ಸಾರಾಂಶ
ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ಆಗಲೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನುಗ್ಗಲು ಸಾಧ್ಯ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹಿಂದೊಮ್ಮೆ ಹೇಳಿದ್ದರು. ಯುವ ಸಮುದಾಯಗಳ ಆಕ್ರೋಶದ ನಡುವೆಯೂ ಅವರು ಅದನ್ನು ಸಮರ್ಥಿಸಿಕೊಂಡಿದ್ದರು.
ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ಆಗಲೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನುಗ್ಗಲು ಸಾಧ್ಯ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹಿಂದೊಮ್ಮೆ ಹೇಳಿದ್ದರು. ಯುವ ಸಮುದಾಯಗಳ ಆಕ್ರೋಶದ ನಡುವೆಯೂ ಅವರು ಅದನ್ನು ಸಮರ್ಥಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಇನ್ಫಿ ಆ ಬಗ್ಗೆ ಮಾತನಾಡಿದ್ದಾರೆ. ಮನಸ್ಥಿತಿ ಮತ್ತು ಮನಸ್ಸಿನ ನಡುವಿನ ಹೋರಾಟ, ಖಾಸಗಿ, ವೈಯಕ್ತಿಕ ಬದುಕಿನಲ್ಲಿ ಸಮತೋಲನ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ.
==
ಎನ್. ಆರ್. ನಾರಾಯಣ ಮೂರ್ತಿ, ಇನ್ಫೋಸಿಸ್ ಸಹ ಸಂಸ್ಥಾಪಕ
==
ನಾವೆಲ್ಲರೂ ಮನಸ್ಥಿತಿ ಮತ್ತು ಮನಸ್ಸಿನ ನಡುವೆ ಹೋರಾಡುತ್ತಿದ್ದೇವೆ ಎಂದು ಸ್ನೇಹಿತ ರಮೇಶ್ ಮಿಶೆಲ್ಕರ್ ನಾಲ್ಕು ದಶಕಗಳ ಹಿಂದೆ ಹೇಳಿದ್ದರು. ಮನಸ್ಥಿತಿಯು ಭಯ, ಸಂದಿಗ್ಧತೆ, ಆತ್ಮವಿಶ್ವಾಸದ ಕೊರತೆ, ಹತಾಶೆ, ನೆಪಗಳನ್ನು ಸೂಚಿಸಿದರೆ, ಮನಸ್ಸು ನಾನು ಅದನ್ನು ಜಯಿಸುತ್ತೇನೆ ಎನ್ನುವ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಕಠಿಣ ಸಂದರ್ಭದಲ್ಲಿಯೂ ಮನಸ್ಸಿನ ಪರವಾಗಿ ಯುದ್ಧವನ್ನು ಗೆಲ್ಲಿಸುವುದಕ್ಕೆ ಸಿದ್ಧರಾಗಿರಬೇಕು.
ಭಾರತವು ಮನಸ್ಸು, ಮನಸ್ಥಿತಿಯ ವಿಚಾರದಲ್ಲಿ ಅಧಿಕಾರಶಾಹಿ ಮತ್ತು ಆಡಳಿತ, ಉದ್ಯಮಿಗಳು, ಶಿಕ್ಷಣ ವ್ಯವಸ್ಥೆ ಎನ್ನುವ ಮೂರು ಕ್ಷೇತ್ರಗಳಲ್ಲಿ ಯುದ್ಧ ಗೆಲ್ಲಬೇಕಿದೆ. ಅದರ ವಿರುದ್ಧ ಹೋರಾಡಬೇಕಿದೆ. ಇವೆಲ್ಲವೂ ಆದಾಗಲೇ ಸುತ್ತಲಿನ ವ್ಯವಸ್ಥೆಯನ್ನು ಬದಲಿಸಿಕೊಂಡು ಮನಸ್ಥಿತಿ, ಮನಸ್ಸನ್ನು ಬದಲಿಸಬಹುದು .ಮೊದಲು ನಾವು ಒಂದೊಳ್ಳೆ ಜೀವನ ಪಡೆಯಬೇಕು. ಆ ಬಳಿಕ ವೃತ್ತಿ ಜೀವನದ ಬಗ್ಗೆ ಯೋಚಿಸಬೇಕು.
