷಕರ ವಜಾ ಆದೇಶ ಹೊರಡಿಸಿದ್ದವರು ಈಗ ಬಿಜೆಪಿ ಸಂಸದರಾಗಿರುವುದರತ್ತ ಬೊಟ್ಟು ಮಾಡುತ್ತ, ‘ಇದು ಬಿಜೆಪಿ ಹಾಗೂ ಸಿಪಿಎಂನ ಷಡ್ಯಂತ್ರ. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಕುಸಿಯಲಿ ಎಂದು ಬಿಜೆಪಿ ಬಯಸುತ್ತಿದೆಯೇ?’ ಎಂದು ಕಿಡಿಕಾರಿದರು.