ವಕ್ಫ್‌ ಮಸೂದೆ ಅಂಗೀಕಾರ - ನರೇಂದ್ರ ಮೋದಿ ಜಿಂದಾಬಾದ್ : ಸಂತ್ರಸ್ತ ಕೇರಳ ಕೈಸ್ತರ ಘೋಷಣೆ

| N/A | Published : Apr 04 2025, 12:47 AM IST / Updated: Apr 04 2025, 04:31 AM IST

ಸಾರಾಂಶ

ವಕ್ಫ್‌ ಮಂಡಳಿಯ ಭೂಕಬಳಿಕೆ ವಿರೋಧಿಸಿ ಕಳೆದ 173 ದಿನಗಳಿಂದ ಹೋರಾಟ ನಡೆಸಿಸುತ್ತಿದ್ದ ಕೇರಳದ ಮುನಬಂ ಗ್ರಾಮಸ್ಥರು ಲೋಕಸಭೆಯಲ್ಲಿ ಮಂಗಳವಾರ ತಡರಾತ್ರಿ ಮಸೂದೆ ಅಂಗೀಕಾರವಾಗುತ್ತಿದಂತೆ ಸಂಭ್ರಮಿಸಿದ್ದು, ‘ ನರೇಂದ್ರ ಮೋದಿ ಜಿಂದಾಬಾದ್‌’ ಎಂದು ಪ್ರಧಾನಿಗೆ ಜೈಕಾರ ಕೂಗಿದ್ದಾರೆ. 

 ಕೊಚ್ಚಿ: ವಕ್ಫ್‌ ಮಂಡಳಿಯ ಭೂಕಬಳಿಕೆ ವಿರೋಧಿಸಿ ಕಳೆದ 173 ದಿನಗಳಿಂದ ಹೋರಾಟ ನಡೆಸಿಸುತ್ತಿದ್ದ ಕೇರಳದ ಮುನಬಂ ಗ್ರಾಮಸ್ಥರು ಲೋಕಸಭೆಯಲ್ಲಿ ಮಂಗಳವಾರ ತಡರಾತ್ರಿ ಮಸೂದೆ ಅಂಗೀಕಾರವಾಗುತ್ತಿದಂತೆ ಸಂಭ್ರಮಿಸಿದ್ದು, ‘ ನರೇಂದ್ರ ಮೋದಿ ಜಿಂದಾಬಾದ್‌’ ಎಂದು ಪ್ರಧಾನಿಗೆ ಜೈಕಾರ ಕೂಗಿದ್ದಾರೆ. ಹೀಗೆ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಕ್ರೈಸ್ತರೇ ಹೆಚ್ಚು ಎಂಬುದು ವಿಶೇಷ.

ನೋಂದಾಯಿತ ದಾಖಲೆಗಳಿದ್ದರೂ ತಮ್ಮ ಭೂಮಿ ವಕ್ಫ್‌ ಆಸ್ತಿ ಎಂದು ಹೇಳಿ ಇಲ್ಲಿನ ಹಲವು ಕುಟುಂಬಗಳಿಗೆ ನೋಟಿಸ್‌ ನೀಡಿದ್ದ ವಕ್ಪ್‌ ಮಂಡಳಿ ವಿರುದ್ಧ ಮುನಬಂ ಗ್ರಾಮಸ್ಥರು ‘ಮುನಬಂ ಭೂ ಸಂರಕ್ಷಣಾ ಸಮಿತಿ’ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ನಡುವೆ ಕೇಂದ್ರ ಸರ್ಕಾರ ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕರಿಸಿದ್ದು, ಅವರ ಹೋರಾಟಕ್ಕೆ ದೊಡ್ಡ ಜಯ ಸಿಕ್ಕಂತಾಯಿತು. ಅಲ್ಲದೇ ತಮ್ಮ ಸಮಸ್ಯೆ ಬಗೆಹರಿಯಲಿದೆ ಎನ್ನುವ ಖುಷಿಯಿಂದ ಮುನಬಂನ ಸುಮಾರು 600 ಕುಟುಂಬಗಳಿಗೆ ಪಟಾಕಿ ಸಿಡಿಸಿ, ಕೇಂದ್ರ ಸರ್ಕಾರದ ಪರ ಘೋಷಣೆಗಳನ್ನು ಕೂಗಿ ನಿರ್ಧಾರ ಸ್ವಾಗತಿಸಿದರು.

