ಮೋದಿ ವಿರುದ್ಧ ಸೀರೆ ಪೋಸ್ಟ್‌: ಕೈ ನಾಯಕಗೆ ಸೀರೆ ಉಡಿಸಿದ ಬಿಜೆಪಿಗರು!

| Published : Sep 24 2025, 01:04 AM IST

ಮೋದಿ ವಿರುದ್ಧ ಸೀರೆ ಪೋಸ್ಟ್‌: ಕೈ ನಾಯಕಗೆ ಸೀರೆ ಉಡಿಸಿದ ಬಿಜೆಪಿಗರು!
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಕಾರ್ಯಕರ್ತ ಪ್ರಕಾಶ ಪಗಾರೆ ಅವರಿಗೆ ಬಿಜೆಪಿಯವರು ಸೇರಿಕೊಂಡು ಸಾರ್ವಜನಿಕವಾಗಿ ಸೀರೆ ಉಡಿಸಿದ ಘಟನೆ ಮಂಗಳವಾರ ಡೊಂಬಿವಲಿಯಲ್ಲಿ ನಡೆದಿದೆ. ಪಗಾರೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸೀರೆ ಉಟ್ಟಿರುವಂತೆ ಚಿತ್ರವೊಂದನ್ನು ಸೃಷ್ಟಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

ಕಲ್ಯಾಣ್‌(ಮಹಾರಾಷ್ಟ್ರ): ಕಾಂಗ್ರೆಸ್‌ ಕಾರ್ಯಕರ್ತ ಪ್ರಕಾಶ ಪಗಾರೆ ಅವರಿಗೆ ಬಿಜೆಪಿಯವರು ಸೇರಿಕೊಂಡು ಸಾರ್ವಜನಿಕವಾಗಿ ಸೀರೆ ಉಡಿಸಿದ ಘಟನೆ ಮಂಗಳವಾರ ಡೊಂಬಿವಲಿಯಲ್ಲಿ ನಡೆದಿದೆ. ಪಗಾರೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸೀರೆ ಉಟ್ಟಿರುವಂತೆ ಚಿತ್ರವೊಂದನ್ನು ಸೃಷ್ಟಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಪಗಾರೆ ಅವರ ಕೃತ್ಯದಿಂದ ಬಿಜೆಪಿಗರು ಸಿಟ್ಟಿಗೆದ್ದಿದ್ದು, ‘ದೇಶದ ಅತ್ಯುನ್ನತ ಹುದ್ದೆಗೆ ಮಾಡಿದ ಅವಮಾನ. ಪ್ರಧಾನಿಯವರ ಅವಮಾನಕರ ಚಿತ್ರಗಳನ್ನು ಹಂಚಿಕೊಳ್ಳುವುದು ಆಕ್ರಮಣಕಾರಿ ಅಷ್ಟೇ ಅಲ್ಲ, ಸ್ವೀಕಾರಾರ್ಹವೂ ಅಲ್ಲ. ಹೀಗೆ ಮಾಡಿದವರಿಗೆ ತೀಕ್ಷ್ಣ ಉತ್ತರ ನೀಡುತ್ತೇವೆ’ ಎಂದು ಕಲ್ಯಾಣ್‌ ನ ಬಿಜೆಪಿ ಜಿಲ್ಲಾಧ್ಯಕ್ಷ ನಂದು ಪರಬ್‌ ಎಚ್ಚರಿಸಿದ್ದಾರೆ. ಜತೆಗೆ, ಪಗಾರೆ ಅವರಿಗೆ ಒತ್ತಾಯಪೂರ್ವಕವಾಗಿ ಸೀರೆ ಉಡಿಸಿದ್ದಾರೆ. ಕಾಂಗ್ರೆಸ್‌ ತಿರುಗೇಟು:

ಬಿಜೆಪಿಗರ ಈ ನಡೆಯನ್ನು ಖಂಡಿಸಿರುವ ಕಲ್ಯಾಣ್‌ನ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಚಿನ್‌ ಪೋಟೆ, ‘ಪಗಾರೆ 73 ವರ್ಷದ ಹಿರಿಯರು. ಅವರು ಆಕ್ಷೇಪಾರ್ಹ ಪೋಸ್ಟ್‌ ಮಾಡಿದ್ದರೆ ದೂರು ದಾಖಲಿಸಬೇಕಿತ್ತು. ಕಾಂಗ್ರೆಸ್‌ ಬಗ್ಗೆ ಬಿಜೆಪಿ ಇಂತಹ ಪೋಸ್ಟ್‌ಗಳನ್ನು ಹಾಕಿದಾಗ ನಾವು ಹೀಗೆ ಮಾಡುವುದಿಲ್ಲ’ ಎಂದಿದ್ದಾರೆ.

==

ಮೈಸೂರಿನಲ್ಲಿ ಓದಿದ್ದ ಗೋಯಲ್‌ಗೆ ಅಮೆರಿಕ ಕಂಪನಿ ಉನ್ನತ ಹುದ್ದೆ

ವಾಷಿಂಗ್ಟನ್‌: ಒಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್1ಬಿ ವೀಸಾ ಶುಲ್ಕ ಹೆಚ್ಚಿಸಿ ಭಾರತೀಯರು ಸೇರಿ ವಿದೇಶಿ ನೌಕರರ ಮೇಲೆ ಪ್ರಹಾರ ಮಾಡಿದ್ದರೆ ಅಮೆರಿಕ ಕಂಪನಿಗಳು ಭಾರತೀಯರಿಗೆ ಉನ್ನತ ಸ್ಥಾನ ನೀಡಿಕೆ ಮುಂದುವರಿಸಿವೆ. ಮೈಸೂರಿನಲ್ಲಿ ಎಂಜಿನಿಯರಿಂಗ್‌ ಓದಿದ್ದ ರಾಹುಲ್ ಗೋಯಲ್ ಅವರನ್ನುಶಿಕಾಗೋ ಮೂಲದ ಮೊಲ್ಸನ್ ಕೂರ್ಸ್ ಎಂಬ ಮದ್ಯ ತಯಾರಿಕಾ ಕಂಪನಿ ಸಿಇಒ ಹಾಗೂ ಅಧ್ಯಕ್ಷನನ್ನಾಗಿ ನೇಮಿಸಿದೆ. ಇದೇ ವೇಳೆ, ಟಿ-ಮೊಬೈಲ್‌ ಕಂಪನಿಯು ಶ್ರೀನಿವಾಸ ಗೋಪಾಲನ್ ಅವರನ್ನು ಸಿಇಒ ಆಗಿ ನೇಮಿಸಿದೆ. ಮೊಲ್ಸನ್‌ ಕೂರ್ಸ್‌ ವಿಶ್ವದ ದೊಡ್ಡ ಮದ್ಯ ತಯಾರಿಕಾ ಕಂಪನಿಗಳಲ್ಲಿ ಒಂದು.

==

ಬೆಟ್ಟಿಂಗ್ ಆ್ಯಪ್‌ ಕೆಸು: ಕ್ರಿಕೆಟಿಗ ಯುವರಾಜ್‌ ಸಿಂಗ್‌ ಇ.ಡಿ. ವಿಚಾರಣೆ

ನವದೆಹಲಿ: ಆನ್‌ಲೈನ್‌ ಬೆಂಟ್ಟಿಂಗ್‌ ಆ್ಯಪ್‌ 1xBet ಪ್ರಚಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಮಂಗಳವಾರ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾದರು.ವಿಚಾರಣೆ ವೇಳೆ ಯುವರಾಜ್‌ ನೀಡಿದ ಉತ್ತರಗಳನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ದಾಖಲಿಸಿಕೊಳ್ಳಲಾಯಿತು.ಸೋಮವಾರವಷ್ಟೇ ಕನ್ನಡಿಗ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ಕೂಡ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ್ದರು. ಈಗಾಗಲೇ ಕ್ರಿಕೆಟಿಗರಾದ ಸುರೇಶ್‌ ರೈನಾ, ಶಿಖರ್‌ ಧವನ್‌, ನಟಿ ಮಿಮಿ ಚಕ್ರವರ್ತಿ, ಊರ್ವಶಿ ರೌಟೇಲಾ ಸೇರಿ ಹಲವರ ವಿಚಾರಣೆ ಆಗಿದೆ. ಬುಧವಾರ ನಟ ಸೋನು ಸೂದ್‌ರ ವಿಚಾರಣೆ ನಡೆಯಲಿದೆ.

==

ಚಿನ್ನದ ₹1,18,900ಕ್ಕೆ ನೆಗೆತ: ದಿಲ್ಲಿಯಲ್ಲಿ ದಾಖಲೆ

ಬೆಳ್ಳಿ ಬೆಲೆಯೂ 1.36 ಲಕ್ಷ ರು.ಗೆ ನೆಗೆತ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನ 2700 ರು. ಏರಿಕೆಯಾಗಿ 10 ಗ್ರಾಂಗೆ 1,18,900 ರು.ಗೆ ತಲುಪಿದೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಇನ್ನು ಬೆಳ್ಳಿ ಬೆಲೆ ಕೇಜಿಗೆ 3,220 ರು. ಏರಿ ದಾಖಲೆಯ 1,36,380 ರು.ನಲ್ಲಿ ಸ್ಥಿರವಾಗಿದೆ.

ಅಮೆರಿಕದಲ್ಲಿ ಎಚ್‌-1ಬಿ ವೀಸಾ ಶುಲ್ಕ ಹೆಚ್ಚಳ, ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿತದಿಂದಾಗಿ ಚಿನ್ನದ ಬೆಲೆಯು ಗಗಮುಖಿಯಾಗಿದೆ.ಇದೇ ವೇಳೆ, ಬೆಂಗಳೂರಿನಲ್ಲಿ 99.5 ಶುದ್ಧತೆಯ ಚಿನ್ನದ ಬೆಲೆಯು 2100 ರು. ಏರಿಕೆಯಾಗಿ 10 ಗ್ರಾಂಗೆ 1,18,700 ರು.ಗೆ ತಲುಪಿದೆ. ಆಭರಣ ಚಿನ್ನವು ಪ್ರತಿ ಗ್ರಾಂಗೆ 10,795 ರು.ಗೆ ಹೆಚ್ಚಿದೆ. ಮತ್ತೊಂದೆಡೆ ಬೆಳ್ಳಿ ಕೇಜಿಗೆ 1700 ರು. ಜಿಗಿದು 1,42,200 ರು.ಗೆ ತಲುಪಿದೆ.

ಸೋಮವಾರ ಬೆಂಗಳೂರಿನಲ್ಲಿ ಚಿನ್ನ 1.16 ಲಕ್ಷ ರು., ಬೆಳ್ಳಿ 1.40 ಲಕ್ಷ ರು. ಇತ್ತು.