-ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ತೀವ್ರ ಆಕ್ರೋಶ
-ವಿದ್ಯಾರ್ಥಿಯಿಂದಲೇ ತಪ್ಪು ಆಯ್ಕೆ: ಎನ್ಟಿಎ ಸ್ಪಷ್ಟನೆ-ಮನವಿ ಮೇರೆಗೆ ನಾಗ್ಪುರ ಕೇಂದ್ರಕ್ಕೆ ಪುನಃ ಬದಲಾವಣೆನವದೆಹಲಿ/ನಾಗಪುರ: ಮಹಾರಾಷ್ಟ್ರದ ನಾಗ್ಪುರದ ನೀಟ್ ಆಕಾಂಕ್ಷಿಯೊಬ್ಬನಿಗೆ, ನಾಗ್ಪುರದ ಬದಲು ಅರಬ್ ನಗರ ಅಬುಧಾಬಿ ಪರೀಕ್ಷಾ ಕೇಂದ್ರವನ್ನು ನೀಡಲಾಗಿದೆ ಎಂಬ ಆರೋಪ ಶನಿವಾರ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಪೋಷಕರು ಈ ಬಗ್ಗೆ ದೂರಿದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಆ ಬಳಿಕ ವಿದ್ಯಾರ್ಥಿಯೇ ತಪ್ಪಾಗಿ ಅಬುಧಾಬಿಯನ್ನು ಆಯ್ಕೆ ಮಾಡಿಕೊಂಡಿದ್ದ ಎಂದು ಎನ್ಟಿಎ ಸ್ಪಷ್ಟಪಡಿಸಿದೆ. ಆದರೂ ಮನವಿಯ ಮೇರೆಗೆ ನಾಗ್ಪುರ ಕೇಂದ್ರಕ್ಕೆ ಬದಲಾಯಿಸಿದೆ.
ನೀಟ್ಗೆ ಕೇವಲ ಒಂದು ದಿನ ಇರುವಾಗ ಅಬ್ದುಲ್ಲಾ ಮೊಹಮ್ಮದ್ ತಾಲಿಬ್, ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡಾಗ ಅಬುಧಾಬಿ ಕೇಂದ್ರವನ್ನು ಆತನಿಗೆ ನೀಡಿರುವುದು ತಿಳಿದು ಬಂತು. ಇದರಿಂದ ತೀವ್ರ ಆತಂಕಿತರಾದ ಪೋಷಕರು ಎನ್ಟಿಎಗೆ ದೂರು ನೀಡಿದರು. ಬಳಿಕ ರಾಹುಲ್ ಗಾಂಧಿ, ‘ಸರ್ಕಾರ ಮಕ್ಕಳ ಭವಿಷ್ಯದೊಂದಿಗೆ ಜೂಜಾಡುವುದನ್ನು ನಿಲ್ಲಿಸಬೇಕು. ವಿದ್ಯಾರ್ಥಿಗೆ ಆತನ ಊರಿನಲ್ಲೇ ಪರೀಕ್ಷಾ ಕೇಂದ್ರ ನೀಡಲಾಗದ ವ್ಯವಸ್ಥೆಗೆ ಪರೀಕ್ಷೆ ನಡೆಸುವ ಯಾವ ಹಕ್ಕೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ತರುವಾಯ ಇದಕ್ಕೆ ಪ್ರತಿಕ್ರಿಯಿಸಿದ ಎನ್ಟಿಎ, ವಿದ್ಯಾರ್ಥಿಯೇ ಸ್ವಂತ ಲಾಗಿನ್ ಮೂಲಕ ‘ಕರೆಕ್ಷನ್ ವಿಂಡೋ’ ಅವಧಿಯಲ್ಲಿ ಅಬುಧಾಬಿ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದಾನೆ ಎಂದು ವೆಬ್ ದಾಖಲೆಗಳನ್ನು ಉಲ್ಲೇಖಿಸಿ ಸ್ಪಷ್ಟನೆ ನೀಡಿದೆ. ಆದರೂ ವಿದ್ಯಾರ್ಥಿಯ ಕುಟುಂಬದ ಕೋರಿಕೆಯ ಮೇರೆಗೆ ತಕ್ಷಣ ನಾಗ್ಪುರ ಕೇಂದ್ರಕ್ಕೆ ಬದಲಾಯಿಸಿದೆ.