ಕನ್ನಡಪ್ರಭ ವಾರ್ತೆ ಬೆಂಗಳೂರು

ಜಿಬಿಎ ವ್ಯಾಪ್ತಿಯಲ್ಲಿ ಈವರೆಗೂ 25 ಲಕ್ಷ ಆಸ್ತಿ ಡಿಜಿಟಲೀಕರಣ ಮಾಡಲಾಗಿದ್ದು, 9 ಲಕ್ಷ ಇ-ಖಾತೆ ಜನರಿಗೆ ಹಂಚಿಕೆ ಮಾಡಲಾಗಿದೆ. ಉಚಿತವಾಗಿ ಇ-ಖಾತಾ ಹಂಚಲು ವಿಶೇಷ ಇ-ಖಾತಾ ಅಭಿಯಾನ ಪ್ರಾರಂಭ ಮಾಡಲು ಎಲ್ಲಾ ಪಾಲಿಕೆಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ಬಿ ಖಾತಾದಿಂದ ಎ ಖಾತಾಗೆ ಖಾತೆ ಪರಿವರ್ತನೆ ಮಾಡಿಸಿಕೊಂಡವರಿಗೆ ಎ-ಖಾತಾ ಪತ್ರ ವಿತರಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ಬೆಂಗಳೂರಿನ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಇ-ಖಾತೆ ವ್ಯವಸ್ಥೆ ತರಬೇಕು ಎಂದು ಹೊರಟಿದ್ದೇವೆ. ಈ ಮೂಲಕ ತೆರಿಗೆ ಸೋರಿಕೆ ತಡೆಯಬೇಕು ಎಂಬುದು ನಮ್ಮ ಉದ್ದೇಶ. ಸಬ್‌ ರಿಜಿಸ್ಟಾರ್‌ ಕಚೇರಿಗಳಲ್ಲಿ ಕಾವೇರಿ ಸಾಫ್ಟ್‌ವೇರ್‌ ತಂದು ಇದನ್ನು ಪರಶೀಲನೆ ಮಾಡಲು ಅವಕಾಶ ನೀಡಿದ್ದೇವೆ. ಇದರ ಜೊತೆಗೆ ಪ್ರತಿಯೊಂದು ದಾಖಲೆಗಳು ಆಧಾರ್‌ ಜೊತೆ ಲಿಂಕ್‌ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಯಾರು ಸಹ ಒಂದೇ ಒಂದು ರುಪಾಯಿ ಲಂಚ ನೀಡದೆ ಇ-ಖಾತೆ ಪಡೆಯಬಹುದು. ಮನೆ ಬಾಗಿಲಿಗೆ ಖಾತೆ ತಲುಪಿಸಬೇಕು ಎಂದು ತಿಳಿಸಿದ್ದೇನೆ. ನನಗೆ ನನ್ನ ಜೀವನದಲ್ಲಿ ಸಮಾಧಾನ ನೀಡಿದ ದೊಡ್ಡ ತೀರ್ಮಾನ. ಎಷ್ಟೋ ಜನಕ್ಕೆ ಅವರ ಆಸ್ತಿಗಳು ಯಾರ ಹೆಸರಿನಲ್ಲಿ ಇದೆ ಎಂದು ಗೊತ್ತಿರಲಿಲ್ಲ. ಈ ಕೆಲಸ ನೋಡಿ ಕೇಂದ್ರ ಸರ್ಕಾರ ನಮ್ಮ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿದೆ ಎಂದು ಹೇಳಿದರು.15 ದಿನದಲ್ಲಿ ಎ ಖಾತೆಗೆ ವರ್ಗಾವಣೆ:ಯೂನಿಫಾರ್ಮ್‌ ಲ್ಯಾಂಡ್‌ ರೆಕಾರ್ಡ್‌ ಮ್ಯಾನೇಜ್‌ ಮೆಂಟ್‌ ಸಿಸ್ಟಮ್‌ ಮೂಲಕ ಬಿ ಖಾತೆ ಮೂಲಕ ಎ ಖಾತೆ ನೀಡುವ ಯೋಜನೆ ಇದಾಗಿದೆ. ಈಗಾಗಲೇ 7 ಸಾವಿರ ಅರ್ಜಿಗಳು ಇದಕ್ಕೆ ಬಂದಿವೆ. ಇದಕ್ಕೆ ಇನ್ನೂ ಲಕ್ಷಗಟ್ಟಲೆ ಅರ್ಜಿಗಳು ಬರಬೇಕಿದೆ. ಈಗಾಗಲೇ ಅರ್ಜಿ ಹಾಕಿರುವವರಿಗೆ 15 ದಿನದಲ್ಲಿ ಬಿ ಖಾತೆಯಿಂದ ಎ ಖಾತೆಗೆ ವರ್ಗಾವಣೆ ಮಾಡಲು ಸಮಯ ನಿಗದಿ ಮಾಡಿದ್ದೇವೆ. ಅಧಿಕಾರಿಗಳು ಖಾತೆ ನೀಡುವಾಗ ಸ್ಥಳ ಪರಿಶೀಲನೆ ಮಾಡಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಬಾಕ್ಸ್)))


ನಂಬಿಕೆ ನಕ್ಷೆ ಯೋಜನೆಯಡಿ

12 ಸಾವಿರ ನಕ್ಷೆ ಹಂಚಿಕೆ: ಡಿಕೆ

ನಂಬಿಕೆ ನಕ್ಷೆ ಯೋಜನೆಯಡಿ 12 ಸಾವಿರ ನಕ್ಷೆಗಳನ್ನು ನೀಡಲಾಗಿದೆ. ಇದರಿಂದ ಭ್ರಷ್ಟಾಚಾರ ನಿಂತಿದೆ. ಕೆಲಸದ ವೇಗ ಹೆಚ್ಚಿದೆ. ಓಟಿಎಸ್‌ ಯೋಜನೆಯ ಅಡಿ ದಂಡ ಹಾಗೂ ಬಡ್ಡಿಯನ್ನು ರದ್ದು ಮಾಡಲಾಯಿತು. ಇದರಿಂದ 2 ಲಕ್ಷ ಜನರಿಗೆ ಅನುಕೂಲವಾಗಿದೆ ಎಂದು ಶಿವಕುಮಾರ್ ಹೇಳಿದರು. ನಾವು ಜಾರಿಗೆ ತಂದಿದ್ದ ಪ್ರಿಮೀಯಂ ಎಫ್‌ಎಆರ್‌ ಅನ್ನು ರಾಜ್ಯಪಾಲರು ತಡೆ ನೀಡಿದರು. ಬಿಜೆಪಿ ಸಮಯದಲ್ಲಿ ತಂದಿದ್ದ ಕಾನೂನನ್ನೇ ನಾನು ಜಾರಿಗೆ ತಂದಿದ್ದೇವೆ. ಒಂದಷ್ಟು ಜನ ಇದರ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈಗ ಅಲ್ಲಿಂದಲೂ ವಾಪಸ್‌ ಕಳುಹಿಸಿದ್ದಾರೆ. ಒಂದಷ್ಟು ಜನ ಪ್ರಿಮೀಯಂ ಎಫ್‌ ಎಆರ್‌ ಅನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ 1 ಸಾವಿರ ಕೋಟಿ ಬರುವ ನಿರೀಕ್ಷೆಯಿದೆ ಎಂದರು.