ನವದೆಹಲಿ: ‘ಪ್ರತಿಭಟನೆ ವೇಳೆ ಕಾನೂನು ಜಾರಿ ಸಂಸ್ಥೆಗಳು ಸಂಯಮ ತೋರಬೇಕು. ‘ಕೆಲ ದಾರಿತಪ್ಪಿದ ವ್ಯಕ್ತಿಗಳು’ ಕಲ್ಲುತೂರಾಟದಂಥ ಕೃತ್ಯಗಳಲ್ಲಿ ತೊಡಗಿದರೂ ಪ್ರತಿಭಟನಾ ನಿರತ ಯುವಜನರನ್ನು ಶಾಂತಗೊಳಿಸಲು ಯತ್ನಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಸಲಹೆ ನೀಡಿದೆ.

ಮೆರವಣಿಗೆಯ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ಆರೋಪ

ಜು.20ರಂದು ನಡೆದ ಸಂಸತ್‌ ಚಲೋ ಮೆರವಣಿಗೆಯ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ, ಅದರ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಬುಧವಾರ ಅಂಗೀಕರಿಸಿದೆ.

ಅರ್ಜಿದಾರ ಮನೀಶ್ ಕುಮಾರ್ ಸೋಲಂಕಿ ಪರವಾಗಿ ಹಾಜರಾದ ವಕೀಲ ರಿಜ್ವಾನ್ ಅಹ್ಮದ್, ‘15 ದಿನಗಳು ಕಳೆದಿವೆ. ಮೆರವಣಿಗೆ ಆಯೋಜಿಸಿದ ಸಂಘಕಟರ ಹೊಣೆಗಾರಿಕೆ ಏನು? ಅವರು ಒಂದೆಡೆಯಿಂದ ಮತ್ತೊಂದೆಡೆ ಹೋಗಿ ಪ್ರಚೋದಕ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದರು.


ರಾಜ್ಯ ಸರ್ಕಾರಗಳು ಇಂಥ ಹೋರಾಟದ ಮುಂದೆ ಮಂಡಿಯೂರುತ್ತಾ ಹೋಗಬಾರದು

‘ಜೊತೆಗೆ ರಾಜ್ಯ ಸರ್ಕಾರಗಳು ಇಂಥ ಹೋರಾಟದ ಮುಂದೆ ಮಂಡಿಯೂರುತ್ತಾ ಹೋಗಬಾರದು. ಇತ್ತೀಚೆಗೆ ರಾಜಸ್ಥಾನದಲ್ಲಿ ಅಂಥದ್ದೇ ಘಟನೆ ನಡೆಯಿತು. ನಾಳೆ ಲಖನೌದ ಪದವಿ ಕಾಲೇಜು ವಿದ್ಯಾರ್ಥಿಗಳು ಇಂಥದ್ದೇ ಬೇಡಿಕೆ ಮುಂದಿಟ್ಟುಕೊಂಡು ಬಸ್‌ಗಳ ಮೇಲೆ ಕಲ್ಲು ತೂರುತ್ತಾರೆ. ಆಗ ಉತ್ತರಪ್ರದೇಶ ಸರ್ಕಾರವೂ ಮಂಡಿಯೂರುತ್ತಾ?’ ಎಂದು ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯಕಾಂತ್‌, ‘ಕೆಲ ದಾರಿ ತಪ್ಪಿದ ವ್ಯಕ್ತಿಗಳು ಕಲ್ಲುತೂರಾಟದಲ್ಲಿ ತೊಡಗಿದರೂ ಸಹ, ಅವರಿಗೆ ಬುದ್ಧಿಹೇಳಿ ಸಮಾಧಾನಪಡಿಸಬೇಕಾಗುತ್ತದೆ. ಯುವಕರು ಹಿಂಸಾಚಾರಕ್ಕೆ ತಿರುಗದಂತೆ ನಾವು ಎಚ್ಚರಿಕೆಯಿಂದ ಮುಂದುವರಿಯಬೇಕು. ಉತ್ತಮ ಮಾರ್ಗವೆಂದರೆ ಅವರಿಗೆ ಬುದ್ಧಿಹೇಳಿ ಸಮಾಧಾನಪಡಿಸುವುದು. ಅತ್ಯಂತ ಶಕ್ತಿಶಾಲಿ ಸಾಧನವೆಂದರೆ ಆಲಿಸುವುದು. ಅವರ ಮಾತನ್ನು ಆಲಿಸಿ ಅವರು ಏಕೆ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.