ಮೋದಿ ದೇಶದ ಪ್ರಮುಖ ಸಂಪತ್ತು: ತರೂರ್‌ ಬಣ್ಣನೆ

| N/A | Published : Jun 23 2025, 11:52 PM IST / Updated: Jun 24 2025, 04:29 AM IST

ಸಾರಾಂಶ

ಆಪರೇಷನ್‌ ಸಿಂದೂರ ಕಾರ್ಯಾಚರಣೆ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವನ್ನು ಬಹಿರಂಗವಾಗಿ ಬೆಂಬಲಿಸಿ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಕಾಂಗ್ರೆಸ್‌ ಸಂಸದ ಶಶಿತರೂರ್‌ ಅವರು ಇದೀಗ ಮತ್ತೊಮ್ಮೆ ಪ್ರಧಾನಿ ಮೋದಿ ಕುರಿತು ಬಹಿಂಗವಾಗಿಯೇ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ನವದೆಹಲಿ: ಆಪರೇಷನ್‌ ಸಿಂದೂರ ಕಾರ್ಯಾಚರಣೆ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವನ್ನು ಬಹಿರಂಗವಾಗಿ ಬೆಂಬಲಿಸಿ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಕಾಂಗ್ರೆಸ್‌ ಸಂಸದ ಶಶಿತರೂರ್‌ ಅವರು ಇದೀಗ ಮತ್ತೊಮ್ಮೆ ಪ್ರಧಾನಿ ಮೋದಿ ಕುರಿತು ಬಹಿಂಗವಾಗಿಯೇ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ದೇಶದ ಪ್ರಮುಖ ಸಂಪತ್ತು ಎಂದು ಬಣ್ಣಿಸಿದ್ದಾರೆ.

ಮೋದಿ ಅವರ ಶಕ್ತಿ, ಕ್ರಿಯಾಶೀಲತೆ ಮತ್ತು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮನೋಭಾವವು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅವರು ದೇಶದ ಪಾಲಿಗೆ ಪ್ರಮುಖ ಸಂಪತ್ತಾಗುವಂತೆ ಮಾಡಿದೆ. ಅವರಿಗೆ ಹೆಚ್ಚಿನ ಬೆಂಬಲದ ಅಗತ್ಯವಿದೆ ಎಂದು ತರೂರ್‌ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಭಾರತ ಮೂಲೆಗುಂಪಾಗಿದೆ, ಪ್ರಧಾನಿ ಮೋದಿ ಸರ್ಕಾರದ ವಿದೇಶಾಂಗ ನೀತಿಗಳು ವಿಫಲವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಆರೋಪಿಸುತ್ತಿರುವ ನಡುವೆಯೇ ಶಶಿ ತರೂರ್‌ ಅವರಿಂದ ಇದೀಗ ಈ ರೀತಿಯ ಪ್ರಶಂಸೆ ಕೇಳಿಬಂದಿದ್ದು, ಪಕ್ಷಕ್ಕೆ ಇರಿಸು ಮುರುಸು ತಂದಿಟ್ಟಿದೆ.

ಪಹಲ್ಗಾಂ ದಾಳಿಗೆ ಪ್ರತಿಯಾಗಿ ನಡೆಸಿದ ಆಪರೇಷನ್‌ ಸಿಂದೂರ ಕಾರ್ಯಾಚರಣೆ ಬಳಿಕ ಅಂತಾರಾಷ್ಟ್ರೀಯ ಅಭಿಪ್ರಾಯ ರೂಪಿಸಲು ವಿದೇಶಕ್ಕೆ ಕಳುಹಿಸಿಕೊಟ್ಟಿದ್ದ ಸರ್ವಪಕ್ಷ ನಿಯೋಗದ ಭಾಗವಾಗಿದ್ದ ತರೂರ್‌ ಅವರು ತಮ್ಮ ಅನುಭವವನ್ನು ಲೇಖನದ ಮೂಲಕ ಹೇಳಿಕೊಂಡಿದ್ದಾರೆ.

ಭಾರತದಲ್ಲಿ ಏಕತೆಯಿದ್ದಾಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ದೃಢವಾಗಿ ಕೇಳಿಸುವಂತೆ ಮಾಡಬಹುದು ಎಂದು ತಿಳಿಸಿದ್ದಾರೆ.

ಭಾರತದಿಂದ ಕಳುಹಿಸಲಾಗಿದ್ದ ಸರ್ವಪಕ್ಷ ನಿಯೋಗವು ಆಪರೇಷನ್‌ ಸಿಂದೂರದ ಕುರಿತು ಜಗತ್ತಿಗೆ ಸ್ಪಷ್ಟತೆ ನೀಡಿತು. ಈ ಕಾರ್ಯಾಚರಣೆ ಯಾಕೆ ಅಗತ್ಯವಾಗಿತ್ತು ಎಂದು ವಿವರಿಸಿತು. ಕೊಲಂಬಿಯಾವು ತಾನು ನೀಡಿದ್ದ ಹೇಳಿಕೆಯನ್ನು ವಾಪಸ್‌ ಪಡೆದು ಭಾರತಕ್ಕೆ ಬೆಂಬಲ ನೀಡಿದ್ದು, ಈ ನಿಯೋಗದ ಯಶಸ್ಸಿಗೆ ಸಾಕ್ಷಿ ಎಂದು ಹೇಳಿದ್ದಾರೆ.

ಏಕತೆಯ ಶಕ್ತಿ, ಸ್ಪಷ್ಟವಾದ ಸಂವಹನದ ಪ್ರಭಾವ, ರಣನೀತಿಯಲ್ಲಿ ಸಾಫ್ಟ್‌ ಪವರ್‌ನ ಸಾಮರ್ಥ್ಯ ಮತ್ತು ವ್ಯವಸ್ಥಿತ ಸಾರ್ವಜನಿಕ ರಾಜತಾಂತ್ರಿಕತೆಯು ಜಠಿಲವಾದ ಅಂತಾರಾಷ್ಟ್ರೀಯ ಮಾರ್ಗದಲ್ಲಿ ಸುಲಭವಾಗಿ ಸಾಗಲು ಮೂಲತತ್ವಗಳಾಗಿ ದಾರಿ ತೋರಿಸಿತು ಎಂದು ಅವರು ಹೇಳಿಕೊಂಡಿದ್ದಾರೆ.

Read more Articles on