- ಯೋಗದಲ್ಲಿ ಪಾಂಡಿತ್ಯ ಪಡೆದ ವಚನಾನಂದ ಶ್ರೀಗಳು ''''ಕರ್ನಾಟಕದ ರಾಮದೇವ್'''': ಶ್ಲಾಘನೆ
- - -ಕನ್ನಡಪ್ರಭ ವಾರ್ತೆ ಹರಿಹರ
ಮಠಗಳು ಮತ್ತು ಮಠಾಧೀಶರು ಸಮಾಜಕ್ಕೆ ಕೇವಲ ಅನ್ನ ದಾಸೋಹವನ್ನಷ್ಟೇ ಅಲ್ಲದೇ, ಜ್ಞಾನ ದಾಸೋಹ, ವಿವೇಕ, ಭಕ್ತಿ ಮತ್ತು ಧರ್ಮದೀಕ್ಷೆ ನೀಡಬೇಕು. ಆ ಮೂಲಕ ವ್ಯಕ್ತಿಯನ್ನು ಲೌಕಿಕ ಬದುಕಿನಿಂದ ಆಧ್ಯಾತ್ಮದತ್ತ ಮುನ್ನಡೆಸುವ ಮಾರ್ಗದರ್ಶಕ ಕೇಂದ್ರಗಳಾಗಬೇಕು ಎಂದು ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ನುಡಿದರು. ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆದ ಧರ್ಮಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಲೌಕಿಕ ಜೀವನದ ಸುಖ ಕ್ಷಣಿಕವಾಗಿದೆ. ಶಾಶ್ವತ ನೆಮ್ಮದಿ ಮತ್ತು ಆನಂದವು ಕೇವಲ ಆಧ್ಯಾತ್ಮಿಕತೆಯಿಂದ ಮಾತ್ರ ಸಾಧ್ಯ. ಇಂತಹ ಉನ್ನತ ಸಂಸ್ಕಾರವನ್ನು ನೀಡುವಲ್ಲಿ ವಾಲ್ಮೀಕಿ ಮಠವು ಪ್ರಮುಖ ಪಾತ್ರ ವಹಿಸುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಧರ್ಮದೊಂದಿಗೆ ಅಳವಡಿಸಿಕೊಳ್ಳುವಲ್ಲಿ ವಾಲ್ಮೀಕಿ ಶ್ರೀಗಳು ಇಡೀ ಕರ್ನಾಟಕಕ್ಕೆ ಮಾದರಿಯಾಗಿದ್ದಾರೆ. ಮಠದ ಬೃಹತ್ ರಥವನ್ನು ವಿದ್ಯುನ್ಮಾನಗೊಳಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.ವಚನಾನಂದ ಶ್ರೀ ಕರ್ನಾಟಕದ ರಾಮದೇವ್:
ಇದೇ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಯೋಗದಲ್ಲಿ ಪಾಂಡಿತ್ಯ ಪಡೆದಿರುವ ಇವರು ''''''''ಕರ್ನಾಟಕದ ರಾಮದೇವ್'''''''' ಎಂದು ಪ್ರಖ್ಯಾತರಾಗಿದ್ದಾರೆ ಎಂದು ಶ್ಲಾಘಿಸಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಸಾಮಾನ್ಯವಾಗಿ ಅಧಿಕಾರದಲ್ಲಿ ಇರುವವರನ್ನು ಮಾತ್ರ ವೇದಿಕೆಗೆ ಕರೆಯುವ ಸಂಪ್ರದಾಯವಿದೆ. ಆದರೆ ಪರಿವಾರ ಮತ್ತು ತಳವಾರ ಜನಾಂಗವನ್ನು ಎಸ್.ಟಿ. ಪಟ್ಟಿಗೆ ಸೇರಿಸಲು ನಾನು ನಡೆಸಿದ ಪ್ರಯತ್ನವನ್ನು ಗೌರವಿಸಿ, ಅಧಿಕಾರ ಇಲ್ಲದಿದ್ದರೂ ನನ್ನನ್ನು ಶ್ರೀಗಳು ಇಲ್ಲಿಗೆ ಕರೆದಿದ್ದಾರೆ " ಎಂದು ಕೃತಜ್ಞತೆ ಸಲ್ಲಿಸಿದರು.
