ಸಾರಾಂಶ
ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ನಿರ್ದೇಶಕರ ಸ್ಥಾನಗಳಿಗೆ 38 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಎಲ್ಲ 38 ಮಂದಿಯೂ ಷಡಕ್ಷರಿ ಬಣದವರೇ ಎಂಬುದು ವಿಶೇಷವಾಗಿದೆ.
ಇದರೊಂದಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮೇಲಿನ ಷಡಾಕ್ಷರಿ ಹಿಡಿತ ಅಬಾಧಿತವಾಗಿ ಮುನ್ನಡೆದಿದೆ.ವಿವಿಧ ಇಲಾಖೆಗೆ ಸೇರಿದ ಒಟ್ಟು 66 ಸ್ಥಾನಗಳಿಗೆ ಒಟ್ಟು 168 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿತ್ತು. ಹಲವು ಮಂದಿ ನಾಮಪತ್ರ ಹಿಂಪಡೆದಿದ್ದು, 38 ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 28 ಸ್ಥಾನಗಳಿಗೆ ನ.16. ರಂದು ಮೀನಾಕ್ಷಿ ಭವನ ಬಳಿ ಇರುವ ಕೆಪಿಎಸ್ ಪಬ್ಲಿಕ್ ಶಾಲೆಯಲ್ಲಿ ಚುನಾವಣೆ ನಡೆಯಲಿದೆ.
ಜಿಲ್ಲೆಯಲ್ಲಿ 1200 ಪ್ರಾಥಮಿಕ ಶಾಲಾ ಶಿಕ್ಷಕರಿದ್ದು, ಇಲ್ಲಿಯೂ 4 ಸ್ಥಾನಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದು ಈ ಬಾರಿಯ ಚುನಾವಣೆಯ ವಿಶೇಷವಾಗಿದೆ. ಅವಿರೋಧವಾಗಿ ಆಯ್ಕೆಯಾದವರು: ಸಿ.ಜಿ.ಚೇತನ್, ಕೆ.ಆರ್.ರಾಮಪ್ಪ, ಆರ್.ಅವಿನ್, ಸಿ.ರವಿ, ಎಸ್.ಆರ್.ನರಸಿಂಹಮೂರ್ತಿ, ಪಿ.ವಿ.ಕೃಷ್ಣರೆಡ್ಡಿ, ಆರ್.ಮೋಹನ್ ಕುಮಾರ್, ಜಿ.ಕೆ.ರುದ್ರಪ್ಪ, ಎಂ.ಬೊಮ್ಮಲಿಂಗಪ್ಪ, ಡಿ.ರವೀಂದ್ರ, ಎನ್.ಮಂಜುಳಾ, ವಿ.ಪ್ರಭಾಕರ್, ವಿ.ಲಕ್ಷ್ಮಣ, ಆರ್.ಮಾರುತಿ, ಎಸ್.ಆರ್.ನಾಗರಾಜ್, ಎಚ್.ಶಾಂತಕುಮಾರ್, ಸಿ.ಎಂ.ಮಲ್ಲೇಶಪ್ಪ, ಡಿ.ವಿ.ಸತೀಶ್, ಎಂ.ಸಿ.ಮನೋಜ್, ಕೆ.ಎಸ್.ಶ್ರೀಕಾಂತ್, ಅಂತೋಣಿರಾಜು, ಆರ್.ಪಿ.ಚಿದಾನಂದ, ಎ.ಟಿ.ಕಾಂತರಾಜು, ಕೆ.ಕೃಷ್ಣಮೂರ್ತಿ, ಸಿ.ಎಂ.ಧನಲಕ್ಷ್ಮಿ, ಡಿ.ಗಜಾನನ, ಆರ್.ಪಾಪಣ್ಣ, ಜಿ.ಆರ್.ಬಸವರಾಜಪ್ಪ, ಎಸ್.ಜಿ.ಶ್ರೀನಿವಾಸ್, ಬಿ.ರಾಜೇಶ್, ಬಿ.ಉಮೇಶ್ ಕುಮಾರ್. ಐ.ಬಿ.ಮೋಹನ್ ಕುಮಾರ್, ಜಿ.ಎಂ.ಹರೀಶ್, ಆರ್.ಡಿ.ಕುಮಾರ್, ಜಿ.ಎಂ.ದಿನೇಶ್, ಎಂ.ಎಸ್.ಪ್ರಸಾದ್ ಬಾಬು, ಎಂ.ರವಿ, ಜಿ.ಸುಮತಿ.38 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದು ಮತ್ತು ನನ್ನ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿರುವುದು ಸಂಘದ ರಾಜ್ಯಾಧ್ಯಕ್ಷನಾಗಿ ಮತ್ತು ಜಿಲ್ಲಾಧ್ಯಕ್ಷನಾಗಿ ನಾನು ಮಾಡಿದ ಕೆಲಸವನ್ನು ನೌಕರರು ಮೆಚ್ಚಿರುವುದಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನದಲ್ಲಿ ನೌಕರರ ಕ್ಷೇಮಾಭಿವೃದ್ಧಿ ಜೊತೆಗೆ ಸಂಘದ ಅಭಿವೃದ್ಧಿಗೂ ಹೆಚ್ಚಿನ ಶ್ರಮ ಹಾಕಲಾಗುವುದು. ಉಳಿದ ಅಭ್ಯರ್ಥಿಗಳ ಚುನಾವಣೆಯಲ್ಲಿ ಕೂಡ ನೂರಕ್ಕೆ ನೂರರಷ್ಟು ನನ್ನ ಬೆಂಬಲಿಗರೇ ಆಯ್ಕೆಯಾಗುತ್ತಾರೆ ಎಂಬುದು ನನ್ನ ನಂಬಿಕೆ.
- ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷ.