ಕನ್ನಡಪ್ರಭ ವಾರ್ತೆ ಸಿಂದಗಿ

ಪಟ್ಟಣದ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಕೇರಳ ರಾಜ್ಯಕ್ಕೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಂಡಿರುವ ವೇಳೆಯಲ್ಲಿ ಕೇರಳದ ವೈನಾಡಿನ ಸಫಾರಿ ಉದ್ಯಾನವನಕ್ಕೆ ವೀಕ್ಷಣೆಗಾಗಿ ತೆರಳಿದ ಸಮಯದಲ್ಲಿ ಆ ಪ್ರದೇಶವನ್ನು ಶುಚಿಗೊಳಿಸಿ ಪರಿಸರ ಪ್ರೇಮ ಮೆರೆದಿದ್ದಾರೆ.

ಈ ವೇಳೆ ಅರಣ್ಯ ಪ್ರದೇಶದ ಅಧಿಕಾರಿ ವಿಪಿತ್ ಪಿವಿ ಮತ್ತು ಮಿನಮೋಲ್ ಕೆಎಂ ಅಧಿಕಾರಿಗಳು ಪರಿಸರವನ್ನು ರಕ್ಷಿಸೋಣ ಅನ್ನುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮ ಜೀವನದ ಒಂದು ಮುಖ್ಯ ಭಾಗವಾಗಿದೆ. ಪರಿಸರವೆಂದರೇ ಗಾಳಿ, ನೀರು, ಮರಗಳು, ಪ್ರಾಣಿಗಳು ಮತ್ತು ಭೂಮಿ. ಇವೆಲ್ಲವೂ ನಮಗೆ ಬದುಕಲು ಸಹಾಯ ಮಾಡುತ್ತವೆ. ಆದರೆ, ಇಂದಿನ ಕಾಲದಲ್ಲಿ ಜನರು ಹೆಚ್ಚು ವಾಹನ ಬಳಸುತ್ತಾರೆ, ಕಸ ಎಸೆಯುತ್ತಾರೆ ಮತ್ತು ಅರಣ್ಯಗಳನ್ನು ಕಡಿದು ಹಾಕುತ್ತಾರೆ. ಇದರಿಂದ ವಾಯುಮಾಲಿನ್ಯ, ಜಲಮಾಲಿನ್ಯ ಮತ್ತು ಭೂಮಿ ಹಾನಿಯಾಗುತ್ತಿದೆ. ಪರಿಸರ ಹಾನಿಯಿಂದ ಮಳೆ ಕಡಿಮೆಯಾಗುತ್ತದೆ. ರೋಗಗಳು ಹೆಚ್ಚುತ್ತವೆ ಮತ್ತು ಹವಾಮಾನ ಬದಲಾವಣೆ ಆಗುತ್ತದೆ. ಪರಿಸರವನ್ನು ರಕ್ಷಿಸುವುದು ಎಲ್ಲರ ಕರ್ತವ್ಯ. ನಾವು ಮರ ನೆಡುವ ಅಭಿಯಾನಗಳಲ್ಲಿ ಭಾಗವಹಿಸಬಹುದು, ನೀರನ್ನು ವ್ಯರ್ಥ ಮಾಡಬಾರದು ಮತ್ತು ಕಸವನ್ನು ಸರಿಯಾಗಿ ವಿಂಗಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಮಹಾವಿದ್ಯಾಲಯದ ಪ್ರಾಚಾರ್ಯ ಜೆ.ಸಿ.ನಂದಿಕೋಲ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಪರಿಸರದ ಮಹತ್ವ ತಿಳಿಸುವುದು ಬಹಳ ಅಗತ್ಯ. ಸಣ್ಣ ವಯಸ್ಸಿನಿಂದಲೇ ಸಂರಕ್ಷಣೆಯ ಅಭ್ಯಾಸ ಬೆಳೆಸಿದರೆ ಭವಿಷ್ಯ ಉತ್ತಮವಾಗಿರುತ್ತದೆ. ಪರಿಸರ ಉಳಿದರೆ ಜೀವ ಉಳಿದಂತೆ. ಆದ್ದರಿಂದ ನಾವು ಎಲ್ಲರೂ ಪರಿಸರ ಸ್ನೇಹಿ ಜೀವನ ನಡೆಸಬೇಕು. ಪರಿಸರ ಸಂರಕ್ಷಣೆಗಾಗಿ ನಾವು ಹಲವಾರು ಸರಳ ಕ್ರಮಗಳನ್ನು ತೆಗೆದುಕೊಳ್ಳಬಹುದು. ಹೆಚ್ಚು ಮರಗಳನ್ನು ನೆಡುವುದು, ನೀರನ್ನು ಉಳಿಸುವುದು, ವಿದ್ಯುತ್ ವ್ಯರ್ಥ ಮಾಡದೇ ಬಳಸುವುದು ಮತ್ತು ಪ್ಲಾಸ್ಟಿಕ್ ಕಡಿಮೆ ಬಳಸುವುದು ಬಹಳ ಉಪಯುಕ್ತ. ಕಸವನ್ನು ಒಣ ಮತ್ತು ತೇವವಾಗಿ ಬೇರ್ಪಡಿಸುವುದು ಕೂಡ ಪರಿಸರ ರಕ್ಷಣೆಗೆ ಸಹಾಯ ಮಾಡುತ್ತದೆ ಎಂದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವೈನಾಡಿನ ಕೆಲವು ಪ್ರದೇಶಗಳಿಗೆ ಸಂಚರಿಸಿ ಶುಚಿತ್ವ ಮತ್ತು ಪರಿಸರ ಜಾಗೃತಿಯ ಬಗ್ಗೆ ಅರಿವು ಮೂಡಿಸಿದರು.

ಈ ವೇಳೆ ಉಪನ್ಯಾಸಕರಾದ ಡಿ.ಎಸ್.ಮಠಪತಿ, ಸುಧಾಕರ ಚವಾಣ್, ರೇವನಸಿದ್ದಪ್ಪ ಹಾಲಕೇರಿ, ಚನ್ನು ಕತ್ತಿ, ಭಾಗ್ಯಜ್ಯೋತಿ ದಸ್ಮಾ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರತಿಯೊಬ್ಬರಿಗೂ ಪರಿಸರ ಜಾಗೃತಿಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಇಂದಿನ ದಿನಮಾನಗಳಲ್ಲಿ ಪರಿಸರದ ರಕ್ಷಣೆ ಅತ್ಯವಶ್ಯಕವಾಗಿ ಮಾಡಲೇಬೇಕು. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಬೇರೆ ರಾಜ್ಯಕ್ಕೆ ಶೈಕ್ಷಣಿಕ ಪ್ರವಾಸಕ್ಕೆಂದು ಹೋಗಿ ಅಲ್ಲಿನ ಜನತೆಗೆ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಶ್ಲಾಘನೀಯ.

-ಡಾ.ಪ್ರಭುಸಾರಂಗದೇವ ಶಿವಾಚಾರ್ಯರು,


ಸಾರಂಗಮಠ ಸಿಂದಗಿ.