- ಕೇಂದ್ರ ಸಚಿವ ಸಂಪುಟ ಅಸ್ತು
- ಬಹುಕಾಲದ ಬೇಡಿಕೆ ಈಡೇರಿಕೆ- ಚುನಾವಣೆ ಹೊಸ್ತಿಲಲ್ಲೇ ಕೇಂದ್ರ ನಡೆಪಿಟಿಐ ನವದೆಹಲಿ
ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡುವ ಕೇರಳ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದಿಸಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಈ ಕ್ರಮ ಕೈಗೊಳ್ಳಲಾಗಿದೆ.ದೆಹಲಿಯ ಹೊಸ ಪ್ರಧಾನ ಮಂತ್ರಿ ಕಚೇರಿ ಕಟ್ಟಡವಾದ ಸೇವಾ ತೀರ್ಥದ ಹೊಸ ಕಚೇರಿಯಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ದೊರಕಿತು.ಈ ಅನುಮೋದನೆ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಕೇರಳ (ಹೆಸರು ಬದಲಾವಣೆ) ಮಸೂದೆ-2026 ಎಂಬ ವಿಧೇಯಕವನ್ನು ಭಾರತದ ಸಂವಿಧಾನದ 3ನೇ ವಿಧಿಯ ನಿಬಂಧನೆಯಡಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಕೇರಳ ರಾಜ್ಯ ಶಾಸಕಾಂಗ ಸಭೆಗೆ ಉಲ್ಲೇಖಿಸುತ್ತಾರೆ. ಕೇರಳ ರಾಜ್ಯ ಶಾಸಕಾಂಗ ಸಭೆಯ ಅಭಿಪ್ರಾಯಗಳನ್ನು ಸ್ವೀಕರಿಸಿದ ನಂತರ, ಭಾರತ ಸರ್ಕಾರವು ಮುಂದಿನ ಕ್ರಮ ಕೈಗೊಳ್ಳುತ್ತದೆ ಮತ್ತು ಹೆಸರು ಬದಲಾವಣೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ರಾಷ್ಟ್ರಪತಿಗಳ ಶಿಫಾರಸನ್ನು ಪಡೆಯುತ್ತದೆ.
ಈ ಹಿಂದೆ ಕೇರಳ ವಿಧಾನಸಭೆಯು ಜೂನ್ 24, 2024ರಂದು ರಾಜ್ಯದ ಹೆಸರು ಬದಲಾವಣೆಗೆ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತ್ತು. ಕೇಂದ್ರ ಸರ್ಕಾರವು ರಾಜ್ಯದ ಹೆಸರನ್ನು ಅಧಿಕೃತವಾಗಿ ಕೇರಳ ಎಂದು ಬದಲಾಯಿಸುವಂತೆ ಒತ್ತಾಯಿಸಿತ್ತು.
ಹೆಸರು ಬದಲಾವಣೆ ಏಕೆ?:
‘ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ, ಮಲಯಾಳಂ ಭಾಷಿಕರು ಸಂಯುಕ್ತ ಕೇರಳಂ ರಚಿಸಬೇಕೆಂದು ಬಲವಾದ ಬೇಡಿಕೆ ಇಟ್ಟಿದ್ದರು. ಮಲಯಾಳಂನಲ್ಲಿ ಕೇರಳಕ್ಕೆ ‘ಕೇರಳಂ’ ಎಂದೇ ಸಂಬೋಧಿಸುತ್ತಾರೆ. ಆದರೆ ಸಂವಿಧಾನದ ಮೊದಲ ಶೆಡ್ಯೂಲ್ನಲ್ಲಿ ರಾಜ್ಯದ ಹೆಸರನ್ನು ‘ಕೇರಳ’ ಎಂದು ದಾಖಲಿಸಲಾಗಿತ್ತು. ಹೀಗಾಗಿ ಹೆಸರನ್ನು ‘ಕೇರಳಂ’ ಎಂದು ಮಾರ್ಪಡಿಸಿ. ಸಂವಿಧಾನದ 3ನೇ ವಿಧಿಯ ಪ್ರಕಾರ ತುರ್ತು ಕ್ರಮ ತೆಗೆದುಕೊಳ್ಳಿ’ ಎಂದು 2 ವರ್ಷ ಹಿಂದೆ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿತ್ತು.ಸಂವಿಧಾನದ 3ನೇ ವಿಧಿಯು ಅಸ್ತಿತ್ವದಲ್ಲಿರುವ ರಾಜ್ಯಗಳ ಹೆಸರುಗಳನ್ನು ಬದಲಾಯಿಸಲು ಅವಕಾಶ ನೀಡುತ್ತದೆ.
