ಸಾರಾಂಶ
ಏ.22ರಂದು ಭೀಕರ ಭಯೋತ್ಪಾದಕ ದಾಳಿಗೆ ಸಾಕ್ಷಿಯಾದ ಪಹಲ್ಗಾಂನಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಂಗಳವಾರ ವಿಶೇಷ ಸಂಪುಟ ಸಭೆ ಸಂಪುಟ ಸಭೆ ನಡೆಸಿದ್ದಾರೆ.
ಪಹಲ್ಗಾಂ: ಏ.22ರಂದು ಭೀಕರ ಭಯೋತ್ಪಾದಕ ದಾಳಿಗೆ ಸಾಕ್ಷಿಯಾದ ಪಹಲ್ಗಾಂನಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಂಗಳವಾರ ವಿಶೇಷ ಸಂಪುಟ ಸಭೆ ಸಂಪುಟ ಸಭೆ ನಡೆಸಿದ್ದಾರೆ. ಈ ಮೂಲಕ ಸರ್ಕಾರವು ಹೇಡಿತನದ ಉಗ್ರ ಕೃತ್ಯಗಳಿಗೆ ಬೆದರುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಪಹಲ್ಗಾಂ ದಾಳಿ ಬಳಿಕ ಪ್ರವಾಸಿಗರ ಕೊರತೆ ಎದುರಿಸುತ್ತಿರುವ ಜಮ್ಮು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸರ್ಕಾರ ಸೋಮವಾರವಷ್ಟೇ ಪ್ರವಾಸಿ ಪ್ಯಾಕೇಜ್ನಲ್ಲಿ ಶೇ.50 ರಿಯಾಯಿತಿ ಘೋಷಿಸಿತ್ತು. ಅದರ ಬೆನ್ನಲ್ಲೆ, ಅಲ್ಲಿಯೇ ಸಂಪುಟ ಸಭೆ ನಡೆಸಿ ಪ್ರವಾಸಗರಲ್ಲಿ ಧೈರ್ಯ ತುಂಬುವ ಯತ್ನ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಒಮರ್, ‘ನಮ್ಮ ಸರ್ಕಾರದ ಅವಧಿಯಲ್ಲಿ ಬೇಸಿಗೆ ರಾಜಧಾನಿ ಶ್ರೀನಗರ ಅಥವಾ ಚಳಿಗಾಲದ ರಾಜಧಾನಿ ಜಮ್ಮುವಿನ ಹೊರಗೆ, ಬೇರೆಡೆ ಸಂಪುಟ ಸಭೆ ನಡೆದಿರುವುದು ಇದೇ ಮೊದಲು. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ, ಸಂತೋಷ, ಜನರ ಪ್ರತಿನಿಧಿಸುವಿಕೆ ರಕ್ತಪಾತದಿಂದಾಗಿ ನಿಲ್ಲುವುದಿಲ್ಲ. ಈ ಸಭೆಯ ಮೂಲಕ ಹಿಂಸೆ ಮತ್ತು ರಕ್ತಪಾತದ ವಿರುದ್ಧ ಧ್ವನಿ ಎತ್ತಿದ ಕಾಶ್ಮೀರದ ಜನರಿಗೆ, ವಿಶೇಷವಾಗಿ ಪಹಲ್ಗಾಂನಲ್ಲಿರುವವರಿಗೆ ಅವರ ನಿಲುವು ಮತ್ತು ಧೈರ್ಯಕ್ಕಾಗಿ ಧನ್ಯವಾದ ಅರ್ಪಿಸಿದ್ದೇವೆ’ ಎಂದರು.