ಮದುವೆಗಾಗಿ ಟಿವಿ ನಿರೂಪಕರೊಬ್ಬರನ್ನು ಅಪಹರಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ನಂತರ ಮಹಿಳಾ ಉದ್ಯಮಿಯನ್ನು ಸೆರೆ ಹಿಡಿಯಲಾಗಿದೆ.

ಹೈದರಾಬಾದ್‌: ಮಹಿಳಾ ಉದ್ಯಮಿಯೊಬ್ಬರು ವಿವಾಹದ ತನ್ನ ಆಫರ್‌ ತಿರಸ್ಕರಿಸಿದ ಟೀವಿ ನಿರೂಪಕನನ್ನು ಬಂಧಿಸಿದ ಘಟನೆ ತೆಲಂಗಾಣದ ರಾಜಧಾನಿ ಹೈದ್ರಾಬಾದ್‌ನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಭೋಗಿರೆಡ್ಡಿ ತ್ರಿಶ್ನಾ ಎಂಬ ಉದ್ಯಮಿಯನ್ನು ಬಂಧಿಸಿದ್ದಾರೆ.

ಪ್ರಕರಣ ಹಿನ್ನೆಲೆ: ತ್ರಿಶ್ನಾ ಕಳೆದ 2 ವರ್ಷಗಳಿಂದ ವೈವಾಹಿಕ ಸಂಬಂಧ ಕುದುರಿಸಿಕೊಡುವ ವೆಬ್‌ಸೈಟ್‌ ಮೂಲಕ ಪರಿಚಯವಾದ ವ್ಯಕ್ತಿಯ ಜೊತೆ ಆನ್‌ಲೈನ್‌ ಚಾಟಿಂಗ್‌ ನಡೆಸುತ್ತಿದ್ದಳಂತೆ. ಆತ ತನ್ನ ಫೋಟೋ ಹಾಕುವ ಬದಲು ಮ್ಯೂಸಿಕ್‌ ಚಾನೆಲ್‌ ಒಂದರ ಆ್ಯಂಕರ್‌ ಫೋಟೋ ಹಾಕಿದ್ದ. ಬಳಿಕ ನಿಜ ತಿಳಿದ ಮೇಲೆ ನಿಜವಾಗಿಯೂ ನಿರೂಪಕನನ್ನು ಸಂಪರ್ಕಿಸಿದ್ದಾಳೆ.

ಆದರೆ ಆತ ಈಕೆಯ ಮದುವೆಯ ಪ್ರಸ್ತಾಪ ತಿರಸ್ಕರಿಸಿ, ಆಕೆಯ ನಂಬರ್‌ ಬ್ಲಾಕ್‌ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ನಿರೂಪಕನ ಕಾರಿನಲ್ಲಿ ಟ್ರ್ಯಾಕಿಂಗ್ ಸಾಧನ ಅಳವಡಿಸಿ, ನಾಲ್ವರ ಸಹಾಯದಿಂದ ಆ್ಯಂಕರ್‌ ಅಪಹರಿಸಿ ತನ್ನ ಕಚೇರಿಯಲ್ಲಿ ಹಲ್ಲೆ ನಡೆಸಿದ್ದಾಳೆ. ನಂತರ ಆಕೆಯ ಕರೆಗೆ ಪ್ರತಿಕ್ರಿಯಿಸುವುದಾಗಿ ಭರವಸೆ ನೀಡಿದ ಬಳಿಕ ಬಿಟ್ಟು ಕಳುಹಿಸಿದ್ದಾಳೆ. ಹೀಗೆ ಹೊರಬಂದ ಆತ ಕೇಸು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.