ಸಾರಾಂಶ
ನಿವೃತ್ತಿ ವೇಳೆ ದೊರೆತ ಹಣದಿಂದ ರಾಮಪ್ಪ ಹೋಟೆಲ್ ನಡೆಸುತ್ತಿದ್ದು, ಹಫ್ತಾ ಕೊಡುತ್ತಿಲ್ಲ ಎಂದು ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಸೇಡಿನಿಂದ ಮಹಿಳೆ ಮಕ್ಕಳು ಎನ್ನದೆ ಹಲ್ಲೆ ಮಾಡಿದ್ದಾರೆ.
ಹುಬ್ಬಳ್ಳಿ:
ಮೆಸ್ ಬಂದ್ ಮಾಡಿಸುವ ವಿಚಾರವಾಗಿ ಪೊಲೀಸರಿಂದ ಹಲ್ಲೆಗೊಳಗಾಗಿ ಗಾಯಗೊಂಡು ಇಲ್ಲಿನ ಕೆಎಂಸಿಆರ್ಐನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿವೃತ್ತ ಸೈನಿಕ ರಾಮಪ್ಪ ಲಮಾಣಿ ಅವರನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.ಈ ವೇಳೆ ಮಾತನಾಡಿದ ರಾಮಪ್ಪ ತಪ್ಪೇ ಇಲ್ಲದಿದ್ದರೂ ತಮ್ಮ ಮೇಲೆ ಎದ್ದು ನಿಲ್ಲಲು ಬಾರದಂತೆ ಹಲ್ಲೆ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು.
ಈ ವೇಳೆ ಕೆಎಂಸಿಆರ್ಐನಲ್ಲಿ ಸಾಮಾನ್ಯ ವಾರ್ಡ್ನಲ್ಲಿ ಚಿಕಿತ್ಸೆ ನೀಡುತ್ತಿರುವುದಕ್ಕೆ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ವಿಶೇಷ ವಾರ್ಡ್ ನೀಡಿ ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ನಿವೃತ್ತಿ ವೇಳೆ ದೊರೆತ ಹಣದಿಂದ ರಾಮಪ್ಪ ಹೋಟೆಲ್ ನಡೆಸುತ್ತಿದ್ದು, ಹಫ್ತಾ ಕೊಡುತ್ತಿಲ್ಲ ಎಂದು ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಸೇಡಿನಿಂದ ಮಹಿಳೆ ಮಕ್ಕಳು ಎನ್ನದೆ ಹಲ್ಲೆ ಮಾಡಿದ್ದಾರೆ. ರಸ್ತೆ ಬಂದ್ ಮಾಡಿ ದಾಳಿ ಮಾಡಿದ ಸಾಕ್ಷಿಗಳನ್ನೂ ನಾಶಪಡಿಸಿದ್ದಾರೆ. ಈ ವೇಳೆ ಸಿಸಿ ಕ್ಯಾಮೆರಾ, ಮೊಬೈಲ್ ಒಡೆದಿದ್ದಾರೆ. ರಕ್ಷಕರೇ ರಾಕ್ಷಸರಾದರೆ ಹೇಗೆ? ಏನ್ ಅಪರಾಧ ಅವರದ್ದು, ದೇಶದ ರಕ್ಷಣೆ ತೊಡಗಿದವರ ಮೇಲೆ ಹೀಗಾದರೆ ಹೇಗೆ?. ಪ್ರಕರಣದಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದೆ. ಈ ಪ್ರಕರರಣದಲ್ಲಿ 15ರಿಂದ 20 ಜನರಿದ್ದರು. ಅವರೆಲ್ಲರ ಮೇಲೆ ಪೊಲೀಸ್ ಆಯುಕ್ತರು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.