ಮಡಿಕೇರಿ: ಕೊಡಗು ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2025ನೇ ವರ್ಷದ ಅತ್ಯುತ್ತಮ ವರದಿಗಳಿಗಾಗಿನ ಪ್ರಶಸ್ತಿಗಳು ಘೋಷಣೆಯಾಗಿದೆ.
ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಅತ್ಯುತ್ತಮ ಮಾನವೀಯ ವರದಿಗಾಗಿ ತಮ್ಮ ಮಾತೃಶ್ರೀ ರಾಜಲಕ್ಷ್ಮಿ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯು ಶಕ್ತಿ ಪತ್ರಿಕೆಯಲ್ಲಿ ಪ್ರಕಟಿತ ನಿಸ್ವಾರ್ಥ ಸೇವೆ ಮೂಲಕ ಮೂಕ ಪ್ರಾಣಿಗಳಿಗೆ ಆಸರೆಯಾದ ಭವಾನಿ ಎಂಬ ಶೀರ್ಷಿಕೆ ವರದಿಗಾಗಿ ಅಶ್ರಫ್ ಕರಡ ಅವರಿಗೆ ಲಭಿಸಿದೆ.ಸಮಾಜ ಸೇವಕ ನಾಪಂಡ ಮುತ್ತಪ್ಪ ಅವರು ಮಾತ್ರಶ್ರೀ ನಾಪಂಡ ಬೋಜಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ರಾಜಕೀಯ ವರದಿಗಾಗಿನ ದತ್ತಿ ಪ್ರಶಸ್ತಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ‘ಜನಸಂಖ್ಯೆಯೇ ಕೊಡಗು ಎಂ.ಪಿ. ಸ್ಥಾನಕ್ಕೆ ಉರಳಾಯಿತೇ’ ಎಂಬ ಶೀರ್ಷಿಕೆಯ ವರದಿಗಾಗಿ ಎಸ್ .ಜಿ. ಉಮೇಶ್ ಅವರಿಗೆ ಸಂದಿದೆ.ಸಮಾಜ ಸೇವಕ ನಾಪಂಡ ಮುದ್ದಪ್ಪ ಅವರು ದೃಶ್ಯ ವಾಹಿನಿಯಲ್ಲಿ ಪ್ರಸಾರವಾದ ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಸಂಬಂಧಿಸಿದ ಅತ್ಯುತ್ತಮ ವರದಿಗಾಗಿ ತಮ್ಮ ತಂದೆ ದಿ. ನಾಪಂಡ ಮುತ್ತಣ್ಣ ಸ್ಮರಣಾರ್ಥ ನೀಡಿರುವ ದತ್ತಿ ಪ್ರಶಸ್ತಿಯು ಟಿವಿ 1 ಮಾಧ್ಯಮದಲ್ಲಿ ಪ್ರಸಾರವಾದ ಬಾರಿಕಾಡಿನಲ್ಲಿ ಹಾರಿ ಹೋದ ಆದಿವಾಸಿಗಳ ಸೂರು. ಶೀರ್ಷಿಕೆಯ ವರದಿಗೆ ಸಂದಿದೆ.ಕೊಡಗು ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮತ್ತು ಅಂಜನ್ ಪ್ರಸಾದ್ ಅವರು ಬಿ.ಆರ್. ಶಶಿರಮ್ಮ ಮತ್ತು ಬಿ.ಟಿ. ರಾಮದಾಸ ಶೆಟ್ಟಿ ಅವರ ಜ್ಞಾಪಕಾರ್ಥ ಸ್ಫಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿಗಾಗಿನ ದತ್ತಿ ಪ್ರಶಸ್ತಿಯು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಮೂಲಭೂತ ಸೌಕರ್ಯಗಳಿಲ್ಲದೆ ನಲುಗುತ್ತಿರುವ ಮುಕ್ಕೋಡ್ಲು ಎಂಬ ಶೀರ್ಷಿಕೆಯ ವರದಿಗಾಗಿ ಕುಡೆಕಲ್ ಸಂತೋಷ್ ಅವರಿಗೆ ಸಂದಿದೆ.ಕೊಡಗು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರು ತಮ್ಮ ಪೋಷಕರಾದ ದಿ. ಮೀರಾ ಕಾಮತ್ ಮತ್ತು ದಿ. ಎಂ.