ನಾನು ಕಾರ್ಪೋರೆಟ್ ಸಂಸ್ಥೆಗಳ ದಿಗ್ಗಜರು, ಪ್ರಸಿದ್ಧ ಪ್ರಾಧ್ಯಾಪಕರೊಂದಿಗೆ ಮಾತನಾಡಿದ್ದೇನೆ. ಭಾರತ ಮತ್ತು ಅಮೆರಿಕದ ಹಲವು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಿಗೂ ಭೇಟಿ ನೀಡಿದ್ದೇನೆ. ಅವೆಲ್ಲವೂಗಳಿಂದ ನನಗೆ ಸ್ಪಷ್ಟವಾದ ಒಂದು ವಿಚಾರವೆಂದರೆ ಯಾವುದೇ ವ್ಯಕ್ತಿ ಅಥವಾ ಸಮುದಾಯ, ಇಲ್ಲವೇ ಒಂದು ದೇಶವೇ ಆಗಿರಲಿ ಯಾರೂ ಕೂಡ ಕಠಿಣ ಶ್ರಮವಿಲ್ಲದೆ ಮೇಲೆ ಬಂದಿಲ್ಲ. ಯಶಸ್ಸಿನ ಹಿಂದೆ ಅಪಾರ ಪರಿಶ್ರಮವಿದೆ.
ಪ್ರಧಾನಿ ನರೇಂದ್ರ ಮೋದಿಯವರು ವಾರಕ್ಕೆ 100 ಗಂಟೆ ಕೆಲಸ ಮಾಡುತ್ತಾರೆ, ಇದು ಇಂದಿನ ಪೀಳಿಗೆಯ ಯುವಕರಿಗೆ ಪ್ರೇರಣೆ. ಯಾಕೆಂದರೆ ಕಡಿಮೆ ಅವಕಾಶಗಳನ್ನು ಹೊಂದಿರುವವರು ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಕಡಿಮೆ ಸಾಧ್ಯತೆಯಲ್ಲಿ ಉತ್ತಮ ಸಾಧ್ಯತೆಗಳನ್ನು ಕಂಡುಕೊಳ್ಳಬಹುದು. ನನ್ನ ಪ್ರಕಾರ ಕಠಿಣ ಪರಿಶ್ರಮ ಎನ್ನುವುದು ಒಬ್ಬ ವ್ಯಕ್ತಿ, ಸಮುದಾಯ, ಅಥವಾ ದೇಶದ ಯಶಸ್ಸಿಗೆ ಬಹು ಮುಖ್ಯ.
ಅಲ್ಲಿನವರು 9, 9, 6ರ ಮಾದರಿಯಲ್ಲಿ ಕೆಲಸ ಮಾಡುತ್ತಾರೆ
ಕಳೆದ ವಾರ ಕಾಠ್ಮಂಡುವಿನ ಹಿರಿಯ ಮತ್ತು ಮಧ್ಯಮ ಶ್ರೇಣಿಯ ಸಿಬ್ಬಂದಿ ಚೀನಾಕ್ಕೆ ಹೋಗಿದ್ದರು. ಅಲ್ಲಿ ಅಭಿವೃದ್ಧಿ ದೃಷ್ಟಿಯಲ್ಲಿ ಮೊದಲ, ಎರಡನೇ , ಮೂರನೇ ಹಂತದಲ್ಲಿರುವ ನಗರಗಳಿಗೆ ಭೇಟಿ ನೀಡಿದ್ದರು, ನಿಜವಾದ ಚೀನಾ ಅರಿಯುವುದಕ್ಕೆ ಮೂರನೇ ಹಂತದ ನಗರದಲ್ಲಿ ಹೋಟೆಲ್ಗಳಲ್ಲಿ ಉಳಿದುಕೊಂಡಿದ್ದರು. ಆಗ ಅಲ್ಲಿನವರ ಬಗ್ಗೆ ಒಂದು ಗಮನಾರ್ಹ ವಿಚಾರವನ್ನು ಗಮನಿಸಿದರು. ಅಲ್ಲಿನವರು 9, 9, 6ರ ಮಾದರಿಯಲ್ಲಿ ಕೆಲಸ ಮಾಡುತ್ತಾರೆ. ಇದರ ಅರ್ಥ ಬೆಳಿಗ್ಗೆ 9 ರಿಂದ ರಾತ್ರಿ 9ರ ತನಕ ವಾರದ 6 ದಿನವೂ ದುಡಿಯುತ್ತಾರೆ. ಅಂದರೆ ವಾರಕ್ಕೆ 72 ಗಂಟೆಗಳ ದುಡಿಮೆ. ಇದನ್ನು ನಾವು ಅಳವಡಿಸಿಕೊಳ್ಳಬೇಕಿದೆ. ಆಗ ಮಾತ್ರವೇ ಚೀನಾ ಮೀರಿಸಲು ಸಾಧ್ಯ.
