ಸಾರಾಂಶ
ಪಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕೈಗೊಂಡ ‘ಆಪರೇಷನ್ ಸಿಂದೂರ್’ನ ಲೋಗೋವನ್ನು ವಿನ್ಯಾಸಗೊಳಿಸಿದವರು ಇಬ್ಬರು ಸೈನಿಕರು ಎಂಬ ವಿಚಾರ ಹೊರಬಂದಿದೆ.
ನವದೆಹಲಿ: ಪಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕೈಗೊಂಡ ‘ಆಪರೇಷನ್ ಸಿಂದೂರ್’ನ ಲೋಗೋವನ್ನು ವಿನ್ಯಾಸಗೊಳಿಸಿದವರು ಇಬ್ಬರು ಸೈನಿಕರು ಎಂಬ ವಿಚಾರ ಹೊರಬಂದಿದೆ.
ಮೇ 7ರಂದು 9 ಉಗ್ರನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿದ ಬಳಿಕ ಈ ಕಾರ್ಯಾಚರಣೆಯ ಲೋಗೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಕಪ್ಪು ಬಣ್ಣದ ಮೇಲೆ ಬಿಳಿ ಅಕ್ಷರಗಳಲ್ಲಿ ಇಂಗ್ಲಿಷ್ನಲ್ಲಿ ಸಿಂದೂರ್ ಎಂದು ಬರೆಯಲಾಗಿದ್ದು, ಅದರಲ್ಲಿನ ಒಂದು ‘ಒ’ ಅಕ್ಷರವನ್ನು ಕುಂಕುಮದ ಡಬ್ಬಿ ರೀತಿ ಚಿತ್ರಿಸಲಾಗಿತ್ತು. ಅದರ ಪಕ್ಕ ಕುಂಕುಮ ಚೆಲ್ಲಿ ಹರಡಿದಂತಿತ್ತು. ಇದನ್ನು ವಿನ್ಯಾಸಗೊಳಿಸಿದವರು ಲೆ.ಕ. ಹರ್ಷ ಗುಪ್ತಾ ಮತ್ತು ಹವಾಲ್ದಾರ್ ಸುರೀಂದರ್ ಸಿಂಗ್ ಎಂಬ ಇಬ್ಬರು ಸೈನಿಕರು ಎಂದು ಭಾರತೀಯ ಸೇನೆಯ ನಿಯತಕಾಲಿಕ ‘ಬಾತ್ಚೀತ್’ ತಿಳಿಸಿದೆ.