ಸಾರಾಂಶ
- 20 ಕೋಟಿ ರು. ಸಾಲದಿಂದ ಕಂಗೆಟ್ಟಿದ್ದ ಮಿತ್ತಲ್ ಕುಟುಂಬ
- ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಆತ್ಮಹತ್ಯೆ==
ಪಂಚಕುಲ: ಆಧ್ಯಾತ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಒಂದೇ ಕುಟುಂಬದ ಏಳು ಮಂದಿ ಕಾರಿನಲ್ಲೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದೆ. ಆತ್ಮಹತ್ಯೆಗೆ 20 ಕೋಟಿ ರು. ಸಾಲವೇ ಕಾರಣ ಎಂದು ಹೇಳಲಾಗಿದೆ.ಡೆಹ್ರಾಡೂನ್ ಮೂಲದ ಉದ್ಯಮಿ ಪ್ರವೀಣ್ ಮಿತ್ತಲ್, ಪೋಷಕರು, ಪತ್ನಿ, ಮೂವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡವರು. ಪಂಚಕುಲದಲ್ಲಿ ಭಾಗೇಶ್ವರ ಧಾಮ್ನ ಆಧ್ಯಾತ್ಮಿಕ ಕಾರ್ಯಕ್ರಮ ಮುಗಿಸಿಕೊಂಡು ಬಂದ ಪ್ರವೀಣ್ ಮಿತ್ತಲ್ ಕುಟುಂಬ ಮನೆಗೆ ತೆರಳುವ ಮಾರ್ಗ ಮಧ್ಯೆ ರಸ್ತೆಯೊಂದರ ಪಕ್ಕ ಕಾರು ನಿಲ್ಲಿಸಿ ಆತ್ಮಹತ್ಯೆಗೆ ಶರಣಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಆತ್ಮಹತ್ಯೆ ಎಂಬುದು ಖಚಿತವಾಗಿದೆ. ಘಟನಾ ಸ್ಥಳದಲ್ಲಿ ಡೆತ್ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿರುವ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಕಾರನ್ನು ಟವೆಲ್ನಲ್ಲಿ ಮರೆಮಾಚಿ ನಂತರ ಮಿತ್ತಲ್ ಮತ್ತು ಕುಟುಂಬ ಸದಸ್ಯರು ವಿಷ ಸೇವಿಸಿದ್ದಾರೆ. ಕಾರಿನೊಳಗಿದ್ದವರು ಒದ್ದಾಡುತ್ತಿರುವುದು ಕಂಡು ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಮೊದಲಿಗೆ ಪ್ರವೀಣ್ ಮಿತ್ತಲ್ರನ್ನು ಹೊರಗೆಳೆದಿದ್ದಾರೆ. ಆಗ ಮಿತ್ತಲ್ ಅವರು, ನಾವು ವಿಷ ಸೇವಿಸಿದ್ದೇವೆ, ಐದು ನಿಮಿಷದಲ್ಲಿ ಸಾಯ್ತೇವೆ, ನಾವು ಸಾಲದಿಂದ ಕಂಗೆಟ್ಟಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ನಮ್ಮ ಬಂಧುಗಳೆಲ್ಲಾ ಶ್ರೀಮಂತರಾಗಿದ್ದರೂ ನಮಗೆ ಯಾವುದೇ ನೆರವು ನೀಡಿಲ್ಲ ಎಂದು ಹೇಳಿದ್ದಾರೆ.20 ಕೋಟಿ ಸಾಲ: ಕೆಲ ವರ್ಷಗಳ ಹಿಂದೆ ಪ್ರವೀಣ್ ಮಿತ್ತಲ್ ಹಿಮಾಚಲ ಪ್ರದೇಶದ ಬಡ್ಡಿಯಲ್ಲಿ ಸ್ಕ್ರ್ಯಾಪ್ ಫ್ಯಾಕ್ಟರಿಯೊಂದನ್ನು ಆರಂಭಿಸಿದ್ದರು. ಆದರೆ ನಾನಾ ಕಾರಣಗಳಿಂದಾಗಿ ಇದಕ್ಕಾಗಿ ಪಡೆದ ಸಾಲದ ಬಡ್ಡಿ ಕಟ್ಟಲಾಗದೆ ಫ್ಯಾಕ್ಟರಿ, ಎರಡು ಫ್ಲ್ಯಾಟ್, ವಾಹನಗಳನ್ನು ಬ್ಯಾಂಕ್ ವಶಕ್ಕೆ ಪಡೆದುಕೊಂಡಿತ್ತು. ಇದರಿಂದ ತೀವ್ರವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮಿತ್ತಲ್ ಹೇಳದೆ ಕೇಳದೆ ಡೆಹ್ರಾಡೂನ್ಗೆ ತೆರಳಿದ್ದರು. ಸುಮಾರು ಆರು ವರ್ಷ ಕುಟುಂಬದ ಸಂಪರ್ಕದಿಂದಲೇ ದೂರವುಳಿದಿದ್ದರು. ಈ ವೇಳೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.