ಚೀನಾ ಭಾರತದ ಒಟ್ಟು ಜಿಡಿಪಿಗಿಂತ ಸುಮಾರು ಆರು ಪಟ್ಟು ಹೆಚ್ಚಾಗಿದೆ
ಉತ್ಪಾದನೆಯಲ್ಲಿ ಚೀನಾವನ್ನು ಹಿಂದಿಕ್ಕಬೇಕು ಎನ್ನುವ ಮಹತ್ವಾಕಾಂಕ್ಷೆ ಸಮಂಜಸವೇ ಎನ್ನುವುದು ಕೆಲವರ ಅಭಿಪ್ರಾಯ. ಆದರೆ ನನ್ನ ಪ್ರಕಾರ ಅದೇನೂ ಅಸಾಧ್ಯವಲ್ಲ. ಪ್ರಸ್ತುತ ಚೀನಾ ಭಾರತದ ಒಟ್ಟು ಜಿಡಿಪಿಗಿಂತ ಸುಮಾರು ಆರು ಪಟ್ಟು ಹೆಚ್ಚಾಗಿದೆ. ಮತ್ತೊಂದೆಡೆ ನಾವು ಆರ್ಥಿಕತೆಯಲ್ಲಿ ಶೇ.6.57ರಷ್ಟು ವೇಗದ ಬೆಳವಣಿಗೆಯಲ್ಲಿ ಸಾಗುತ್ತಿದ್ದೇವೆ. ಇದನ್ನು ನೋಡಿದರೆ ಚೀನಾ ಹಿಂದಿಕ್ಕುವುದು ಅಸಾಧ್ಯವಲ್ಲ ಎಂದೆನಿಸುತ್ತದೆ.
ನಮ್ಮಲ್ಲಿ ಉತ್ತಮ ವಿಚಾರಗಳಿದ್ದರೆ, ನಾವು ಮಾಡುವ ಪ್ರತಿಯೊಂದು ಕೆಲಸ, ವಿಚಾರಗಳಲ್ಲಿಯೂ ಅಸಾಧಾರಣ ಶ್ರಮದಿಂದ ಮಾಡಿದರೆ, ಪ್ರತಿಯೊಬ್ಬ ನಾಗರಿಕ, ಅಧಿಕಾರಿ, ರಾಜಕಾರಣಿ, ಜನಪ್ರತಿನಿಧಿ, ಮನಸ್ಸು ಮಾಡಿದರೆ ಚೀನಾವನ್ನು ಹಿಂದಿಕ್ಕಬಹುದು. ಆದರೆ ಆ ಕೆಲಸ ಅಷ್ಟೊಂದು ಸುಲಭವಲ್ಲ ನಾವು ಅರಿತುಕೊಳ್ಳಬೇಕು. ಉನ್ನತ ಮಾನದಂಡಗಳನ್ನು ನಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳಬೇಕು. ಆಗಲೇ ಭಾರತ ಚೀನಾವನ್ನು ಹಿಂದಿಕ್ಕುವತ್ತ ಹೆಜ್ಜೆಯಿಡಲು ಸಾಧ್ಯ.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))