ಅಯೋಧ್ಯೆ: ಇಲ್ಲಿನ ಜಗತ್ಪ್ರಸಿದ್ಧ ರಾಮಮಂದಿರದ ಹುಂಡಿಯಿಂದ ನಗದು ಮತ್ತು ಆಭರಣಗಳ ಕಳವಿಗೆ ಸಂಬಂಧಿಸಿದಂತೆ ತನಿಖೆಗೆ ಮುಂದುವರಿಸಿರುವ ಎಸ್‌ಐಟಿ, ಅಲ್ಲಿನ ಸಿಸಿ ಕ್ಯಾಮೆರಾವನ್ನು ತಿರುಚಲಾಗಿದೆ ಎಂಬುದನ್ನು ಪತ್ತೆ ಮಾಡಿದೆ. ಇದರ ಬೆನ್ನಲ್ಲೇ ಸಿಸಿಟೀವಿ ನಿರ್ವಹಣೆಗೆ ಜವಾಬ್ದಾರಿ ಹೊತ್ತಿದ್ದವರನ್ನು ವಿಚಾರಣೆಗೆ ಒಳಪಡಿಸಿದೆ.ಕಳೆದ 11 ತಿಂಗಳಲ್ಲಿ ದೇಗುಲದ ಭದ್ರತೆಗೆಂದು 10 ಕೋಟಿ ರು.ಗೂ ಅಧಿಕ ಖರ್ಚು ಮಾಡಿರುವ ಹೊರತಾಗಿಯೂ ಕಾಣಿಕೆ ಹುಂಡಿಗೆ ಕನ್ನ ಹಾಕಲಾಗಿದೆ ಎಂಬ ಆರೋಪದ ಕಾರಣ ಶುಕ್ರವಾರ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್‌ ಎಂಬುವವರ ಸುದೀರ್ಘ ವಿಚಾರಣೆ ನಡೆಸಲಾಗಿದೆ.

ಜತೆಗೆ, ಸಿಸಿಕ್ಯಾಮೆರಾಗಳನ್ನು ನಿರ್ವಹಿಸುವವರು, ಪ್ರವೇಶದ್ವಾರದ ಮೇಲೆ ಕಣ್ಣಿಟ್ಟಿರುವವರು ಮತ್ತು ದೇವಾಲಯದ ಸಮಗ್ರ ಭದ್ರತೆಯನ್ನು ನೋಡಿಕೊಳ್ಳುವ ಸಿಬ್ಬಂದಿಯ ಪಾತ್ರದ ಬಗ್ಗೆಯೂ ತನಿಖೆ ನಡೆದಿದೆ. ಜತೆಗೆ ದೇಣಿಗೆಯನ್ನು ಎಣಿಸುವ ಪ್ರಕ್ರಿಯೆಯಲ್ಲಿ ಎನಾದರೂ ಎಡವಟ್ಟಾಗಿದೆಯೇ ಎಂದು ಪತ್ತೆ ಮಾಡಲು ಬ್ಯಾಂಕ್‌ನ ವಿಚಾರಣೆಯನ್ನೂ ಕೈಗೊಳ್ಳಲಾಗಿದೆ. ಸುಮಾರು 200 ಜನರ ಪಟ್ಟಿಯನ್ನು ಮಾಡಿಕೊಂಡಿರುವ ಎಸ್‌ಐಟಿ, 125 ಜನರ ವಿಚಾರಣೆ ಮುಗಿಸಿದೆ.