ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸರ್ವಾಂಗೀಣ ಹಾಗೂ ಕೌಶಲ್ಯಭರಿತ ನಾಗರೀಕರನ್ನಾಗಿ ಮಾಡಿ, ವಿಕಸಿತ ಭಾರತಕ್ಕೆ ಒಂದು ದೊಡ್ಡ ಕೊಡುಗೆ ನೀಡಬೇಕೆನ್ನುವ ಉದ್ದೇಶದಿಂದ ವಿಟಿಯು ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಿದೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ.ಎಸ್ ಹೇಳಿದರು.ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಲ್ಲಿ ಸ್ಥಾಪಿಸಲಾದ ಸೆಕ್ಷನ್ ೮ ಕಂಪನಿ ವಿಶ್ವೇಶ್ವರಯ್ಯ ರಿಸರ್ಚ್ ಮತ್ತು ಇನ್ನೋವೇಶನ್ ಫೌಂಡೇಶನ್ (ವಿಆರ್ಐಎಫ್) ವತಿಯಿಂದ ಟೈ ಬೆಂಗಳೂರು, ಸೆಲ್ಕೊ ಫೌಂಡೇಶನ್ ಮತ್ತು ವಾದ್ವಾನಿ ಫೌಂಡೇಶನ್ ಸಹಯೋಗದಲ್ಲಿ ಉತ್ತರ ಕರ್ನಾಟಕದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಡಿಸೈನ್ ಥಿಂಕಿಂಗ್ ಒಂದು ದಿನದ ಕಾರ್ಯಗಾರದಲ್ಲಿ ಲಿಫ್ಟ್ ಆಫ್ ಬೆಳಗಾವಿ ಸ್ಟಾರ್ಟ್ ಅಪ್ ಮತ್ತು ಸ್ಟೂಡೆಂಟ್ ಸ್ಟಾರ್ಟ್ ಅಪ್ ಚಾಲೆಂಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಯೋಜನೆಗಳ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ನಲ್ಲೇ ಅನೇಕ ಔದ್ಯೋಗಿಕ ಮತ್ತು ತಾಂತ್ರಿಕ ಶಿಕ್ಷಣವನ್ನು ಒಂದೇ ವೇದಿಕೆಯಲ್ಲಿ ತಂದು ಇಂಟರ್ನಶಿಪ್ ಮತ್ತು ತರಬೇತಿ ಮೂಲಕ ಇಂದಿನ ಔದ್ಯೋಗಿಕ ವಲಯಕ್ಕೆ ಅವಶ್ಯಕತೆ ಇರುವ ಕೌಶಲಗಳನ್ನು ನೀಡಲಾಗುತ್ತಿದೆ. ಅದಕ್ಕಾಗಿ ಸಿಎನ್ಸಿ ವರ್ಕ್ಶಾಪ್ ಸ್ಥಾಪಿಸಲಾಗಿದೆ. ಇದೆ ತರಹ ಕೌಶಲ್ಯ ನೀಡುವ ಪ್ರಯೋಗಾಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದರು.ಕೊಪ್ಪಳ ಮತ್ತು ದಾಂಡೇಲಿಯಲ್ಲಿರುವ ಕೌಶಲ್ಯ ಕೇಂದ್ರಗಳಲ್ಲಿ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ ಮತ್ತು ಸುತ್ತಲಿನ ಇಂಜಿನಿಯರಿಂಗ್ ಕಾಲೇಜುಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಇಂಟರ್ನಶಿಫ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೆಲ್ಕೊ ಫೌಂಡೇಶನ್ನ ಸಿನಿಯರ್ ಪ್ರೊಗ್ರಾಮ್ ಮ್ಯಾನೇಜರ್ ಶ್ರೀಲಕ್ಷ್ಮಿ ಉನ್ನಿ, ಟೈ ಬೆಂಗಳೂರಿನ ಮದನ ಫಡಕಿ, ವಾದ್ವಾನಿ ಫೌಂಡೇಶನ್ನ ಸಂಗಮಿತ್ರಾ ಭಾಸಿನ ಮತ್ತು KDEM ವಿಭಾಗಿಯ ಮುಖ್ಯಸ್ಥ ವೆಂಕಟೇಶ ಪಾಟೀಲ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದ ಮೊದಲಿಗೆ ಕುಲಸಚಿವರುಗಳಾದ ಪ್ರೊ.ಬಿ.ಈ.ರಂಗಸ್ವಾಮಿ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವರಾದ ಪ್ರೊ.ಟಿ.ಎನ್.ಶ್ರೀನಿವಾಸ ವಂದಿಸಿದರು. ಹಣಕಾಸು ಅಧಿಕಾರಿ ಎಂ.ಎ.ಸಪ್ನಾ, ವಿಆರ್ಐಎಫ್ನ ಸಂಯೋಜನಾಧಿಕಾರಿ ಸಂತೋಷ ಇಟ್ಟಣಗಿ ಹಾಜರಿದ್ದರು.ಕಾರ್ಯಾಗಾರದಲ್ಲಿ ಉತ್ತರ ಕರ್ನಾಟಕದ ಕೊಪ್ಪಳ, ಗದಗ, ವಿಜಯಪುರ, ಬಾಗಲಕೋಟೆ ಬೆಳಗಾವಿ ಜಿಲ್ಲೆಗಳಿಂದ ಸುಮಾರು 250ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕೋಟ್..ವಿಟಿಯು ಉದ್ದೇಶ ಕೇವಲ ತರಬೇತಿ ನೀಡುವುದಲ್ಲ. ಅದರ ಜೊತೆಗೆ ವಿದ್ಯಾರ್ಥಿಗಳಲ್ಲಿರುವ ಇನೋವೆಟಿವ್ ಮತ್ತು ಸೃಜನಶೀಲ ಕೌಶಲ್ಯಗಳನ್ನು ಗುರುತಿಸಿ ಹೊಸ ಐಡಿಯಾಗಳಿಗೆ ಮೂರ್ತರೂಪವನ್ನು ಕೊಟ್ಟು ಹೊಸ ಪ್ರಾಡಕ್ಟ್ ಅಥವಾ ತಮ್ಮದೇ ಸ್ಟಾರ್ಟ್ ಅಪ್ ಆರಂಭಿಸಲು ವಿಟಿಯು ವಿಆರ್ಐ ಆ್ಯಪ್ ಮೂಲಕ ಉತ್ತೇಜನ್ ನೀಡಲಿದೆ. ಈ ವರ್ಷ ಕನಿಷ್ಠ 25 ಸ್ಟಾರ್ಟ್ ಅಪ್ಗಳನ್ನು ಹುಟ್ಟುಹಾಕುವ ಗುರಿ ಇಟ್ಟುಕೊಂಡಿದೆ. ಇದಕ್ಕೆ ನೆರವಾಗುವ ರೀತಿಯಲ್ಲಿ ವಿಟಿಯುನಲ್ಲಿ ಔದ್ಯೋಗಿಕ ಕ್ಷೇತ್ರದ ದಿಗ್ಗಜರೊಂದಿಗೆ ಎಲ್ಲ ಜಿಲ್ಲೆಗಳಲ್ಲಿ ಚಿಂತನ-ಮಂಥನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಪ್ರೊ.ವಿದ್ಯಾಶಂಕರ.ಎಸ್, ವಿಟಿಯು ಕುಲಪತಿ.