ಜಿ. ಪದ್ಮನಾಭ ಕಾಮತ್ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದೖಶ್ಯ ವಾಹಿನಿಯಲ್ಲಿ ಪ್ರಸಾರವಾದ ಅತ್ಯುತ್ತಮ ಮಾನವೀಯ ವರದಿಗಾಗಿನ ಪ್ರಶಸ್ತಿಯು ಕೊಡಗು ಚಾನಲ್ ಮಾಧ್ಯಮದಲ್ಲಿ ಪ್ರಸಾರವಾದ ‘ರಸ್ತೆಗಾಗಿ ಅಂಗಲಾಚುತ್ತಿದೆ ವಿಕಲಚೇತನ ಕುಟುಂಬ’ ಶೀರ್ಷಿಕೆಯ ವರದಿಗಾಗಿ ಟಿ.ಜೆ. ಪ್ರವೀಣ್ ಕುಮಾರ್ ಅವರಿಗೆ ಸಂದಿದೆ.ತಿಪಟೂರಿನ ಕೆ.ಎಂ. ಭಾಗೀರಥಿ ಮಹಂತೇಶ್ ಅವರು ಹಿರಿಯ ಪತ್ರಕರ್ತ ಕೆ.ಬಿ. ಮಹಾಂತೇಷ್ ಅವರ ಸ್ಮರಣಾರ್ಥ ಸ್ಫಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗಾಗಿನ ದತ್ತಿ ಪ್ರಶಸ್ತಿಯು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಐಸ್ ಹಾಕಿಯಲ್ಲಿ ವಿದ್ಯಾರ್ಥಿನಿ ಆರ್ಯ ಛಾಪು’ ಎಂಬ ಶೀರ್ಷಿಕೆಯ ವರದಿಗಾಗಿ ಸೋಮವಾರಪೇಟೆಯ ಡಿ.ಪಿ. ಲೋಕೇಶ್ ಅವರಿಗೆ ಸಂದಿದೆ.ವಿರಾಜಪೇಟೆಯ ಸಮಾಜ ಸೇವಕರಾದ ಮನೆಯಪಂಡ ಕಾಂತಿ ಸತೀಶ್ ಅವರು ಅತ್ಯುತ್ತಮ ಕೃಷಿ ವರದಿಗೆ ನೀಡಿರುವ ದತ್ತಿ ನಿಧಿ ಪ್ರಶಸ್ತಿ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘57 ತಳಿಯ ಭತ್ತ ನಾಟಿ-ಮಾದರಿಯಾದ ಹೊದೂರು ಗ್ರಾಮದ ರೈತ ರವಿಶಂಕರ್’ ಎಂಬ ಶೀರ್ಷಿಕೆಯ ವರದಿಗಾಗಿ ನಿನೋದ್ ಮೂಡಗದ್ದೆ ಅವರಿಗೆ ಸಂದಿದೆ.ಗುಡ್ಡೆಹೂಸೂರಿನ ಹಿರಿಯ ಛಾಯಾಗ್ರಾಹಕರಾದ ಗುಡ್ಡೆಮನೆ ವಿಶು ಕುಮಾರ್ ಅವರು ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿಗಾಗಿನ ಪ್ರಶಸ್ತಿಯು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಸೂರಿಗಾಗಿ ವೃದ್ಧೆಯ ಪ್ರಾರ್ಥನೆ’ ಶೀರ್ಷಿಕೆಯ ವರದಿಗಾಗಿ ಸುಂಟಿಕೊಪ್ಪದ ಸುನೀಲ್ ಎಂ.ಎಸ್. ಅವರಿಗೆ ಸಂದಿದೆ.
ಜು.1ರಂದು ಮಡಿಕೇರಿಯ ಪತ್ರಿಕಾಭವನದಲ್ಲಿ ಬೆಳಗ್ಗೆ 10.30ಕ್ಕೆ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ನೆಲ್ಯಹುದಿಕೇರಿಯ ಗ್ರಾಪಂ ಮಾಜಿ ಅಧ್ಯಕ್ಷ, ಸಮಾಜ ಸೇವಕ ಸಾಬು ವಗೀ೯ಸ್, ಪ್ರಶಸ್ತಿ ಪ್ರದಾನ ಮಾಡುವರು. ಸಂಘದ ಜಿಲ್ಲಾಧ್ಯಕ್ಷ ಅನಿಲ್ ಎಚ್.ಟಿ., ಕೊಡಗು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಸಂಘದ ಖಜಾಂಚಿ ಟಿ.ಕೆ. ಸಂತೋಷ್, ಸಂಘದ ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್, ಕ್ಷೇಮಾಭಿವೖದ್ದಿ ಸಮಿತಿ ಅಧ್ಯಕ್ಷ ಜಿ.ವಿ. ರವಿ ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಮಾಹಿತಿ ನೀಡಿದ್ದಾರೆ.