ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕಾದ ಪೊಲೀಸರೇ ಅಪರಾಧ ಪ್ರಕರಣ ಮತ್ತು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಹೆಚ್ಚಾಗುತ್ತಿದೆ.

ಮಂಜುನಾಥ ಕೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕಾದ ಪೊಲೀಸರೇ ಅಪರಾಧ ಪ್ರಕರಣ ಮತ್ತು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಹೆಚ್ಚಾಗುತ್ತಿದೆ.

ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಮೇಲೆ ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 650ಕ್ಕೂ ಹೆಚ್ಚು ಮಂದಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಅಲ್ಲದೆ, 80ಕ್ಕೂ ಹೆಚ್ಚು ಮಂದಿ ಪೊಲೀಸರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

2023ರಲ್ಲಿ 188, 2024ರಲ್ಲಿ 242 ಮತ್ತು 2025ರಲ್ಲಿ 236 ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಿರುವುದು ಪೊಲೀಸರ ಅಂಕಿ-ಅಂಶಗಳಿಂದ ಬೆಳಕಿಗೆ ಬಂದಿದೆ. ಡಿಎಸ್‌ಪಿಯಿಂದ ಹಿಡಿದು ಎಪಿಸಿವರೆಗೂ ಒಟ್ಟು 666 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಅಮಾನತುಗೊಳಿಸಲಾಗಿದೆ. ಅದೇ ರೀತಿ 2024ರಲ್ಲಿ 44 ಮತ್ತು 2025 ರಲ್ಲಿ 42 ಒಟ್ಟು 86 ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಡಕಾಯಿತಿ, ದರೋಡೆ, ಅಪಹರಣ ಮತ್ತು ಸುಲಿಗೆಯಂತಹ ಗಂಭೀರ ಅಪರಾಧಗಳಲ್ಲಿ 86 ಮಂದಿ ಪೊಲೀಸರು ಭಾಗಿಯಾಗಿದ್ದಾರೆ.

ಕೆಲ ಪ್ರಮುಖ ಪ್ರಕರಣಗಳ ವಿವರ

₹1.7 ಕೋಟಿ ದರೋಡೆ ಕೇಸಲ್ಲಿ ಪಿಸಿ ಅಮಾನತು:

ಎಟಿಎಂಗೆ ತುಂಬಲು ಕೊಂಡೊಯ್ಯುತ್ತಿದ್ದ ₹7.11 ಕೋಟಿ ನಗದು ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಬೆಂಗಳೂರಿನ ಗೋವಿಂದಪುರ ಠಾಣೆ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯ್ಕ್‌ನನ್ನು ಅಮಾನತು ಮಾಡಲಾಗಿತ್ತು. ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಪೂರ್ವ ವಿಭಾಗದ ಡಿಸಿಪಿ ಅಣ್ಣಪ್ಪ ನಾಯ್ಕ್‌ನನ್ನು ಕಳೆದ ನವೆಂಬರ್‌ನಲ್ಲಿ ಅಮಾನತು ಮಾಡಿದ್ದರು.

2.ಪ್ರೊಬೆಷನರಿ ಪಿಎಸ್ಐ ಅಮಾನತು:

ಹಾವೇರಿ ಜಿಲ್ಲೆಯ ಹಂಸಭಾವಿ ಪೊಲೀಸ್ ಠಾಣೆ ಪ್ರೊಬೆಷನರಿ ಪಿಎಸ್ಐ ಆಗಿದ್ದ ಮಾಳಪ್ಪ ಚಿಪ್ಪಲಕಟ್ಟಿ ಅವರು, ದಾವಣಗೆರೆಯಲ್ಲಿ ಚಿನ್ನಾಭರಣ ತಯಾರಕರೊಬ್ಬರ ಮೇಲೆ ನಡೆದ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ, ಇತರೆ ಆರೋಪಿಗಳೊಂದಿಗೆ ಸೇರಿ 78 ಗ್ರಾಂ. ಚಿನ್ನ ದೋಚಿದ ಆರೋಪದ ಮೇಲೆ ಬಂಧಿತರಾಗಿದ್ದರು. ಬಳಿಕ ಅವರನ್ನು ಕಳೆದ ನವೆಂಬರ್‌ನಲ್ಲಿ ಅಮಾನತು ಮಾಡಲಾಗಿತ್ತು.

3.ಆರೋಪಿಗಳ ಜತೆ ಪಾರ್ಟಿ 11 ಮಂದಿ ಅಮಾನತು:

ಆರೋಪಿಗಳ ಜತೆ ಪೊಲೀಸರು ಪಾರ್ಟಿ ಮಾಡಿರುವ ಫೋಟೊಗಳು ಪತ್ತೆಯಾಗಿತ್ತು. ಈ ಬಗ್ಗೆ ಆಂತರಿಕ ತನಿಖೆ ನಡೆಸಿದಾಗ ಪೊಲೀಸರು ಆರೋಪಿಗಳ ಜತೆಗೆ ಸ್ನೇಹ ಸಂಪಾದಿಸಿರುವುದು ಗೊತ್ತಾಗಿತ್ತು. ಈ ಸಂಬಂಧ ಚಾಮರಾಜಪೇಟೆ ಠಾಣೆ ಇನ್‌ಸ್ಪೆಕ್ಟರ್ ಟಿ.ಮಂಜಣ್ಣ, ಹೆಡ್ ಕಾನ್‌ಸ್ಟೆಬಲ್‌ಗಳಾದ ರಮೇಶ್, ಶಿವರಾಜ್, ಕಾನ್‌ಸ್ಟೆಬಲ್‌ಗಳಾದ ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ, ಆನಂದ್, ಜೆ.ಜೆ.ನಗರ ಠಾಣೆಯ ಎಎಸ್‌ಐ ಕುಮಾರ್, ಹೆಡ್‌ಕಾನ್‌ಸ್ಟೆಬಲ್ ಆನಂದ್, ಸಿಬ್ಬಂದಿ ಬಸವನಗೌಡ ಸೇರಿ 11 ಮಂದಿಯನ್ನು ಅಮಾನತು ಮಾಡಲಾಗಿತ್ತು.