ಆರ್‌ಸಿ ಸೇರಿದಂತೆ ಬಿಜೆಪಿಗರು ಭೇಟಿ:

ಕೇರಳ ವಕ್ಫ್‌ ಮಂಡಳಿಯ ವಿರುದ್ಧ ಸುಮಾರು 6 ತಿಂಗಳು ಹೋರಾಟಕ್ಕೆ ಸಾಕ್ಷಿಯಾಗಿದ್ದ ಮುನಬಂ ಗ್ರಾಮಕ್ಕೆ ಗುರುವಾರ ಬಿಜೆಪಿ ನಾಯಕರು ಭೇಟಿ ಮಾಡಿದ್ದಾರೆ. ಮಾಜಿ ಕೇಂದ್ರ ಸಚಿವ, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರನ್, ಬಿಜೆಪಿ ನಾಯಕ ಮುರುಳೀಧರನ್ ಸೇರಿ ಹಲವರು ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು.

ವಕ್ಫ್‌ ಮಸೂದೆ ಅಂಗೀಕಾರ: ಅಖಿಲ ಭಾರತ ಮುಸ್ಲಿಂ ಜಮಾತ್‌ ಸ್ವಾಗತ

ಬರೇಲಿ: ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆ ಮಂಗಳವಾರ ಅಂಗೀಕಾರ ನೀಡಿದ್ದನ್ನು ಅಖಿಲ ಭಾರತ ಮುಸ್ಲಿಂ ಜಮಾತ್‌ ಸ್ವಾಗತಿಸಿದ್ದು, ಈ ಕಾನೂನಿನಿಂದ ಹಿಂದುಳಿದ ಮುಸ್ಲಿಮರಿಗೆ ಆರ್ಥಿಕವಾಗಿ ನೆರವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.ಅಖಿಲ ಭಾರತ ಮುಸ್ಲಿಂ ಜಮಾತ್‌ ಅಧ್ಯಕ್ಷ ಶಹಬುದ್ದೀನ್ ರಜ್ವಿ ಬರೆಲ್ವಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ‘ಮಸೂದೆ ಪರವಾಗಿ ಮತಚಲಾಯಿಸಿದ ಎಲ್ಲಾ ಲೋಕಸಭಾ ಸದಸ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಮಹತ್ವದ ಹೆಜ್ಜೆಯನ್ನಿರಿಸಿದ ಸರ್ಕಾರಕ್ಕೆ ಅಭಿನಂದನೆಗಳು. ವಕ್ಫ್‌ನ ಮೂಲ ಉದ್ದೇಶವೇ ಬಡವರು, ಹಿಂದುಳಿದವರಿಗೆ, ಅನಾಥರಿಗೆ ಸಹಾಯ ಮಾಡುವುದು ವಕ್ಫ್‌ನ ಮೂಲ ಉದ್ದೇಶವಾಗಿತ್ತು. ಅದನ್ನು ಮರೆತು ಕೆಲವರಷ್ಟೇ ಅದರಿಂದ ಬರುವ ಹಣವನ್ನು ಜೇಬಿಗಿಳಿಸಿಕೊಳ್ಳುತ್ತಿದ್ದರು. ಇದೀಗ ಮಸೂದೆಯು ಸಕಾರಾತ್ಮಕ ಬದಲಾವಣೆ ತರಲಿದೆ. ಹಿಂದುಳಿದ ಮುಸ್ಲಿಮರ ಆರ್ಥಿಕ ಉನ್ನತಿಯನ್ನೂ ಇದರಿಂದ ಕಾಣಬಹುದು’ ಎಂದಿದ್ದಾರೆ.