ಧಾರವಾಡ:
ಗ್ರಂಥಾಲಯಗಳು ಸಂಶೋಧಕರಿಗೆ ಜ್ಞಾನದ ಹೊಸ ಬೆಳಕು ನೀಡುವ ಹೆಬ್ಬಾಗಿಲುಗಳು ಎಂದು ಪ್ರೊ. ಕೆ.ಆರ್. ದುರ್ಗಾದಾಸ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಪ್ರೊ. ಎಂ.ಆರ್. ಕುಂಬಾರ ದತ್ತಿ ಕಾರ್ಯಕ್ರಮದಲ್ಲಿ “ಸಂಶೋಧನೆಯಲ್ಲಿ ಗ್ರಂಥಾಲಯಗಳ ಪಾತ್ರ” ಕುರಿತು ಉಪನ್ಯಾಸ ನೀಡಿದ ಅವರು, ಬ್ರಿಟಿಷರು ಆಧುನಿಕ ಶಿಕ್ಷಣ ಪದ್ಧತಿ ಜಾರಿಗೆ ತಂದಂತೆ ಸಂಶೋಧನಾ ಕಾರ್ಯದಲ್ಲೂ ತೊಡಗಿದರು. ತದನಂತರ ಗ್ರಂಥಾಲಯಗಳು ಅಸ್ತಿತ್ವಕ್ಕೆ ಬಂದವು. ಕನ್ನಡ ಸಂಶೋಧನೆಗೆ ನಾಂದಿ ಹಾಡಿದವರು ಪಾಶ್ಚಾತ್ಯರೇ ಎಂದರು.
ತಾಳೆಗರಿಯಲ್ಲಿ ದಾಖಲಾಗಿದ್ದ ಹಳಗನ್ನಡ ಕಾವ್ಯಗಳು ಮುದ್ರಣ ಸೌಕರ್ಯ ಪ್ರಾರಂಭವಾದ ಆನಂತರ ಗ್ರಂಥಾಲಯಗಳಲ್ಲಿ ದೊರಕುವಂತಾಯಿತು. ಇದು ಸಂಶೋಧನಕಾರರಿಗೆ ಒಂದು ವರದಾನವೆಂದೇ ಹೇಳಬಹುದು. ಗ್ರಂಥ, ಪತ್ರಿಕೆ ಮುದ್ರಣಕ್ಕೆ ಕಾರಣರಾದವರು ಪಾಶ್ಚಾತ್ಯ ಮಿಷನರಿಗಳಾದ ಮೊಗ್ಲಿಂಗರಿಗೆ ಸಲ್ಲುತ್ತದೆ. ಮಂಗಳೂರು ಸಮಾಚಾರ ಕನ್ನಡದ ಮೊದಲ ಪತ್ರಿಕೆ ಪ್ರಾರಂಭವಾದಾಗ ಸಂಶೋಧಕರ ಅಧ್ಯಯನಕ್ಕೆ ಅನುಕೂಲವಾಯಿತು ಎಂದು ಹೇಳಿದರು.ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ. ಸಂಘವು 10 ವರ್ಷದ ಹಿಂದೆ ಗ್ರಂಥಪಾಲಕರ ಸಮ್ಮೇಳನ ಆಯೋಜಿಸಿತ್ತು. ಇದೀಗ ಮೇ ತಿಂಗಳಲ್ಲಿ ಆಯೋಜಿಸುವ ಚಿಂತನೆ ಇದೆ ಎಂದರು.
ಡಾ. ಐ.ಆರ್. ನಾಗನಗೌಡರ ಹಾಗೂ ದತ್ತಿ ದಾನಿಗಳ ಪರವಾಗಿ ಡಾ. ಎಸ್.ಎಲ್. ಸಂಗಮ ಮಾತನಾಡಿದರು. ವೀರಣ್ಣ ಒಡ್ಡೀನ ಕಾರ್ಯಕ್ರಮ ನಿರೂಪಿಸಿದರು. ಡಾ. ಮಹೇಶ ಧ. ಹೊರಕೇರಿ ವಂದಿಸಿದರು. ಆರಾಧ್ಯ ಪ್ರಾರ್ಥಿಸಿದರು. ಶ್ರೀನಿವಾಸ ವಾಡಪ್ಪಿ, ಮಹಾಲಿಂಗಪ್ಪ ಕುಂಬಾರ, ಡಾ. ಡಿ.ಬಿ. ಬಿರಾದಾರ, ಡಾ. ಮಾಳವಾಡ, ಸತ್ಯಬೋಧ ಸವಣೂರ, ಡಾ. ಬಂಕಾಪುರ ಹಾಗೂ ಡಾ. ಎಂ.ಆರ್. ಕುಂಬಾರ ಅವರ ಅಪಾರ ಶಿಷ್ಯ ಬಳಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.