ಪ್ರತಿದಿನ 1.50 ಲಕ್ಷ ಲೀ. ಎಥೆನಾಲ್ ಉತ್ಪಾದನೆ

| Published : Jun 12 2025, 12:33 AM IST

ಸಾರಾಂಶ

ಉತ್ತಮ ಗುಣಮಟ್ಟದ ತಂತ್ರಜ್ಞಾನ ಬಳಸಿಕೊಂಡು ಪ್ರತಿದಿನ ಸರಾಸರಿ 1.50 ಲಕ್ಷ ಲೀ. ಎಥೆನಾಲ್ ಉತ್ಪಾದಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆಯವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ನಮ್ಮ ಕಾರ್ಖಾನೆಯು ಫೆಬ್ರುವರಿ 2024ರಿಂದ ಎಥೆನಾಲ್ ಉತ್ಪಾದನೆ ಪ್ರಾರಂಭಿಸಿದೆ. ಇದರಿಂದಾಗಿ ಕಾರ್ಖಾನೆ ಆರ್ಥಿಕ ಸ್ಥಿತಿ ಸುಧಾರಿಸುವ ಮೂಲಕ ಪ್ರಗತಿಯತ್ತ ಸಾಗುತ್ತಿದೆ ಎಂದು ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ ಹೇಳಿದರು.

ಕಾರ್ಖಾನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈವಿಕ ಶಕ್ತಿ ಮತ್ತು ಪರಿಸರ ಸ್ನೇಹಿ ಇಂಧನಕ್ಕಾಗಿ ಎಥೆನಾಲ್ ಬಳಕೆಯು ಅಗತ್ಯವಾಗಿದ್ದರಿಂದ ಕಾರ್ಖಾನೆಯು ಈ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಉತ್ತಮ ಗುಣಮಟ್ಟದ ತಂತ್ರಜ್ಞಾನ ಬಳಸಿಕೊಂಡು ಪ್ರತಿದಿನ ಸರಾಸರಿ 1.50 ಲಕ್ಷ ಲೀ. ಎಥೆನಾಲ್ ಉತ್ಪಾದಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು ₹3.47 ಕೋಟಿ ಲೀ. ಎಥೆನಾಲ್ ಉತ್ಪಾದಿಸಲಾಗಿದೆ. ಇದರಲ್ಲಿ ₹189.55 ಕೋಟಿಯ ಸುಮಾರು 3.05 ಕೋಟಿ ಲೀ. ಎಥೆನಾಲ್ ವಿವಿಧ ತೈಲ ಕಂಪೆನಿಗಳಿಗೆ ಮಾರಾಟ ಮಾಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಣದ ಯೋಜನೆಯಲ್ಲಿ ನಾವೂ ಸಹ ಭಾಗಿಯಾಗಿದ್ದೇವೆ ಎಂದು ಹೇಳಿದರು.₹25.35 ಕೋಟಿಯ ಸುಮಾರು 41.65 ಲಕ್ಷ ಲೀ. ಮಾತ್ರ ಎಥೆನಾಲ್ ಬಾಕಿ ಉಳಿದಿದೆ. 5728 ಎಚಿಟಿ ಮೊಲ್ಯಾಸಿಸ್ ಉಳಿದಿದ್ದು, ಇದರಿಂದ 17.29 ಲಕ್ಷ ಲೀ. ಎಥೆನಾಲ್ ಉತ್ಪಾದಿಸಬಹುದಾಗಿದ್ದು, ಇದರ ಮೊತ್ತ ₹10.19 ಕೋಟಿ ಆಗಿದೆ. ಈ ರೀತಿ ಕೇವಲ ಮೊಲ್ಯಾಸಿಸ್‌ದಿಂದ ಕಾರ್ಖಾನೆಯ ಆದಾಯ ₹225 ಕೋಟಿಯಷ್ಟು ನಿರೀಕ್ಷಿಸಲಾಗಿದೆ. ಎಲ್ಲಾ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗಳನ್ನು ಪೆಟ್ರೋಲಿಯಂ ಮತ್ತು ಇಂಧನ ಸಚಿವಾಲಯ ಮತ್ತು ಇತರೆ ಸರ್ಕಾರಿ ಕಚೇರಿಗಳ ಕಟ್ಟುನಿಟ್ಟಿನ ನಿಯಮಗಳಿಗೆ ಸಂಪೂರ್ಣವಾಗಿ ಅನುಗುಣವಾಗಿ ನಡೆಸಲಾಗುತ್ತಿದೆ. ನಾವು ನಮ್ಮ ಎಥೆನಾಲ್‌ವನ್ನು ಐಒಸಿಎಲ್, ಬಿಪಿಸಿಎಲ್, ಎಚ್‌ಪಿಸಿಎಲ್, ಎಂಆರ್‌ಪಿಎಲ್ ನಂತಹ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದೇವೆ ಎಂದರು.

ಭವಿಷ್ಯದಲ್ಲಿ ಎಥೆನಾಲ್‌ ಉತ್ಪಾದಕತೆ ಹೆಚ್ಚಿಸುವತ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸ್ಥಳೀಯ ರೈತರಿಂದ ಕಬ್ಬು, ಮೆಕ್ಕೆಜೋಳ ಮತ್ತು ಇತರೆ ಕಚ್ಚಾ ವಸ್ತುಗಳನ್ನು ಬಳಸುವ ಮೂಲಕ ಗ್ರಾಮೀಣ ಆರ್ಥಿಕತೆ ಬಲಪಡಿಸಲಾಗುತ್ತಿದೆ. 150 ಕೆಎಲ್‌ಪಿಡಿಯಿಂದ 200 ಕೆಎಲ್‌ಪಿಡಿ ಸಿರಪ್‌ದಿಂದ, 100 ಕೆಎಲ್‌ಪಿಡಿ ಧಾನ್ಯದಿಂದ ಎಥೆನಾಲ್ ಉತ್ಪಾದಿಸುವ ಗುರಿ ಹೊಂದಿದ್ದೇವೆ. ನಮ್ಮ ಕಾರ್ಖಾನೆಯು ವಾಣಿಜ್ಯ ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ ಎಂದ ಅವರು, ಪರಿಸರ ಸ್ನೇಹಿ ಮತ್ತು ಸುಸ್ಥಿರ, ಶಾಶ್ವತ ಅಭಿವೃದ್ಧಿಯತ್ತ ಸಕ್ರಿಯವಾಗಿದೆ ಎಂದರು.

ಈ ವೇಳೆ ಕಾರ್ಖಾನೆ ಉಪಾಧ್ಯಕ್ಷ ಪವನಕುಮಾರ ಪಾಟೀಲ, ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ರಾಮಗೊಂಡಾ ಪಾಟೀಲ, ವಿಶ್ವನಾಥ ಕಮತೆ, ಜಯವಂತ ಭಾಟಲೆ, ಅವಿನಾಶ ಪಾಟೀಲ, ರಾಜೇಂದ್ರ ಗುಂದೇಶಾ, ವಿನಾಯಕ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ, ಮೊದಲಾದವರು ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು.