- ತಂಬಾಕು ಉತ್ಪನ್ನಗಳಿಗೆ ಪರೋಕ್ಷ ಪ್ರಚಾರದ ಆರೋಪಮುಂಬೈ: ವಿಮಲ್ ಎಲಾಯ್ಚಿ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ನಟ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ವಿಭಾಗವು ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಸದ್ಯ ರಾಜ್ಯದಲ್ಲಿ ಕಲಬೆರಕೆ ವಸ್ತುಗಳ ವಿರುದ್ಧ ಸಮರ ಸಾರಿರುವ ಹಿರಿಯ ಅಧಿಕಾರಿ ತುಕಾರಾಂ ಮುಂಡೆ ಅವರ ನೇತೃತ್ವದ ಎಫ್ಡಿಎ ಇಲಾಖೆ ಈ ನೋಟಿಸ್ ಜಾರಿ ಮಾಡಿದೆ.
ನೋಟಿಸ್ನಲ್ಲಿ ನಿಷೇಧಿತ ವಸ್ತುಗಳನ್ನೇ ಹೋಲುವ ವಸ್ತುಗಳನ್ನು ಪರ್ಯಾಯ ವಸ್ತುಗಳ ಮೂಲಕ ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಅಲ್ಲದೆ ಈ ಕುರಿತ ಎಲ್ಲಾ ಪ್ರಚಾರದ ವಸ್ತುಗಳನ್ನು ಜಾಲತಾಣದಿಂದ 15 ದಿನಗಳಲ್ಲಿ ತೆಗೆದು ಹಾಕವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ.ನೋಟಿಸ್ ಏಕೆ?:
ಸದ್ಯ ರಾಜ್ಯದಲ್ಲಿ ನಿಕೋಟಿನ್ ಮಿಶ್ರಿತ ಪಾನ್ ಮಸಾಲಾ ಮತ್ತು ತಂಬಾಕು ಉತ್ಪನ್ನಗಳಿಗೆ ನಿಷೇಧವಿದೆ. ಆದರೆ ವಿಮಲ್ ಎಲಾಯ್ಚಿ ಜಾಹೀರಾತಿನ ಮೂಲಕ ಇದೇ ಕಂಪನಿಯ ನಿರ್ಬಂಧಿತ ಪಾನ್ ಮಸಾಲ ಮತ್ತು ತಂಬಾಕು ಉತ್ಪನ್ನಗಳಿಗೆ ಪರೋಕ್ಷವಾಗಿ ಬೆಂಬಲ ಪ್ರಚಾರ ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂಬ ಕಾರಣಕ್ಕಾಗಿ ಮೂವರಿಗೂ ಆ.11ರಂದು ನೋಟಿಸ್ ಜಾರಿ ಮಾಡಲಾಗಿದೆ. ಮೂವರಿಂದ ಉತ್ತರ ಬಂದ ಬಳಿಕ, ಅದು ತೃಪ್ತಿಕರ ಇಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.ವಿಮಲ್ ಎಲಾಯ್ಚಿ ಜಾಹೀರಾತು ವಿಮಲ್ ಪಾನ್ ಮಸಾಲಾ ಬ್ರ್ಯಾಂಡ್ ಜತೆಗೆ ಸಂಬಂಧ ಕಲ್ಪಿಸುವ ಉದ್ದೇಶದಂತೆ ಕಾಣುತ್ತಿದೆ. ಇದು ಗ್ರಾಹಕರ ದಾರಿತಪ್ಪಿಸುವುದಲ್ಲದೆ ಪರೋಕ್ಷವಾಗಿ ನಿರ್ಬಂಧಿತ ಉತ್ಪನ್ನಕ್ಕೆ ಪ್ರಚಾರ ನೀಡುವಂತೆ ತೋರುತ್ತಿದೆ ಎಂದು ಎಫ್ಡಿಎ ಅಭಿಪ್ರಾಯಪಟ್ಟಿದೆ.