ನವದೆಹಲಿ : ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಮರುವ್ಯಾಖ್ಯಾನ ಕುರಿತು ತನ್ನ ನ..20ರ ತೀರ್ಪಿಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ನಿರ್ದೇಶನಗಳನ್ನು ಖುದ್ದು ಸುಪ್ರೀಂ ಕೋರ್ಟ್ ಸೋಮವಾರ ತಡೆ ಹಿಡಿದಿದೆ. 

ಏಕರೂಪದ ವ್ಯಾಖ್ಯಾನ ಮಾಡಿ ಕೇಂದ್ರ ಪರಿಸರ ಸಚಿವಾಲಯ ಸಲ್ಲಿಸಿಸ್ದ ವ್ಯಾಖ್ಯಾನಕ್ಕೆ ಮನ್ನಣೆ

ಕೋರ್ಟು ನ.20ರಂದು ಅರಾವಳಿ ಬೆಟ್ಟಗಳ ಕುರಿತು ಏಕರೂಪದ ವ್ಯಾಖ್ಯಾನ ಮಾಡಿ ಕೇಂದ್ರ ಪರಿಸರ ಸಚಿವಾಲಯ ಸಲ್ಲಿಸಿಸ್ದ ವ್ಯಾಖ್ಯಾನಕ್ಕೆ ಮನ್ನಣೆ ನೀಡಿತ್ತು.

 ಇದರಿಂದ ಅರಾವಳಿ ಬೆಟ್ಟಗಳ ರಕ್ಷಣೆ ಬದಲು, ನಾಶವಾಗಲಿದೆ ಎಂದು ಪರಿಸರವಾದಿಗಳು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.ಇದರ ನಡುವೆತೇ ತನ್ನದೇ ತೀರ್ಪು ಮರುಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ನ್ಯಾ। ಸೂರ್ಯಕಾಂತ್, ನ್ಯಾ। ಗಳಾದ ಜೆ.ಕೆ. ಮಾಹೇಶ್ವರಿ ಮತ್ತು ಅಗಸ್ಟೀನ್ ಜಾರ್ಜ್ ಮಸೀಹ್ ಅವರ ರಜಾಕಾಲದ ಪೀಠ, ಈ ವಿಷಯದ ಕುರಿತು ಸಮಗ್ರವಾಗಿ ಪರಿಶೀಲಿಸಲು ತಜ್ಞರನ್ನು ಒಳಗೊಂಡ ಉನ್ನತ ಸಮಿತಿ ರಚಿಸಲು ಹಾಗೂ ಆ ಸಮಿತಿ ನೀಡುವ ವರದಿಯಂತೆ ಮುಂದಿನ ನಡೆ ಅನುಸರಿಸಲು ನಿರ್ಧರಿಸಿತು.


ಕೋರ್ಟ್‌ ನಿರ್ಣಯವನ್ನು ಕೇಂದ್ರ ಸರ್ಕಾರ ಹಾಗೂ ಕಾಂಗ್ರೆಸ್‌ ಸ್ವಾಗತಿಸಿವೆ.

ವಿವಾದ ಏನು?:

ಗುಜರಾತ್‌, ಹರ್ಯಾಣ ಹಾಗೂ ರಾಜಸ್ಥಾನದಲ್ಲಿ ಅರಾವಳಿ ಪರ್ವತ ಶ್ರೇಣಿಗಳು ಹಾದು ಹೋಗುತ್ತವೆ. ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಸಂರಕ್ಷಣೆಗಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಮಿತಿ ನೀಡಿದ್ದ ಏಕರೂಪದ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್ ನ.20ರಂದು ಅನುಮೋದಿಸಿತ್ತು.

ಈ ಪ್ರಕಾರ, ರಾಜಸ್ಥಾನ, ಗುಜರಾತ್, ಹರ್ಯಾಣದಲ್ಲಿನ 100 ಮೀ.ಮತ್ತು ಅದಕ್ಕಿಂತ ಎತ್ತರದ ಭೂಪ್ರದೇಶಗಳನ್ನು ಮಾತ್ರ ಅರಾವಳಿ ಬೆಟ್ಟಗಳು ಎಂದು ಪರಿಗಣಿಸಲಾಗಿತ್ತು. ಅಲ್ಲದೆ, 500 ಮೀ. ಅಂತರದಲ್ಲಿರುವ 2 ಅಥವಾ ಅದಕ್ಕಿಂತ ಹೆಚ್ಚಿನ ಬೆಟ್ಟಗಳನ್ನು ಅರಾವಳಿ ಶ್ರೇಣಿಗಳೆಂ ದು ಪರಿಗಣಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.

ಆದರೆ, ಈ ಮರುವ್ಯಾಖ್ಯಾನದಿಂದಾಗಿ ಅರಾವಳಿ ವ್ಯಾಪ್ತಿಯ 100 ಮೀ.ಗಿಂತ ಕಡಿಮೆ ಎತ್ತರದ ಪ್ರದೇಶಗಳಲ್ಲಿ ಇನ್ನು ಗಣಿಗಾರಿಕೆಗೆ ಅನುಮತಿ ಸಿಗಲಿದೆ. 100 ಮೀ.ಗಿಂತ ಕಡಿಮೆ ಎತ್ತರದ ಬೆಟ್ಟಗಳೇ ಇಲ್ಲಿ ಹೆಚ್ಚಿದ್ದು, ಮಾನವ ಹಸ್ತಕ್ಷೇಪ ನಡೆದು ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ರಾಜಸ್ಥಾನ, ಹರ್ಯಾಣ ಮತ್ತು ಗುಜರಾತಲ್ಲಿ ವ್ಯಾಪಕ ಪ್ರತಿಭಟನೆಗಳು ಆರಂಭಗೊಂಡಿದ್ದವು.