ವಾಲ್ಮೀಕಿ ಸಮುದಾಯದ ಹಲವಾರು ಉಪ ಜಾತಿಗಳಿಗೆ ಎಸ್ಟಿ ಮೀಸಲಾತಿಗಾಗಿ 1981 ರಿಂದಲೇ ಸುದೀರ್ಘ ಹೋರಾಟ ನಡೆಸಲಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿಶೇಷ ಪ್ರಯತ್ನದಿಂದಾಗಿ ಕೇಂದ್ರದಲ್ಲಿ ಚಂದ್ರಶೇಖರ್ ಅವರ ಸರ್ಕಾರವಿದ್ದಾಗ ಸುಗ್ರೀವಾಜ್ಞೆ ತಂದು ವಾಲ್ಮೀಕಿ, ನಾಯಕ ಹಾಗೂ ನಾಯಕಡ ಸಮುದಾಯಗಳಿಗೆ ಮೀಸಲಾತಿ ನ್ಯಾಯ ಒದಗಿಸಲಾಯಿತು.ಆದರೆ, ಮೈಸೂರು ಭಾಗದ ''''''''ಪರಿವಾರ'''''''' ಹಾಗೂ ಮಧ್ಯ ಮತ್ತು ಉತ್ತರ ಕರ್ನಾಟಕದ ''''''''ತಳವಾರ'''''''' ಜನಾಂಗಗಳಿಗೆ ಆಗ ನ್ಯಾಯ ಸಿಕ್ಕಿರಲಿಲ್ಲ. ಈ ನಿಟ್ಟಿನಲ್ಲಿ ಶ್ರೀಗಳು ಅಂದು ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರ ದೆಹಲಿ ಕಚೇರಿಗೆ ತೆರಳಿ ದಿನಗಟ್ಟಲೆ ಕಾದು ಮನವಿ ಸಲ್ಲಿಸಿದ್ದರು. ಮೀಸಲಾತಿ ಪ್ರಕ್ರಿಯೆಯು ಆರು ವಿವಿಧ ಮಂತ್ರಾಲಯಗಳ ಅನುಮೋದನೆ ಪಡೆದು ಸಂಪುಟದಲ್ಲಿ ಅಂಗೀಕಾರವಾಗಬೇಕಿತ್ತು.
ನನ್ನ ಕ್ಷೇತ್ರದ ಸಮಾಜ ಬಾಂಧವರು ನನ್ನ ಮೇಲಿಟ್ಟ ಭರವಸೆಯನ್ನು ಈಡೇರಿಸಲು ನಾನು ಪ್ರಹ್ಲಾದ್ ಜೋಶಿ, ಸದಾನಂದಗೌಡ ಹಾಗೂ ಶ್ರೀರಾಮುಲು ಅವರ ಸಹಕಾರದೊಂದಿಗೆ ಕೇವಲ 15 ದಿನಗಳಲ್ಲಿ ಎಲ್ಲಾ ಆರು ಸಚಿವಾಲಯಗಳ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನ್ಯಾಯ ದೊರಕಿಸಿಕೊಡಲಾಯ್ತು ಎಂದು ಸ್ಮರಿಸಿದರು.ಅಲ್ಪಸಂಖ್ಯಾತರು ಮತ್ತು ಕ್ರೈಸ್ತರು ತಮ್ಮ ಧರ್ಮಗ್ರಂಥಗಳನ್ನು ಓದುತ್ತಾರೆ. ಆದರೆ, ಹಿಂದೂಗಳ ಮಕ್ಕಳು ರಾಮಾಯಣ-ಮಹಾಭಾರತವನ್ನು ಓದದಿರುವುದು ವಿಷಾದನೀಯ. ಇದರಿಂದ ನಮ್ಮ ಇತಿಹಾಸ ಮತ್ತು ಸಂಸ್ಕೃತಿ ಮುಂದಿನ ಪೀಳಿಗೆಗೆ ತಿಳಿಯದಂತಾಗಿದೆ. ವಾಲ್ಮೀಕಿ ಸಮುದಾಯದವರು ತಮ್ಮ ವೀರ ಪರಂಪರೆ ಓದಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ''''''''ಮಹರ್ಷಿ ವಾಲ್ಮೀಕಿ ಪ್ರಶಸ್ತಿ'''''''' ವಿತರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹೊಸಳ್ಳಿ ವೇಮನ ಗುರುಪೀಠದ ವೇಮನಾನಂದ ಶ್ರೀಗಳು, ನಂದಿಗುಡಿ ವೃಷಭಪುರಿ ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಶ್ರೀಗಳು, ಕೊಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಜಗದೀಶ್ವರ ಶ್ರೀಗಳು, ಶಿಡ್ಲೆಕೋಣ ವಾಲ್ಮೀಕಿ ಆಶ್ರಮದ ಸಂಜಯ ಕುಮಾರ ಶ್ರೀಗಳು ಹಾಗೂ ಗೊಲ್ಲಪಲ್ಲಿ ವಾಲ್ಮೀಕಿ ಆಶ್ರಮದ ವರದಾನೇಶ್ವರ ಶ್ರೀಗಳು ಉಪಸ್ಥಿತರಿದ್ದರು.ವೇದಿಕೆಯಲ್ಲಿ ಶಾಸಕ ಬಿ.ಪಿ. ಹರೀಶ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಚಿತ್ರದುರ್ಗದ ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಶಾಸಕ ಅರವಿಂದ್ ಬೆಲ್ಲದ್, ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
- - --(ಫೋಟೋ)