ಸಾರಾಂಶ
ವಯನಾಡು: ಕೇರಳದ ವಯನಾಡಿನಲ್ಲಿ ಘನಘೋರ ದುರಂತ ಸಂಭವಿಸಿ, 5 ದಿನಗಳೇ ಕಳೆದಿದ್ದು, ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಮುಂದುವರಿದಿದೆ. ಇದರ ನಡುವೆ ಭೂಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 358ಕ್ಕೆ ಏರಿದ್ದು, ಸುಮಾರು 250 ಮಂದಿ ಈವರೆಗೂ ಪತ್ತೆ ಆಗಿಲ್ಲ.
ದುರಂತದ ಸ್ಥಳದಲ್ಲಿ ರಕ್ಷಣಾ ಪಡೆಗಳು ಹಗಲಿರುಳು ಶ್ರಮ ವಹಿಸುತ್ತಿದ್ದು, ನಾಪತ್ತೆ ಆದವರ ಪತ್ತೆಗೆ ವಿಶೇಷ ಶ್ವಾನದಳಗಳು ಕೂಡ ಕೈಜೋಡಿಸಿವೆ. ರಕ್ಷಣಾ ಕಾರ್ಯದ ವೇಳೆ ಅವಶೇಷಗಳಡಿ ಸಿಗುತ್ತಿರುವ ಅರ್ಧಂಬರ್ಧ ಮೃತದೇಹಗಳು ಕೇರಳದ ಭೀಕರತೆಗೆ ಸಾಕ್ಷಿಯಾಗಿದೆ.
1 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ದುರಂತ ಭೂಮಿಯಲ್ಲಿ ಶ್ರಮಿಸುತ್ತಿದ್ದು, ಇಲ್ಲಿಯವರೆಗೆ ಸುಮಾರು 349 ಜನರನ್ನು ರಕ್ಷಿಸಿದ್ದಾರೆ. ದುರಂತದಲ್ಲಿ ಸುಮಾರು 250 ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಯಾಗಿ ಶೋಧ ಕಾರ್ಯ ಮುಂದುವರೆದಿದೆ.
ಈ ಕುರಿತು ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದು, ‘ರಕ್ಷಣಾ ಕಾರ್ಯಾಚರಣೆ ಕೊನೆ ಹಂತ ತಲುಪಿದೆ. ರಕ್ಷಣಾ ಕಾರ್ಯಾಚರಣೆ ವೇಳೆಯಲ್ಲಿ ಸಿಕ್ಕ ಅರ್ಧಂಬರ್ಧ ದೇಹಗಳ ಗುರುತು ಪತ್ತೆ ಮಾಡುವುದೇ ದೊಡ್ಡ ಸವಾಲು. ಇದುವರೆಗೆ 148 ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರ ಮಾಡಲಾಗಿದೆ. ಉಳಿದವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ದುರಂತದಲ್ಲಿ ಕೆಲವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದಿದ್ದಾರೆ.