ಸಾರಾಂಶ
ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಷೇರುದಾರರಿಗೆ 1:1 ಬೋನಸ್ ಷೇರು ನೀಡುವುದಾಗಿ ಘೋಷಿಸಿದೆ. ಇದರ ಜೊತೆಗೆ, ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು ನಮೀಬಿಯಾದಲ್ಲಿ ಆಹಾರ ಕೊರತೆಯ ನಿವಾರಣೆಗೆ 700 ಪ್ರಾಣಿಗಳನ್ನು ಕೊಲ್ಲುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ
ನವದೆಹಲಿ : ಭಾರತದ ಅತಿದೊಡ್ಡ ಕಂಪನಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿ. (ಆರ್ಐಎಲ್) ತನ್ನ ಷೇರುದಾರರಿಗೆ ಭರ್ಜರಿ ಬೋನಸ್ ನೀಡಲು ನಿರ್ಧರಿಸಿದ್ದು, 1:1 ಬೋನಸ್ ಷೇರು ನೀಡುವ ಘೋಷಣೆ ಮಾಡಿದೆ. ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದೆ.ಆರ್ಐಎಲ್ ಪ್ರತಿ ಷೇರಿಗೆ ಸದ್ಯ 2987 ರು. ಬೆಲೆಯಿದೆ. 1:1 ಬೋನಸ್ ಷೇರು ಪ್ರಕಟಿಸಿರುವ ಕಾರಣ ಆರ್ಐಎಲ್ ಷೇರುದಾರರು ತಾವು ಹೊಂದಿರುವ ಪ್ರತಿ 1 ಷೇರಿಗೆ 1 ಷೇರನ್ನು ಉಚಿತವಾಗಿ ಪಡೆಯಲಿದ್ದಾರೆ.
2017 ಹಾಗೂ 2009ರಲ್ಲಿ ಆರ್ಐಎಲ್ 1:1 ಬೋನಸ್ ಷೇರು ನೀಡಿತ್ತು. 2017ರಲ್ಲಿ ರಿಲಯನ್ಸ್ ಬೋನಸ್ ಷೇರು ಪ್ರಕಟಿಸಿದಾಗ ಅದರ ಬೆಲೆ 700 ರು. ಇತ್ತು. ಅದರ ಬೆಲೆ ಈಗ 3000 ರು. ಆಸುಪಾಸಿದೆ ಎಂಬುದು ಇಲ್ಲಿ ಗಮನಾರ್ಹ.
==
ನಮೀಬಿಯಾ: ವನ್ಯಮೃಗ ದತ್ತು ಪಡೆದು ರಕ್ಷಣೆಗೆ ಅಂಬಾನಿ ನಿರ್ಧಾರ
ನವದೆಹಲಿ: ನಮೀಬಿಯಾದಲ್ಲಿ ಆಹಾರ ಕೊರತೆಯನ್ನು ನೀಗಿಸಲು ಅಲ್ಲಿನ ಸರ್ಕಾರ 700ಕ್ಕೂ ಅಧಿಕ ಪ್ರಾಣಿಗಳನ್ನು ಕೊಲ್ಲಲು ಮುಂದಾಗಿದ್ದು, ಈ ಕ್ರಮಕ್ಕೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ ಹಾಗೂ ಪ್ರಾಣಿಗಳನ್ನು ಕೊಲ್ಲದಿರಲು ನಮೀಬಿಯಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜೊತೆಗೆ ಅವುಗಳನ್ನು ತಮ್ಮ ವಂತಾರಾ ಸಂಸ್ಥೆಯೊಂದಿಗೆ ದತ್ತು ಪಡೆಯುವುದಾಗಿ ತಿಳಿಸಿದ್ದಾರೆ.ಭಾರತದಲ್ಲಿನ ನಮೀಬಿಯಾ ದೂತಾವಾಸ ಕಚೇರಿಗೆ ಪತ್ರ ಬರೆದಿರುವ ವಂತಾರಾ ಸಂಸ್ಥೆ, ವನ್ಯಜೀವಿಗಳ ಹತ್ಯೆಯನ್ನು ನಿಲ್ಲಿಸಲು ನಮೀಬಿಯಾ ಸರ್ಕಾರ ಮತ್ತು ಇತರ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಬಯಕೆ ವ್ಯಕ್ತಪಡಿಸಿದೆ. ಈ ಪತ್ರಕ್ಕೆ ನಮೀಬಿಯಾ ರಾಯಭಾರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಆದರೆ ವನ್ಯಜೀವಿಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂಬ ಭರವಸೆಯನ್ನು ವಂತಾರಾ ಸಂಸ್ಥೆ ವ್ಯಕ್ತಪಡಿಸಿದೆ.