4.ಪಿಐ, ಎಎಸ್‌ಐ, ಪಿಸಿ ಅಮಾನತು:

ಚಿನ್ನಾಭರಣ ಮಾರಾಟಗಾರರಿಂದ ಲಂಚ ತೆಗೆದುಕೊಂಡ ಆರೋಪದಡಿ ಹಲಸೂರು ಗೇಟ್ ಠಾಣೆ ಇನ್‌ಸ್ಪೆಕ್ಟರ್‌ ಹನುಮಂತ ಭಜಂತ್ರಿ, ಎಎಸ್‌ಐ ಹಾಗೂ ಕಾನ್‌ಸ್ಟೆಬಲ್‌ ಅವರನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಅಮಾನತು ಮಾಡಲಾಗಿತ್ತು. ಕರ್ತವ್ಯ ಲೋಪ ಆರೋಪದಲ್ಲಿ ಕೋರಮಂಗಲ ಠಾಣೆ ಇನ್‌ಸ್ಪೆಕ್ಟರ್‌ ಲೂಯಿರಾಮ ರೆಡ್ಡಿ ಅವರನ್ನು ಕೂಡ ಸೆಪ್ಟೆಂಬರ್‌ನಲ್ಲಿ ಅಮಾನತು ಮಾಡಲಾಗಿತ್ತು.

5.ಮರಣೋತ್ತರ ಪರೀಕ್ಷೆಗೂ ಲಂಚ:

ಯುವತಿ ಮರಣೋತ್ತರ ಪರೀಕ್ಷೆ ಮಾಡಿಸಲು ಲಂಚ ಪಡೆದಿದ್ದ ಆರೋಪದಲ್ಲಿ ಬೆಳ್ಳಂದೂರು ಠಾಣೆ ಇನ್‌ಸ್ಪೆಕ್ಟರ್‌ ರಮೇಶ್ ರೊಟ್ಟಿ, ಪಿಎಸ್‌ಐ ಸಂತೋಷ್, ಕಾನ್‌ಸ್ಟೆಬಲ್‌ ಗೋರಕ್‌ನಾಥ್‌ ಅವರನ್ನು ಕಳೆದ ನವೆಂಬರ್‌ನಲ್ಲಿ ಅಮಾನತುಗೊಳಿಸಲಾಗಿತ್ತು. ಈ ರೀತಿಯ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಮೇಲೆ ಹಲವು ಪೊಲೀಸರನ್ನು ಅಮಾನತು ಮಾಡಲಾಗಿದೆ.

-ಬಾಕ್ಸ್‌-

ಪೊಲೀಸರ ಮೇಲಿನ ವಿಶ್ವಾಸ ಕುಗ್ಗುತ್ತಿದೆ

ಆರೋಪಿಗಳ ಪತ್ತೆ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕಲ್ಪಿಸುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಮಹತ್ತರವಾದ ಜವಾಬ್ದಾರಿ ಹೊತ್ತಿರುವ ಆರಕ್ಷಕರೇ ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಅಮಾನತು ಆಗುತ್ತಿರುವುದು ಪೊಲೀಸರ ಮೇಲೆ ಸಾರ್ವಜನಿಕರಿಗೆ ಇರುವ ವಿಶ್ವಾಸ ಕುಗ್ಗಿಸುತ್ತಿದೆ. ಜತೆಗೆ ರಕ್ಷಕರೇ ಭಕ್ಷಕರಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಉಂಟು ಮಾಡಿದೆ.

-ಬಾಕ್ಸ್-

ಕಳೆದೆ ಮೂರು ವರ್ಷಗಳಲ್ಲಿ ಅಮಾನತು ಆದ ಪೊಲೀಸರ ವಿವರ:

ಅಮಾನತು202320242025

ಡಿಎಸ್‌ಪಿ-0403

ಪಿಐ-2828

ಪಿಎಸ್‌ಐ-4219

ಎಆರ್‌ಎಸ್‌ಐ-0909

ಎಎಸ್‌ಐ-1016

ಸಿಎಚ್‌ಸಿ -6571

ಸಿಪಿಸಿ -6659

ಎಎಚ್‌ಸಿ -0812

ಎಪಿಸಿ -1119

ಒಟ್ಟು188242236

-ಬಾಕ್ಸ್‌-

2 ವರ್ಷದಲ್ಲಿ ಪೊಲೀಸರ ಮೇಲೆ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ:

ಅಮಾನತು20242025

ಡಿಎಸ್‌ಪಿ0102

ಪಿಐ0402

ಪಿಎಸ್‌ಐ0810

ಎಆರ್‌ಎಸ್‌ಐ0200

ಎಎಸ್‌ಐ0102

ಸಿಎಚ್‌ಸಿ 0511

ಸಿಪಿಸಿ1412

ಎಎಚ್‌ಸಿ0503

ಎಪಿಸಿ0400

ಒಟ್ಟು4442