ನವದೆಹಲಿ: ಪಾಕಿಸ್ತಾನದ ಪಾಲಿಗೆ ಈ ಬಾರಿಯ ಬೇಸಿಗೆ ಭೀಕರವಾಗಿರಲಿದೆ. ಕಾರಣ, ಸಿಂಧೂ ನದಿಯ ಉಪನದಿಯಾಗಿರುವ ರಾವಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಶಹಪುರ ಕಂಡಿ ಅಣೆಕಟ್ಟಿನ ಕೆಲಸ ಮುಕ್ತಾಯದ ಹಂತಕ್ಕೆ ಬಂದಿದೆ. ಒಮ್ಮೆ ಇದು ಪೂರ್ಣಗೊಂಡಲ್ಲಿ, ಪಾಕಿಸ್ತಾನಕ್ಕೆ ಹರಿಯುವ ಹೆಚ್ಚುವರಿ ನೀರಿಗೆ ಕತ್ತರಿ ಬೀಳಲಿದೆ. ಭಾರತದೊಂದಿಗಿನ ಸಿಂಧೂ ಜಲ ಒಪ್ಪಂದ ಸ್ಥಗಿತದಿಂದ ತತ್ತರಿಸಿರುವ ಪಾಕ್‌ಗೆ ಇದು ಮತ್ತೊಂದು ಆಘಾತ.

ಡ್ಯಾಂ ಬಗ್ಗೆ ಜಮ್ಮುಕಾಶ್ಮೀರ ಸಚಿವ ಜಾವೇದ್‌ ರಾಣಾ ಮಾಹಿತಿ

ಡ್ಯಾಂ ಬಗ್ಗೆ ಜಮ್ಮುಕಾಶ್ಮೀರ ಸಚಿವ ಜಾವೇದ್‌ ರಾಣಾ ಮಾಹಿತಿ ನೀಡಿದ್ದು, ‘ಈ ಯೋಜನೆ ಮಾ.31ರ ಒಳಗೆ ಮುಕ್ತಾಯವಾಗಲಿದೆ. ಇದು, ಬರಗಾಲಪೀಡಿತ ಪ್ರದೇಶಗಳಾದ ಕಥುವಾ ಮತ್ತು ಸಾಂಬಾ ಜಿಲ್ಲೆಗಳಿಗೆ ಅತ್ಯಗತ್ಯ’ ಎಂದರು. ಅಧಿಕಾರಿಗಳ ಪ್ರಕಾರ ಈ ಅಣೆಕಟ್ಟಿನಿಂದ ಪಂಜಾಬ್‌ನ 5,000 ಹೆಕ್ಟೇರ್‌, ಕಥುವಾ ಮತ್ತು ಸಾಂಬಾದ ಸುಮಾರು 32,173 ಹೆಕ್ಟೇರ್‌ ಪ್ರದೇಶದಲ್ಲಿ ನೀರಾವರಿಗೆ ಅನುಕೂಲವಾಗಲಿದೆ. ಅತ್ತ, ಇಷ್ಟರವರೆಗೆ ಪಾಕಿಸ್ತಾನಕ್ಕೆ ಅನಿಯಂತ್ರಿತವಾಗಿ ಹರಿಯುತ್ತಿದ್ದ ನೀರು ಇನ್ನುಮುಂದೆ ಸಿಗುವುದಿಲ್ಲ. ಅತಿಹೆಚ್ಚು ನರಳುವುದು ಪಾಕ್‌ನ ಪಂಜಾಬ್‌ ಪ್ರಾಂತ್ಯ.

ಸಿಂಧೂ ನದಿ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿದೆ

ಏ.22ರ ಪಹಲ್ಗಾಂ ಉಗ್ರದಾಳಿಗೆ ಪ್ರತಿಯಾಗಿ, ಉಭಯ ದೇಶಗಳ ನಡುವೆ 1960ರಲ್ಲಿ ಏರ್ಪಟ್ಟಿದ್ದ ಸಿಂಧೂ ನದಿ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿದೆ. ಇದರನ್ವಯ, ಪಾಕಸ್ತಾನಕ್ಕೀಗ ಮೊದಲಿನಂತೆ ಯತೇಚ್ಛ ನೀರು ಸಿಗದು. ಕಾರಣ, ಭಾರತ ತನ್ನ ನೆಲದಲ್ಲಿ ಹರಿಯುವ ನದಿ ನೀರನ್ನು ಬಳಸಿಕೊಳ್ಳಲು ಸ್ವತಂತ್ರವಾಗಿದ್ದು, ಈಗಾಗಲೇ ಹಲವು ಅಣೆಕಟ್ಟುಗಳ ಮೂಲಕ ನೀರಿನ ಹರಿವನ್ನು ಭಾಗಷಃ ತಡೆಹಿಡಿಯಲಾಗಿದೆ. ಜತೆಗೆ ಆ ಬಗೆಗಿನ ಮಾಹಿತಿಯನ್ನೂ ಹಂಚಿಕೊಳ್ಳಲಾಗುತ್ತಿಲ್ಲ.